ತಾಕತ್ತಿದ್ದರೆ ಜಾತಿ ಸಮೀಕ್ಷೆ ಬಿಡುಗಡೆ ಮಾಡಿ: ಸಿಎಂಗೆ ಈಶ್ವರಪ್ಪ ಸವಾಲ್
ಹುಬ್ಬಳ್ಳಿ, ಡಿಸೆಂಬರ್ 21:"ರಾಜ್ಯ ಸರ್ಕಾರ ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಸರ್ಕಾರಕ್ಕೆ ತಾಕತ್ತು ಇದ್ದರೆ ಜಾತಿ ಸಮೀಕ್ಷೆಯ ವರದಿ ಬಹಿರಂಗ ಮಾಡಲಿ," ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಸವಾಲು ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಪರಿವರ್ತನಾ ಯಾತ್ರೆಯ 50ನೇ ದಿನದ ಅಂಗವಾಗಿ ಬಿಜೆಪಿ ಆಯೋಜಿಸಿದ್ದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು.
ಇದೇ ಸಾಮವೇಶದಲ್ಲಿ ಮಾತನಾಡಿದ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಅಧಿಕಾರದ ಪಿತ್ತ ಇಳಿಸುವ ತಾಕತ್ತಿದೆ
"ಬಿಜೆಪಿ ಪರಿವರ್ತನಾ ಯಾತ್ರೆ ಜನರ ಅಭಿಮಾನದ ಯಾತ್ರೆ. ಸಿದ್ದರಾಮಯ್ಯನವರದ್ದು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ. ಸರ್ಕಾರಿ ರೊಕ್ಕದಲ್ಲಿ ಸಿಎಂ ಯಾತ್ರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಅಧಿಕಾರದ ಪಿತ್ತ ಇಳಿಸುವ ತಾಕತ್ತು ರಾಜ್ಯದ ಜನರಿಗೆ ಇದೆ. ಸಿದ್ದರಾಮಯ್ಯರನ್ನು ಕಂಡರೆ ಹೆದರಲು ಅವರೇನು ಭೂತವೇ?" ಎಂದು ಶಾಸಕ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಗಾಬರಿ
ಯಾತ್ರೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, "ಬಿಜೆಪಿಯ ಪರಿವರ್ತನಾ ಯಾತ್ರೆ ನೋಡಿ ಮುಖ್ಯಮಂತ್ರಿ ಗಾಬರಿಯಾಗಿದ್ದಾರೆ. ಇದುವರೆಗೆ ನಿದ್ದೆ ಮಾಡಿದ ಸಿದ್ದರಾಮಯ್ಯನವರೇ, ಚುನಾವಣೆ ಬಂದಾಗ ನವ ಕರ್ನಾಟಕ ನಿರ್ಮಾಣ ಮಾಡ್ತೀವಿ ಅಂತೀರಾ. ಇದು ಅತ್ಯಂತ ಭ್ರಷ್ಟ , ಜನ ವಿರೋಧಿ, ರೈತ ವಿರೋಧಿ ಸರ್ಕಾರ. ಸಿದ್ದರಾಮಯ್ಯ-ಪರಮೇಶ್ವರ ಉತ್ತರ- ದಕ್ಷಿಣ ಇದ್ದಂತೆ. ಕಾಂಗ್ರೆಸ್ ಸೋತಲ್ಲಿ ಪರಮೇಶ್ವರ, ಕಾಂಗ್ರೆಸ್ ಗೆದ್ದ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಯಾತ್ರೆ ಮಾಡುತ್ತಿದ್ದಾರೆ," ಎಂದು ಹೇಳಿದರು.

