ಹುಬ್ಬಳ್ಳಿ ಹುಡುಗ ಅಕ್ಷಯ್ ಆತ್ಮಹತ್ಯೆಗೆ ಕಾರಣವೇ ಗೊತ್ತಾಗ್ಲಿಲ್ಲ!
ಹುಬ್ಬಳ್ಳಿಯ ದೇಹದಾರ್ಢ್ಯ ಪಟು ಅಕ್ಷಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೆ ಕಾರಣ ಗೊತ್ತಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ
ಹುಬ್ಬಳ್ಳಿ, ಏಪ್ರಿಲ್ 25: ಆತ ಸ್ಫುರದ್ರೂಪಿ. ದೇಹದಾರ್ಢ್ಯ ಪಟು ಆದ್ದರಿಂದ ಕಟ್ಟುಮಸ್ತಾಗಿದ್ದ. ಆತ ವೇಟ್ ಲಿಫ್ಟರ್ ಕೂಡ ಹೌದು. ಆದರೆ 19 ವರ್ಷಕ್ಕೆ ಎಷ್ಟೆಲ್ಲ ಭರವಸೆ ಹುಟ್ಟಿಸಿದ್ದ ಹುಬ್ಬಳ್ಳಿಯ ಪಿಸಿ ಜಾಬಿನ್ ಕಾಲೇಜು ವಿದ್ಯಾರ್ಥಿ ಅಕ್ಷಯ್ ಖನೋಜ್ ಭಾನುವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ.
ಇಲ್ಲಿನ ವಿಕಾಸ ನಗರದ ಫಕೀರಪ್ಪ ಖನೋಜ್ -ಸುಧಾ ದಂಪತಿಯ ಮಗ ಅಕ್ಷಯ್ ಬಿಸಿಎ ನಾಲ್ಕನೇ ಸೆಮಿಸ್ಟರ್ ವ್ಯಾಸಂಗ ಮಾಡ್ತಿದ್ದ. ಕರ್ನಾಟಕ ವಿವಿ ಅಂತರ ಕಾಲೇಜು ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದ. ಇಂಥ ಭರವಸೆಯ ವಿದ್ಯಾರ್ಥಿ ಅಕ್ಷಯ್ ಶವ ಆತನ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.[ಚಿಟ್ ಫಂಡ್, ನೂರಾರು ಜನರಿಗೆ ಸಾವಿರಾರು ಕೋಟಿ ದೋಖಾ]
ಮನೆಯಲ್ಲಿ ಎಲ್ಲರೂ ಮದುವೆ ಕಾರ್ಯಕ್ರಮವೊಂದರ ಸಲುವಾಗಿ ಶಿವಮೊಗ್ಗಕ್ಕೆ ತೆರಳಿದ್ದರು. ಅಲ್ಲಿಂದ ಬಂದ ನಂತರ ಮನೆ ಬಾಗಿಲನ್ನು ಎಷ್ಟು ಬಡಿದರೂ ತೆರೆದಿಲ್ಲ. ಬಾಗಿಲು ಮುರಿದು ಒಳ ಹೋದಾಗ ಅಕ್ಷಯ್ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಈ ಹುಡುಗ ಅಕ್ಷಯ್ ಮದುವೆಗೆ ಶಿವಮೊಗ್ಗಕ್ಕೆ ಬಂದಿದ್ದರೆ ಈ ಅನಾಹುತ ಆಗುತ್ತಿರಲಿಲ್ಲವೇನೋ ಅನ್ನುತ್ತಾರೆ ಫಕೀರಪ್ಪ.
ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಅಕ್ಷಯ್ ಗೆ ಸೇರಿದ ಚಿತ್ರಗಳು, ಇನ್ನಿತರ ಮಾಹಿತಿ ಮೊಬೈಲ್ ಫೋನ್-ಲ್ಯಾಪ್ ಟಾಪ್ ನಲ್ಲಿವೆ. ಅವುಗಳನ್ನು ನೋಡಿದರೆ ಕಾರಣ ಏನಾದರೂ ಗೊತ್ತಾಗಬಹುದು ಎಂಬ ನಿರೀಕ್ಷೆಯಿದ್ದು, ಅವುಗಳ ಲಾಕ್ ತೆಗೆಯಲು ಪ್ರಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.