ಹುಬ್ಬಳ್ಳಿ-ಧಾರವಾಡ ಪಾಲಿಕೆ ಮೀಸಲಾತಿ ಮತ್ತೆ ಹೈಕೋರ್ಟ್ಗೆ!
ಹುಬ್ಬಳ್ಳಿ, ಜುಲೈ 15; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಚಾರ ಮತ್ತೆ ಹೈಕೋರ್ಟ್ಗೆ ಹೋಗಿದೆ. ಮೀಸಲಾತಿ ಮತ್ತು ಮತದಾರರ ಹಂಚಿಕೆ ಅವೈಜ್ಞಾನಿಕವಾಗಿದೆ ಎಂದು ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ.
ಎರಡೂವರೆ ವರ್ಷಗಳಿಂದ ಮಹಾನಗರ ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳೇ ಇಲ್ಲ. ಎರಡು ದಿನದಲ್ಲಿ ಪಾಲಿಕೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗುವ ನಿರೀಕ್ಷೆ ಇತ್ತು. ಅಷ್ಟರಲ್ಲಿ ಮತ್ತೆ ಕೋರ್ಟ್ ಮೊರೆ ಹೋಗಲಾಗಿದೆ.
ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠಕ್ಕೆ ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು ದೂರು ನೀಡಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಕೋರ್ಟ್ ಸ್ವೀಕಾರ ಮಾಡಿದ್ದು, ಎರಡು ದಿನದಲ್ಲಿ ವಿಚಾರಣೆ ನಡೆಯುವ ನಿರೀಕ್ಷೆ ಇದೆ.
ಅರ್ಜಿ ವಿಚಾರಣೆ ಬಳಿಕ ಹೈಕೋರ್ಟ್ ನೀಡುವ ತೀರ್ಪಿನ ಮೇಲೆ ಚುನಾವಣೆ ನಡೆಯುವ ದಿನಾಂಕ ಘೋಷಣೆಯಾಗಲಿದೆ. ಇದರಿಂದಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಇನ್ನಷ್ಟು ದಿನ ವಿಳಂಬವಾಗುವ ಸಾಧ್ಯತೆ ಇದೆ.

ಏನಿದು ಮೀಸಲಾತಿ ವಿವಾದ?
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 67 ವಾರ್ಡ್ ಇತ್ತು. ಇದನ್ನು 82 ವಾರ್ಡ್ಗಳಾಗಿ ಪುನರ್ ರಚನೆ ಮಾಡಲಾಗಿದೆ. 82ರಲ್ಲಿ 40 ವಾರ್ಡ್ಗಳಿಗೆ ಮಹಿಳಾ ಮೀಸಲಾತಿ ಪ್ರಕಟಿಸಲಾಗಿದೆ. ನಾಲ್ಕು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ವಾರ್ಡ್ ಬರುತ್ತದೆ. ಪ್ರತಿ ವಿಧಾನಸಭಾ ವ್ಯಾಪ್ತಿಗೆ ಮಹಿಳಾ ಮೀಸಲಾತಿ ಪ್ರಕಟಿಸಬೇಕು ಎಂಬುದು ಒಂದು ಬೇಡಿಕೆ.

ಮತದಾರರ ಹಂಚಿಕೆ ವಿವಾದ
82 ವಾರ್ಡ್ಗಳಲ್ಲಿ 8,11,632 ಮತದಾರರು ಇದ್ದಾರೆ. ಮತದಾರರರನ್ನು ಎಲ್ಲಾ ವಾರ್ಡ್ಗಳಿಗೆ ಸರಿಯಾಗಿ ಹಂಚಿಕೆ ಮಾಡಬೇಕಿತ್ತು. ಆದರೆ ಕೆಲವು ವಾರ್ಡ್ಗಳಲ್ಲಿ 5-6 ಸಾವಿರ ಮತದಾರರು, ಕೆಲವು ವಾರ್ಡ್ಗಳಲ್ಲಿ 13-14 ಸಾವಿರ ಮತದಾರರು ಇದ್ದಾರೆ. ಇದು ಅವೈಜ್ಞಾನಿಕವಾಗಿದೆ ಎಂಬುದು ಕಾಂಗ್ರೆಸ್ನ 2ನೇ ಆರೋಪ.

ಚುನಾವಣೆ ಬೇಡ ಎಂದು ಮನವಿ
ಮಹಿಳಾ ಮೀಸಲಾತಿ ಮತ್ತು ಮತದಾರರ ಹಂಚಿಕೆ ವೈಜ್ಞಾನಿಕವಾಗಿ ಆಗುವ ತನಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವುದು ಬೇಡ ಎಂಬುದು ಕಾಂಗ್ರೆಸ್ ಮನವಿಯಾಗಿದೆ. ಈಗಾಗಲೇ ಎರಡೂವರೆ ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳು ಇಲ್ಲದೇ ಆಡಳಿತಾಧಿಕಾರಿ ಪಾಲಿಕೆ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ.
Recommended Video

ತಯಾರಿಯಲ್ಲಿ ತಡಗಿದವರಿಗೆ ನಿರಾಸೆ
ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗಲಿದೆ ಎಂದು ತಯಾರಿಯಲ್ಲಿ ತೊಡಗಿದ್ದ ರಾಜಕೀಯ ಪಕ್ಷಗಳಿಗೆ ಈಗ ನಿರಾಸೆ ಉಂಟಾಗಿದೆ. ಕರ್ನಾಟಕ ಹೈಕೋರ್ಟ್ ತೀರ್ಪಿನ ಆಧಾರದ ಮೇಲೆ ಚುನಾವಣೆ ನಡೆಯಬೇಕು. ಚುನಾವಣಾ ಪ್ರಕ್ರಿಯೆ ಇನ್ನಷ್ಟು ದಿನ ವಿಳಂಬವಾಗಲಿದೆ ಎಂದು ಅಭ್ಯರ್ಥಿಗಳು ನಿರಾಸೆಗೊಂಡಿದ್ದಾರೆ.












Click it and Unblock the Notifications