ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನಯಾನ ಆರಂಭಿಸಿದ ಇಂಡಿಗೋ, ಸಮಯ ಹೀಗಿದೆ
ಹುಬ್ಬಳ್ಳಿ, ನವೆಂಬರ್ 11: ಹುಬ್ಬಳ್ಳಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಸೋಮವಾರದಿಂದ ಆರಂಭಾಗಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜೊತೆಯಾಗಿ ವರ್ಚುವಲ್ ಸಭೆಯ ಮೂಲಕ ದೆಹಲಿ-ಹುಬ್ಬಳ್ಳಿ, ಹುಬ್ಬಳ್ಳಿ- ದೆಹಲಿ ನಡುವಿನ ನೇರ ವಿಮಾನಯಾನ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದಾರೆ.
ಈ ವಿಮಾನಯಾನ ಸೇವೆಯಿಂದ ಹುಬ್ಬಳ್ಳಿ- ಧಾರವಾಡ ಹಾಗೂ ಉತ್ತರ ಕರ್ನಾಟಕ ಜನರ ಬಹುದಿನಗಳ ಕನಸಾಗಿತ್ತು, ಇದೀಗ ನನಸಾಗಿದೆ. ಈ ಮೊದಲು ಹುಬ್ಬಳ್ಳಿಯಿಂದ ರಾಷ್ಟ್ರ ರಾಜಧಾನಿಗೆ ಹೋಗಬೇಕೆಂದರೆ ಮುಂಬೈ ಅಥವಾ ದೆಹಲಿ ಮಾರ್ಗಗಳ ಮೂಲಕ ತೆರಳಬೇಕಿತ್ತು. ಹುಬ್ಬಳ್ಳಿಯಿಂದ ದೆಹಲಿಗೆ ನೇರ ಸಂಪರ್ಕ ದೊರೆತಿರುವುದು ನಗರದ ಪ್ರಗತಿಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಿದೆ ಎಂದು ಜೋಶಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಕ್ಷೇತ್ರ ಹುಡುಕುತ್ತಾ ಕೋಲಾರಕ್ಕೆ; ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಲೇವಡಿ
ಹುಬ್ಬಳ್ಳಿಯಿಂದ ಈ ವಿಮಾನದ ಮೂಲಕ ಕೇವಲ 2 ಗಂಟೆ 30 ನಿಮಿಷದಲ್ಲಿ ದೆಹಲಿ ತಲುಪಬಹುದಾಗಿದೆ. ಪ್ರತಿ ನಿತ್ಯ ಈ ಸೇವೆ ಲಭ್ಯವಿರುವುದು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಈ ನನ್ನ ಪ್ರಸ್ತಾವನೆಗೆ ಅನುಮೋದನೆ ನೀಡಿ ವಿಮಾನಯಾನ ಸೇವೆ ಪ್ರಾರಂಭಿಸುವ ನಿರ್ದಾರ ಕೈಗೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಾಗೂ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋ ಸಂಸ್ಥೆಯ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಭಾಗದ ಜನರಿಗೆ ಅನುಕೂಲವಾಗುವಂತೆ ಹುಬ್ಬಳ್ಳಿ-ಅಹಮದಾಬಾದ್ ಸಂಪರ್ಕವನ್ನು ಆದಷ್ಟು ಬೇಗ ಮಾಡುವಂತೆ ಜೋಶಿಯವರು ಇಂಡಿಗೋ ಅಧಿಕಾರಿಗಳಿಗೆ ಮನವಿ ಮಾಡಿದರು.
ದೆಹಲಿ ಸಂಪರ್ಕ ಆರಂಭವಾಗಿರುವುದರಿಂದ ಇದೀಗ ಸ್ಥಗಿತಗೊಂಡಿರುವ ಹುಬ್ಬಳ್ಳಿಯ ಕಾರ್ಗೋ ಸೇವೆಯನ್ನು ಪುನರರಾಂಬಿಸುವಂತೆ ಸೂಚಿಸಿದರು. ಈ ಸಮಯದಲ್ಲಿ ಇಂಡಿಗೋ ಸಂಸ್ಥೆಯ ಅಕ್ಷಯ ಪಾಟೀಲ ಅವರು ವಿಮಾನ ಹಾರಾಟಕ್ಕೆ ಮೊದಲು ಪ್ರಯಾಣಿಕರನ್ನುದ್ದೇಶಿಸಿ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು.
1700 ಕಿಮೀ ಅಂತರದ ಹುಬ್ಬಳ್ಳಿಯಿಂದ ದೆಹಲಿಗೆ ಸಂಚರಿಸಲು ಹುಬ್ಬಳ್ಳಿಯ ಜನಕ್ಕೆ ಇದುವರೆಗೆ ಎರಡೂವರೆ ದಿವಸ ಬೇಕಾಗಿತ್ತು. ಆದರೆ ಈಗ ಕೇವಲ ಎರಡೂವರೆ ಗಂಟೆಗಳಲ್ಲೆ ತಲುಪಬಹುದಾದ ವ್ಯವಸ್ಥೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮಾಡಿಕೊಟ್ಟಿದ್ದಾರೆ. ನಾವೆಲ್ಲರೂ ಅವರಿಗೆ ಅಭಾರಿಯಾಗಿದ್ದೇವೆ ಎಂದು ವಿಮಾನದಲ್ಲಿದ್ದ ಎಲ್ಲಾ ಸಹ ಪ್ರಯಾಣಿಕರು ತಮ್ಮ ಅನಿಸಿಕೆಗಳನ್ನು ಸಚಿವರಲ್ಲಿ ಹಂಚಿಕೊಂಡು ಸಂತಸಪಟ್ಟರು.
ಸಮಯ ಹೀಗಿದೆ
ಇಂಡಿಗೋ ವಿಮಾನ ಪ್ರತಿದಿನ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಸಂಖ್ಯೆ 6ಇ 5625 ಬೆಳಿಗ್ಗೆ 10-00ಕ್ಕೆ ಹೊರಟು ಹುಬ್ಬಳ್ಳಿಯನ್ನು 12-45 ಕ್ಕೆ ತಲುಪಲಿದೆ. ಮರಳಿ ಮಧ್ಯಾಹ್ನ 1-15 ಕ್ಕೆ ಹುಬ್ಬಳ್ಳಿಯಿಂದ ಹೊರಟು 3-45ಕ್ಕೆ ದೆಹಲಿ ತಲುಪಲಿದೆ.