ಹುಬ್ಬಳ್ಳಿ: ಕಾಟ್ಲಾ ಮೀನು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಯುವಕ ಸಾವು!
ಬಾಂಬೆ ಕಾಟ್ಲಾ ಮೀನು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ನೂಕಾಪುರ ಗ್ರಾಮದಲ್ಲಿ ನಡೆದಿದೆ.
ರಾಣಿಬೆನ್ನೂರು, ಫೆಬ್ರವರಿ 2: ಬಾಂಬೆ ಕಾಟ್ಲಾ ಜಾತಿಯ ಮೀನಿಗೆ ಯುವಕನೊಬ್ಬ ಬಲಿಯಾದ ಘಟನೆ ಇಲ್ಲಿನ ಚೌಡಯ್ಯದಾನಪುರ ಬಳಿಯ ತುಂಗಭದ್ರಾ ನದಿ ದಂಡೆಯಲ್ಲಿ ನಡೆದಿದೆ. ಮರತ ಯುವಕನನ್ನು ಇಲ್ಲಿಯ ನೂಕಾಪುರ ಗ್ರಾಮದ ತಾಂಡಾದ ಕೃಷ್ಣಪ್ಪ ಆನಪ್ಪ ಕೇತಾವತ (24) ಎಂದು ಗುರುತಿಸಲಾಗಿದೆ.
ಕೃಷ್ಣಪ್ಪ ಗುರುವಾರ ಬೆಳಿಗ್ಗೆ ಮೀನು ಹಿಡಿಯಲೆಂದು ಬಲೆ ಬೀಸಿ ತುಂಗಭದ್ರಾ ನದಿ ದಂಡೆಯ ಮೇಲೆ ಕುಳಿತಿದ್ದ. ಬಲೆಗೆ ಬಾಂಬಾ ಕಾಟ್ಲಾ ಮೀನು ಬಿದ್ದಿತ್ತು. ಬಲೆಯಲ್ಲಿ ಸಿಕ್ಕ ಮೀನನ್ನು ಬಾಯಲ್ಲಿ ಕಚ್ಚಿ ಹಿಡಿದುಕೊಂಡು ಮತ್ತೊಂದು ಮೀನಿಗೆ ಬಲೆ ಬೀಸುತ್ತಿದ್ದ. ಈ ವೇಳೆ ಬಾಯಲ್ಲಿದ್ದ ಮೀನು ಜಾರಿಕೊಂಡು ಯುವಕನ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿತು. ತಕ್ಷಣ ಉಸಿರಾಡಲು ಕಷ್ಟಪಡುತ್ತು ಒದ್ದಾಡುತ್ತಿದ್ದ ಯುವಕನನ್ನು ಸಾರ್ವಜನಿಕರು ಗಮನಿಸಿ ಕೂಡಲೇ ಹೊನ್ನತ್ತಿ ಗ್ರಾಮದ ಸರಕಾರಿ ಆಸ್ಪತ್ರಗೆ ಕರೆದೊಯ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಯುವಕ ಪ್ರಾಣ ಬಿಟ್ಟಿದ್ದಾನೆ.[ಹುಬ್ಬಳ್ಳಿ ಸಂಚಾರಿ ಪೊಲೀಸ್ರ ಕಣ್ತಪ್ಪಿಸಿದ್ರೆ 'ಟ್ರಾಫಿಕ್ ಆಪ್' ಇದೆ ಜೋಕೆ!]
ಶ್ರೀರಾಮ ಸೇನೆ ಮುಖಂಡನಿಗೆ ಹಲ್ಲೆ:
ಬುಧವಾರ ಗದಗಿನ ಗಂಡಿಮಡಿ ಪ್ರದೇಶದಲ್ಲಿ ಅಂತ್ಯಸಂಸ್ಕಾರಕ್ಕೆ ಹೋಗಿ ಮರಳಿ ಬರುತ್ತಿದ್ದ ಶ್ರೀರಾಮ ಸೇನೆಯ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಶ್ರೀರಾಮ ಸೇನೆ ಗದಗ ಜಿಲ್ಲಾ ಸಂಚಾಲಕ ರಾಜು ಖಾನಪ್ಪನವರ ಹಾಗೂ ಬಸವರಾಜ ಕುರ್ತಕೋಟಿ ಎಂಬುವವರ ಮೇಲೆ ಅರುಣ ಬೆಳದಡಿ ಮತ್ತು ಶಂಕರ ಯಲ್ಲಾಪುರ ಸೇರಿದಂತೆ 6 ಜನ ದಾಳಿ ಮಾಡಿದ್ದಾರೆ. ರಾಜು ಖಾನಪ್ಪನವರಿಗೆ ಮಾರಣಾಂತಿಕ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ದಾಖಲಿಸಲಾಗಿದೆ.[ಹುಬ್ಬಳ್ಳಿಯಲ್ಲಿ ಮರು ಉಸಿರು ಪಡೆದ ನವಜಾತು ಶಿಶು]
ಹಲ್ಲೆಕೋರರನ್ನು ಪೊಲೀಸರು ಬೆನ್ನತ್ತಿದ್ದಾಗ ಅವರು ಹರ್ತಿ ಗ್ರಾಮದಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಮೇಲೆ ಆರೋಪಿಗಳನ್ನು ಬಂಧಿಸಲು ಹರ್ತಿ ಗ್ರಾಮಕ್ಕೆ ತೆರಳಿದಾಗ ಸಿಪಿಐ ಸೋಮಶೇಖರ ಜುಟ್ಟಲ ಎಂಬವರ ಮೇಲೆಯೇ ಅರುಣ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎನ್ನಲಾಗಿದೆ. ತಕ್ಷಣ ಜಾಗೃತರಾದ ಸಿಪಿಐ ತಮ್ಮ ರಿವಾಲ್ವರ್ ನಿಂದ ಅರುಣ ಕಾಲಿಗೆ ಗುಂಡು ಹಾರಿಸಿದ್ದಾರೆ. ಅರುಣನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ. ಹಳೇ ವೈಷಮ್ಯವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.