ಬಾತ್ ರೂಮಿನಲ್ಲಿ ಸಿಕ್ಕಿದ್ದು ಜಸ್ಟ್ 28 ಕೆಜಿ ಚಿನ್ನದ ಗಟ್ಟಿ
ಹುಬ್ಬಳ್ಳಿ/ಚಿತ್ರದುರ್ಗ, ಡಿಸೆಂಬರ್, 10: ಸ್ಥಳೀಯ ಕ್ರಿಕೆಟ್ ಬೆಟ್ಟಿಂಗ್, ಹವಾಲಾ ಕುಳ ಹಾಗೂ ಬಂಗಾರದ ವ್ಯಾಪಾರಿಯೊಬ್ಬರ ಮನೆ, ಅಂಗಡಿ ಹಾಗೂ ಕಚೇರಿ ಮೇಲೆ ಶನಿವಾರ ಹುಬ್ಬಳ್ಳಿ ಮತ್ತು ಚಿತ್ರದುರ್ಗದಲ್ಲಿ ಜಂಟಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಕೋಟ್ಯಂತರ ರು ಹಣ ಮತ್ತು 32 ಕೆಜಿಗೂ ಹೆಚ್ಚು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗದ ಚಳ್ಳಕೆರೆಯ ಲೇವಾದೇವಿಗಾರ ಕಚೇರಿಯ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳಿಗೆ ಬಾತ್ ರೂಮಿನ ಗೋಡೆಯಲ್ಲಿ ಲಾಕರ್ ನ ಒಳಗೆ ರು 5.7 ಕೋಟಿ ಹೊಸ 2000 ಮುಖಬೆಲೆ ನೋಟು,90 ಲಕ್ಷ ಹಳೇ ನಗದು, 28 ಕೆಜಿ ಚಿನ್ನದ ಗಟ್ಟಿ, 4 ಕೆಜಿ ಚಿನ್ನಾಭರಣವನ್ನು ವಶ ಪಡೆಯಲಾಗಿದೆ. [ಐಟಿ ಅಧಿಕಾರಿಗಳನ್ನೂ ಬೆಚ್ಚಿಬೀಳಿಸಿದ ಸೀಕ್ರೆಟ್ ಲಾಕರ್!]
ಮಾಲೀಕ ಕೆ.ಸಿ. ವೀರೇಂದ್ರ ಎನ್ನಲಾಗಿದ್ದು ಬಾತ್ ರೂಮಿನ ಗೋಡೆಯಲ್ಲಿ ಟೈಲ್ಸ್ ಮಾದರಿಯ ಗೋಡೆಯಲ್ಲಿ ಹೊಸ ಟೆಕ್ನಾಲಜಿ ಬಳಸಿ ಹಣವನ್ನು ಬಚ್ಚಿಡಲಾಗಿತ್ತು. ಈ ಹವಾಲಾ ದಂಧೆಯಲ್ಲಿ ಇನ್ನು ಯಾರು ಯಾರು ಇದ್ದಾರೆ ಎಂಬುದನ್ನು ತಿಳಿಯಬೇಕಿದೆ.
ಇನ್ನು ಹುಬ್ಬಳ್ಳಿ ನಗರದ ಸಮುಂದರಸಿಂಗ್ ಎಂಬುವವರ ಕಚೇರಿ ಹಾಗೂ ಅಂಗಡಿ ಮತ್ತು ಮನೆ ಮೇಲೆ 20 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದರು. [ಹುಬ್ಬಳ್ಳಿಯಲ್ಲಿ ಏಳು ಕಡೆ ಐಟಿ ರೇಡ್ : ಚಿನ್ನ, ನಗದು ವಶ]
ಜವಳಿ ಸಾಲನಲ್ಲಿರುವ ಬಂಗಾರದ ವ್ಯಾಪಾರಿಕ ವಿಷ್ಣು ಆರ್.ಹಬೀಬ ಎಂಬುವವರ ಮನೆ ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು,ಸಿಸಿ ಟಿವಿ ಫೂಟೇಜ್ ಕೂಡ ಪರಿಶೀಲಿಸಿದರು.
ಸಮುಂದರಸಿಂಗ್ ದೇಶಪಾಂಡೆ ನಗರದ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಶುಕ್ರವಾರ ತಡರಾತ್ರಿಯವರೆಗೂ ಪರಿಶೀಲನೆ ಮಾಡಿದರು. ಇವರಿಗೆ ಸೇರಿದ ಜವಳಿ ಸಾಲ ಗಿರಿಜಾ ಕಾಂಪ್ಲೆಕ್ಸನಲ್ಲಿರುವ ಸಾಗರ ಫೈನಾನ್ಸ್ ಕಚೇರಿ, ಸಾಗರ ಹ್ಯಾಂಡಲೂಮ್ಸ ಮತ್ತು ಶಂಕರಮಠದ ಬಳಿ ಇರುವ ಆರ್. ಎನ್ ಸಾರಿ ಸೆಂಟರ್ ನಲ್ಲಿ ಶುಕ್ರವಾರ ಮಧ್ಯಾಹ್ನದಿಂದ ತಡರಾತ್ರಿಯವರೆಗೂ ಪರಿಶೀಲನೆ ನಡೆಸಿದರು.
ಜವಳಿ ಸಾಲ್ ನಲ್ಲಿರುವ ಹಾನಗಲ್ ಕಾಂಪ್ಲೆಕ್ಸ್ ನಲ್ಲಿರುವ ವಿಷ್ಣು ಆರ್. ಹಬೀಬ ಎಂಬುವವರ ಮನೆ ಹಾಗೂ ಅವರ ಅಂಗಡಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸ್ಥಳೀಯ ಬೆಂಡಿಗೇರಿ ಪೊಲೀಸ್ ಠಾಣಾ ಪೊಲೀಸರ ಸಹಾಯದಿಂದ ಪರಿಶೀಲನ ನಡೆಸಿದರು. ಇಂದು ಕೂಡ ದಾಳಿ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.