ಯೋಗಿಶ್ ಗೌಡ ಕೊಲೆ ಪ್ರಕರಣ ಮುಚ್ಚಿ ಹಾಕಲು ಯತ್ನ
"ಯೋಗಿಶ್ ಗೌಡ ಕೊಲೆ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ. ನಾಲ್ಕು ಜನರನ್ನ ಕಾಟಾಚಾರಕ್ಕೆ ಬಂಧಿಸಿ ಪ್ರಕರಣ ಮರೆಮಾಚಲಾಗುತ್ತಿದೆ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಕೊಲೆ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ," ಎಂದು ಶೆಟ್ಟರ್ ಆರೋಪಿಸಿದರು.
"ಸಿದ್ದರಾಮಯ್ಯನವರೇ ಹುಬ್ಬಳ್ಳಿ - ಧಾರವಾಡ ಅವಳಿ ನಗರಕ್ಕೆ ಏನು ಕೊಟ್ಟಿದ್ದೀರಿ ಹೇಳಿ ಹುಬ್ಬಳ್ಳಿಗೆ ಬನ್ನಿ. ಯಾವ ಪುರುಷಾರ್ಥಕ್ಕೆ ಹುಬ್ಬಳ್ಳಿಗೆ ಬರುತ್ತಿದ್ದೀರಿ. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡುವ ಅಧಿಕಾರ ಸಿಎಂಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಎಲ್ಲ ರೈತರ ಸಾಲ ಮನ್ನಾ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಅಂತ್ಯಕಾಲ ಬಂದಿದೆ. ಗುಜರಾತ್, ಹಿಮಾಚಲ ಪ್ರದೇಶದಂತೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಶತಃಸಿದ್ಧ," ಎಂದು ಅವರು ಭರವಸೆಯ ಮಾತುಗಳನ್ನಾಡಿದರು.

ಮಹಾದಾಯಿಗೆ ಕಾಂಗ್ರೆಸ್ ಬೆಂಕಿ
ಮಹಾದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿ ವಿಚಾರದ ಬಗ್ಗೆ ಮಾತನಾಡಿದ ಸಂಸದ ಪ್ರಹ್ಲಾದ್ ಜೋಶಿ, "ಸೋನಿಯಾ ಗಾಂಧಿ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಕೊಡಲ್ಲ ಎಂದಿದ್ದರು. ಯೋಜನೆಗೆ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ನವರು ಮಾಡುತ್ತಿದ್ದಾರೆ. ಇವತ್ತು ಬಿಜೆಪಿ ನಲ್ವತ್ತು ವರ್ಷಗಳ ವಿವಾದವನ್ನು ಬಗೆಹರಿಸಲು ಮುಂದಾಗಿದೆ. ಅಮಿತ್ ಷಾ ಮತ್ತು ಗೋವಾ ಸಿಎಂ ಜತೆ ರಾಜ್ಯ ನಾಯಕರು ಮಾತುಕತೆ ಮಾಡಿದ್ದೇವೆ," ಎಂದರು.
"ಕಾಂಗ್ರೆಸ್ ಸರ್ಕಾರ ಮತ್ತು ಸಮಾಜ ವಿದ್ರೋಹಿಗಳ ನಡುವೆ ದೋಸ್ತಿ ಹೆಚ್ಚಿದೆ. ಕಳ್ಳರಿಗೆ ಅನುಕೂಲವಾಗಲೆಂದು ರಾತ್ರಿ ಕರೆಂಟ್ ತೆಗೆಯುತ್ತಾರೆ. ಯಡಿಯೂರಪ್ಪನವರು ಜನಪರ ಹೋರಾಟದ ಮೂಲಕ ಮುಂದೆ ಬಂದಿದ್ದಾರೆ. ಅವರ ಮುಂದೆ ಸಚಿವ ಎಮ್.ಬಿ. ಪಾಟೀಲ್ ಏನೂ ಅಲ್ಲ," ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಮನೆಹಾಳರ ಪಕ್ಷ
"ಕಾಂಗ್ರೆಸ್ ಪಕ್ಷ ಮನೆಹಾಳರ ಪಕ್ಷ. ಕಾಂಗ್ರೆಸ್ ಪಕ್ಷ ಜನರನ್ನು ಒಡೆದು ಆಳುತ್ತದೆ.
ಒಡೆದು ಆಳುವುದೇ ಕಾಂಗ್ರೆಸ್ ಸಿದ್ದಾಂತ. ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ಕೊಲೆಗಳು ನಡೆದಿರುವ ರಾಜ್ಯ. ಕೊಲೆಗಳಿಗೆ ಮೊದಲ ಸ್ಥಾನ, ಭ್ರಷ್ಟಾಚಾರದಲ್ಲಿ ಎರಡನೆಯ ಸ್ಥಾನ ಪಡೆದಿದೆ. ರಾಜ್ಯವನ್ನು ಸಿ.ಎಂ ಕೊಲೆ, ಸುಲಿಗೆ ಅತ್ಯಾಚಾರಗಳ ರಾಜ್ಯ ಮಾಡಿದ್ದಾರೆ. ರಾಜ್ಯ ಅಭಿವೃದ್ದಿ ಆಗಬೇಕಾದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಿದೆ," ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು.

