ಹುಬ್ಬಳ್ಳಿ ಯುವಕರಿಂದ ವಿನೂತನ ರೀತಿಯಲ್ಲಿ ಚುನಾವಣಾ ಪ್ರಚಾರ
ಹುಬ್ಬಳ್ಳಿ, ಏಪ್ರಿಲ್ 16 : ಎಲ್ಲ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದು, ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಯೂಟ್ಯುಬ್, ಫೇಸ್ ಬುಕ್ ನಲ್ಲಿಯೂ ಪ್ರಚುರಪಡಿಸುತ್ತಿರುವುದು ಗೊತ್ತಿರುವ ವಿಷಯ. ಆದರೆ ಹುಬ್ಬಳಿಯಲ್ಲಿ ಆಮ್ ಆದ್ಮಿ ಬೆಂಬಲಿಗರು ಹೊಸ ರೀತಿಯಲ್ಲಿ ಪ್ರಚಾರಕ್ಕೆ ಮುಂದಾಗಿರುವುದು ಹೊಸ ವಿಷಯ.
ಹೌದು, ಹುಬ್ಬಳ್ಳಿಯಲ್ಲಿ ಯುವಪಡೆಯೊಂದು ಸ್ವಚ್ಛ ರಾಜಕಾರಣ ಬೆಂಬಲಿಸುತ್ತಾ ವಿಭಿನ್ನ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸತತ ಮೂರು ದಿನಗಳಿಂದ ಹುಬ್ಬಳ್ಳಿಯ ಹಲವೆಡೆ ಫ್ಲಾಶ್-ಮಾಬ್ (ಬೀದಿ ನೃತ್ಯ) ಆಯೋಜಿಸಲಾಗಿದ್ದು, ಜನರ ಗಮನ ಸೆಳೆಯುತ್ತಿದೆ.
ಈ ಕಾರ್ಯಕ್ರಮಗಳು ಅಕ್ಷಯ ಪಾರ್ಕ್, ಶಿರೂರ ಪಾರ್ಕ್, ರಮೇಶ ಭವನ, ಗೋಪನಕೊಪ್ಪ ಮತ್ತು ಚೇತನಾ ಕಾಲನಿ ಸೇರಿದಂತೆ ಹುಬ್ಬಳ್ಳಿಯ ವಿವಿಧ ಕಡೆಗಳಲ್ಲಿ ನಡೆಯುತ್ತಿದೆ.

ವಿಶೇಷವೆಂದರೆ ಪ್ರಚಾರ ಮಾಡಿದವರು ಪಕ್ಷದ ಕಾರ್ಯಕರ್ತರಲ್ಲ, ಅವರೆಲ್ಲ ಆಮ್ ಆದ್ಮಿ ಸಿದ್ಧಾಂತ ಮೆಚ್ಚಿಕೊಂಡು ಬಂದವರು. ಬಹುತೇಕರು ಕಾಲೇಜು ವಿದ್ಯಾರ್ಥಿಗಳು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಮ್ ಆದ್ಮಿ ಅಭ್ಯರ್ಥಿ ಸಂತೋಷ ನರಗುಂದ ಮಾತನಾಡಿ, ಹುಬ್ಬಳ್ಳಿಯಲ್ಲಿ ಯುವ ಪ್ರತಿಭೆಗಳಿವೆ. ಅವಕಾಶಗಳಿಲ್ಲ, ಅವಕಾಶ ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಆ ಕೆಲಸ ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪಕ್ಷದ ಮುಖಂಡರಾದ ಬಸವರಾಜ ಮುದಿಗೌಡರ ಮಾತನಾಡಿ, ತಮ್ಮ ಹಕ್ಕುಗಳಿಗಾಗಿ ಚುನಾವಣೆಯಲ್ಲಿ ಯುವಕರು ಭಾಗವಹಿಸಬೇಕು. ಸಂತೋಷ್ ಅವರಂತಹ ವಿದ್ಯಾವಂತ ಮತ್ತು ಯುವನಾಯಕರು ಹುಬ್ಬಳ್ಳಿಯಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಬೇಕು ಎಂದರು.












Click it and Unblock the Notifications