ಡಿಸೆಂಬರ್ 15ರೊಳಗೆ ಕಳಸಾ ಬಂಡೂರಿ ಸಮಸ್ಯೆ ಬಗೆಹರಿಸುತ್ತೇನೆ : ಯಡಿಯೂರಪ್ಪ
ಹುಬ್ಬಳ್ಳಿ, ನವೆಂಬರ್ 15 : ಮಹದಾಯಿ ಕಳಸಾ ಬಂಡೂರಿ ಸಮಸ್ಯೆ ಕುರಿತು ಗೋವಾ ಮುಖ್ಯಮಂತ್ರಿ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರ ಜತೆ ಚರ್ಚಿಸಿ ಮುಂದಿನ ಡಿ.15ರೊಳಗೆ ಬಗೆಹರಿಸುತ್ತೇನೆ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ನಗರದ ಕೇಶ್ವಾಪುರದಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ನಿವಾಸದ ಎದುರು ರೈತ ಸೇನಾ ಕರ್ನಾಟಕ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಧರಣಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ರೈತರ ಮನವೊಲಿಸಿ ಮಾತನಾಡಿದ ಅವರು ಕಳಸಾ ಬಂಡೂರಿ ಸಮಸ್ಯೆಯನ್ನು ಬಗೆಹರಿಸುವಾದಿ ಹೇಳಿದರು.

'ಯಾರೇ ವಿರೋಧ ಮಾಡಿದರೂ ಗೋವಾ ಮುಖ್ಯಮಂತ್ರಿಗಳಿಂದ ಮಹದಾಯಿ ಯೋಜನೆ ಅನುಷ್ಠಾನ ಕುರಿತು ಸರ್ಕಾರಿ ಆದೇಶ ಹೊರಡಿಸಿಕೊಂಡು ನಿಮ್ಮ ಮುಂದೆ ಬರುತ್ತೇನೆ' ಎಂದು ಅವರು ಪ್ರತಿಭಟನಾ ನಿರತ ರೈತರಿಗೆ ವಾಗ್ದಾನ ನೀಡಿದ್ದಾರೆ.
ಕಳಸಾ ಬಂಡೂರಿ ಸಮಸ್ಯೆ ಉಲ್ಭಣಿಸಲು ಕಾಂಗ್ರೆಸ್ ಕಾರಣ ಎಂದ ಯಡಿಯೂರಪ್ಪ 'ಗೋವಾ ಮುಖ್ಯಮಂತ್ರಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮನವೊಲಿಸುವುದು ನನ್ನ ಜವಾಬ್ದಾರಿ. ಸಮಸ್ಯೆ ಉಲ್ಬಣ ಆಗಲು ಕಾಂಗ್ರೆಸ್ ಕಾರಣ ಎಂಬುದು ಜಗತ್ತಿಗೆ ಗೊತ್ತಿದೆ. ಗೋವಾ ವಿಧಾನಸಭೆ ಚುನಾವಣೆ ವೇಳೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಒಂದು ಹನಿ ನೀರು ಕರ್ನಾಟಕಕ್ಕೆ ಕೊಡಲ್ಲ ಎಂದಿದ್ದರು' ಎಂದು ಹೇಳಿದ್ದಾರೆ.
'ಕಳಸಾ ಬಂಡೂರಿ ಸಮಸ್ಯೆ ಸುಪ್ರೀಂ ಕೋರ್ಟ್, ನ್ಯಾಯಮಂಡಳಿ ಮುಂದೆ ಹೋಗಲು ಕಾಂಗ್ರೆಸ್ ನವರೇ ಕಾರಣ ಎಂದಿರುವ ಅವರು '7.5 ಟಿಎಂಸಿ ನೀರು ತೆಗೆದುಕೊಂಡು ನಿಮ್ಮ ಮುಂದೆ ಬರ್ತೀನಿ' ಎನ್ನುವ ಮೂಲಕ ಉತ್ತರ ಕರ್ನಾಟಕ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಯಡಿಯೂರಪ್ಪ ಅವರು ಭರವಸೆ ನೀಡಿದ ಬಳಿಕ ರೈತರು ಧರಣಿ ಅಂತ್ಯಗೊಳಿಸಿದ್ದಾರೆ.












Click it and Unblock the Notifications