ಪೆಟ್ರೋಲ್ ಬಂಕ್ ವಂಚನೆ ಸೂತ್ರಧಾರ ಪ್ರಶಾಂತ್ ಸಿಕ್ಕಿಬಿದ್ದಿದ್ದು ಹೀಗೆ
ಹುಬ್ಬಳ್ಳಿ, ಜುಲೈ 13 : ಪೆಟ್ರೋಲ್ ಬಂಕ್ ಗಳಲ್ಲಿ ಗ್ರಾಹಕರಿಗೆ ವಂಚಿಸುವ ನಕಲಿ ಚಿಪ್ನ ರೂವಾರಿ ಹುಬ್ಬಳ್ಳಿಯ ಪ್ರಶಾಂತ್ ನೂಲ್ಕಾರ್ ನಡೆಸುತ್ತಿದ್ದ ಅಡ್ಡ ಕಸುಬಿನ ಸುಳಿವು ಎಂಟು ವರ್ಷಗಳಿಂದ ಯಾರಿಗೂ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇದರ ಸುಳಿವು ಸಿಗದ ರೀತಿಯಲ್ಲಿ ಜಾಣಾಕ್ಷತೆಯಿಂದ ದಂಧೆ ನಡೆಸುತ್ತಿದ್ದ ಪ್ರಶಾಂತ್ ಗೆ ಸಹಚರ ವಿವೇಕ್ ಶೆಟ್ಟಿಯ ಬಂಧನ ಮುಳುವಾಯಿತು.
ಏಪ್ರಿಲ್ ಇಪ್ಪತ್ತೊಂಬತ್ತರಂದು ಉತ್ತರ ಪ್ರದೇಶದ ಲಖನೌ ನಗರದಲ್ಲಿ ಇಲ್ಲಿನ ಎಸ್ ಟಿಎಫ್ ಪೊಲೀಸರಿಗೆ ಸಿಕ್ಕ ಒಂದು ಸಣ್ಣ ಸುಳಿವಿನ ಮೇಲೆ ಏಳು ಪೆಟ್ರೋಲ್ ಬಂಕ್ ಗಳನ್ನು ಜಪ್ತಿ ಮಾಡಿದರು. ಆಗ ಪೆಟ್ರೋಲ್ ಪಂಪ್ ಗಳಿಗೆ ನಕಲಿ ಚಿಪ್ ಅಳವಡಿಸಿ ಗ್ರಾಹಕರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ನಾಲ್ವರು ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ಇತರ ಇಪ್ಪತ್ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೆಟ್ರೋಲ್ ಬಂಕ್ ವಂಚನೆ ಜಾಲದಿಂದ ಸಾವಿರಾರು ಕೋಟಿ ಮೋಸ!
ಆ ನಂತರ ಪ್ರಶಾಂತ್ ನೂಲ್ಕಾರ್ ಸಹಚರ ಹಾಗೂ ಈ ವಂಚನೆ ಜಾಲದ ಮತ್ತೊಬ್ಬ ಪ್ರಮುಖ ವ್ಯಕ್ತಿ ವಿವೇಕ್ ಶೆಟ್ಟಿಯನ್ನು ಉತ್ತರ ಪ್ರದೇಶದ ಪೊಲೀಸರು ಮೇ ತಿಂಗಳಲ್ಲಿ ಬಂಧಿಸಿದ್ದಾರೆ.
ಅಲ್ಲಿಂದ ಆರಂಭವಾಗಿದೆ ಪ್ರಶಾಂತ್ ನೂಲ್ಕಾರ್ ಬ್ಯಾಡ್ ಟೈಂ. ಆಗ ವಿವೇಕ್ ಶೆಟ್ಟಿ ಹಾಗೂ ಇನ್ನಿತರ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಜಾಲದ ಕಿಂಗ್ಪಿನ್ ಪ್ರಶಾಂತ್ ನೂಲ್ಕಾರ್ ಹೆಸರು ಹೊರಗೆ ಬಂದಿದೆ.
ಆದರೆ, ಪ್ರಶಾಂತ್ ಅಷ್ಟು ಸುಲಭವಾಗಿ ಪೊಲೀಸರ ಬಲೆಗೆ ಬಿದ್ದಿಲ್ಲ. ಅಷ್ಟರಲ್ಲಾಗಲೇ ಮುಂಬೈನ ಥಾಣೆಯಲ್ಲಿ ಇದೇ ಗುಂಪು ನಡೆಸಿದ ಮತ್ತೊಂದು ಬೃಹತ್ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಗ ಬೆನ್ನು ಬಿದ್ದ ಥಾಣೆ ಪೊಲೀಸರು ಪ್ರಶಾಂತ್ ನನ್ನು ಬಲೆಗೆ ಕೆಡವಿದ್ದಾರೆ.