ಕರ್ನಾಟಕ ಕಾಶ್ಮೀರವಾಗ್ತಿದೆ
"ಬಿಜೆಪಿ ಪರಿವರ್ತನಾ ಯಾತ್ರೆಗೆ ಎಲ್ಲೆಡೆ ಭಾರಿ ಜನ ಬೆಂಬಲ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ ಕುರ್ಚಿ ಖಾಲಿ ಮಾಡುವ ಸಮಯ ಬಂದಿದೆ. ರಾಹುಲ್ ಗಾಂಧಿ ಕಾಲಿಟ್ಟಲ್ಲೆಲ್ಲ ಕಾಂಗ್ರೆಸ್ಗೆ ಸೋಲಾಗಿದೆ. ಕರ್ನಾಟಕ ಸಹ ಕಾಂಗ್ರೆಸ್ ಮುಕ್ತವಾಗಲಿದೆ. ಕೊಲೆಗಡುಕರ ಬೆಂಬಲಕ್ಕೆ ಕಾಂಗ್ರೆಸ್ ನಿಂತಿದೆ. ಕರ್ನಾಟಕ ಕಾಶ್ಮೀರವಾಗ್ತಿದೆ," ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ ರಾವ್ ಕಿಡಿಕಾರಿದ್ದಾರೆ.
"ರಾಜ್ಯದಲ್ಲಿ ರೈತರು ನೀರಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜನ ಕುಡಿಯಲು ನೀರು ಇಲ್ಲದೇ ಪರದಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ. ದಲಿತರ ಕೊಲೆ ಸುಲಿಗೆ ಅತ್ಯಾಚಾರ ನಡೆಯುತ್ತಿವೆ. ಇದೆಲ್ಲ ನಿಲ್ಲಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ," ಎಂದು ಅವರು ಅಭಿಪ್ರಾಯಪಟ್ಟರು.

ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ
"ರಾಜ್ಯ ಸರ್ಕಾರ ಜಾತಿ ಜಾತಿಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಸರ್ಕಾರಕ್ಕೆ ತಾಕತ್ತು ಇದ್ದರೆ ಜಾತಿ ಸಮೀಕ್ಷೆಯ ವರದಿ ಬಹಿರಂಗ ಮಾಡಲಿ. ಹಿಂದೂ, ಮುಸ್ಲಿಂ ಜನಗಳ ಮಧ್ಯೆ ಜಗಳ ಹಚ್ಚುವ ಕೆಲಸ ಸರ್ಕಾರ ಮಾಡುತ್ತಿದೆ. ರಾಜ್ಯದ ಜನರು ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳಿಸುವುದು ಶತಃಸಿದ್ದ. ಸಿದ್ದರಾಮಯ್ಯನವರೇ 2018ರ ಚುನಾವಣೆಯಲ್ಲಿ ಜನರು ವಿಧಾನಸೌಧದಿಂದ ನಿಮ್ಮನ್ನು ಹೊರಗೆಹಾಕ್ತಾರೆ. ಯಡಿಯೂರಪ್ಪನವರು ವಿಧಾನಸೌಧದ ಒಳಗಿರ್ತಾರೆ," ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ್ ಕೆ.ಎಸ್ ಈಶ್ವರಪ್ಪ ಗುಡುಗಿದ್ದಾರೆ.












Click it and Unblock the Notifications