ಹುಬ್ಬಳ್ಳಿ ನಿವಾಸ ತೆರವುಗೊಳಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

Recommended Video

      ಎಚ್ ಡಿ ಕುಮಾರಸ್ವಾಮಿ ಹುಬ್ಬಳ್ಳಿ ಮನೆಯನ್ನ ತೆರವುಗೊಳಿಸಿದ್ಯಾಕೆ? | Oneindia Kannada

      ಹುಬ್ಬಳ್ಳಿ, ಸೆಪ್ಟೆಂಬರ್ 5: ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬಲವರ್ಧನೆ ಮಾಡುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಬಾಡಿಗೆ ಪಡೆದಿದ್ದ ಮನೆಯನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತೆರವುಗೊಳಿಸಿದ್ದಾರೆ.

      ಉತ್ತರ ಕರ್ನಾಟಕದ ಭಾಗಗಳಲ್ಲಿ ಜೆಡಿಎಸ್ ಪ್ರಬಲವಾಗಿರದ ಕಾರಣ, ಅಲ್ಲಿಯೇ ಕೆಲವು ಕಾಲ ನೆಲೆಯೂರಿ ಪಕ್ಷ ಸಂಘಟನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದರು.

      ಭೈರಿದೇವರಕೊಪ್ಪದ ಮಾಯಕಾರ ಕಾಲೊನಿಯಲ್ಲಿ 6 ಸಾವಿರ ಚದರ ಅಡಿ ವಿಸ್ತೀರ್ಣದ 'ಏಕದಂತಾ ಕೃಪಾ' ಎಂಬ ಮನೆ ಮಾಡಿದ್ದರು.

      ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರ ಸಹೋದರ ಸುರೇಶ ರಾಯರಡ್ಡಿ ಅವರಿಗೆ ಸೇರಿದ ಈ ಮನೆಯನ್ನು, ಅವರು ಯಾವುದೇ ಬಾಡಿಗೆ ಹಣ ಪಡೆಯದೆಯೇ ಕುಮಾರಸ್ವಾಮಿ ಅವರಿಗೆ ನೀಡುವುದಾಗಿ ತಿಳಿಸಿದ್ದರು.

      ಮನೆ ತೆರವು ಏಕೆ?

      ಮನೆ ತೆರವು ಏಕೆ?

      ಕುಮಾರಸ್ವಾಮಿ ಬಾಡಿಗೆಗೆ ಇದ್ದ ಮನೆಯನ್ನು ಅದರ ಮಾಲೀಕ ಸುರೇಶ ರಾಯರಡ್ಡಿ ಅವರು ಮಾರಾಟ ಮಾಡುತ್ತಿರುವುದಾಗಿ ಕಳೆದ ತಿಂಗಳು ಜಾಹೀರಾತು ನೀಡಿದ್ದರು. ಕುಮಾರಸ್ವಾಮಿ ಅಥವಾ ಜೆಡಿಎಸ್ ಮುಖಂಡರೇ ಈ ಮನೆಯನ್ನು ಖರೀದಿ ಮಾಡುತ್ತಾರೆ ಎನ್ನಲಾಗಿತ್ತು. ಆದರೆ, ಜೆಡಿಎಸ್ ಕಾರ್ಯಕರ್ತರು ಮನೆಯೊಳಗಿದ್ದ ಪೀಠೋಪಕರಣ ಮತ್ತು ಇತರೆ ವಸ್ತುಗಳನ್ನು ಸ್ಥಳಾಂತರ ಮಾಡಿದ್ದಾರೆ.

      ಮನೆ ಮಾರಾಟಕ್ಕೆ ಕಾರಣ ಏನೆಂದು ಸುರೇಶ ರಾಯರಡ್ಡಿ ತಿಳಿಸಿಲ್ಲ. ಬಾಡಿಗೆ ಹಣ ಪಡೆಯಲು ನಿರಾಕರಿಸಿದ್ದ ಅವರು, ಕುಮಾರಸ್ವಾಮಿ ಸಿಎಂ ಆದ ಬಳಿಕ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿದರೆ ಅದೇ ಖುಷಿ ಎಂದು ಹೇಳಿದ್ದರು.

      ಜ್ಯೋತಿಷಿ ನೀಡಿದ್ದ ಸಲಹೆ?

      ಜ್ಯೋತಿಷಿ ನೀಡಿದ್ದ ಸಲಹೆ?

      ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಯ ಸಲುವಾಗಿ ಮನೆ ಮಾಡಲಾಗಿದೆ ಎಂದಿದ್ದರೂ, ಆ ಭಾಗದಲ್ಲಿ ಮನೆ ಮಾಡಿದರೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಜೋತಿಷಿಯೊಬ್ಬರು ನುಡಿದ ಭವಿಷ್ಯದ ಸಲುವಾಗಿ ಕುಮಾರಸ್ವಾಮಿ ಅಲ್ಲಿ ಮನೆ ಮಾಡಿದ್ದರು ಎಂಬ ಮಾತುಗಳೂ ಕೇಳಿಬಂದಿದ್ದವು. ಅದು ನಿಜವಾಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಹ ಆಗಿದ್ದಾರೆ. ಆದರೆ, ಸಿಎಂ ಗದ್ದುಗೆಗೆ ಏರಿದ ಬಳಿಕ ಕುಮಾರಸ್ವಾಮಿ ಹುಬ್ಬಳ್ಳಿಗೆ ಇದುವರೆಗೂ ಭೇಟಿ ನೀಡಿಲ್ಲ.

      ಬೇರೆಡೆ ಮನೆ ಬಾಡಿಗೆಗೆ

      ಬೇರೆಡೆ ಮನೆ ಬಾಡಿಗೆಗೆ

      ಕುಮಾರಸ್ವಾಮಿ ಅವರ ಮನೆಯನ್ನು ತೆರವುಗೊಳಿಸುತ್ತಿಲ್ಲ. ಬದಲಾಗಿ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.

      ಕುಮಾರಸ್ವಾಮಿ ಈಗ ಮುಖ್ಯಮಂತ್ರಿಯಾಗಿರುವುದರಿಂದ ಅವರನ್ನು ಭೇಟಿ ಮಾಡಲು ಹೆಚ್ಚು ಜನರು ಬರುತ್ತಾರೆ. ಹೀಗಾಗಿ ಹುಬ್ಬಳ್ಳಿಯಲ್ಲಿರುವ ಈ ಮನೆಯ ಸ್ಥಳ ಸಾಲದು. ಅವರು ಹುಬ್ಬಳ್ಳಿಗೆ ಬಂದಾಗ ಇಲ್ಲಿ ಉಳಿದುಕೊಳ್ಳುವುದು ಕಷ್ಟ. ಅಲ್ಲದೆ ಮಾಲೀಕರು ಮನೆ ಮಾರಾಟಕ್ಕೆ ಮುಂದಾಗಿದ್ದಾರೆ. ಪಕ್ಷದ ಕಚೇರಿ ಚಟುವಟಿಕೆ ಹಾಗೂ ಸಂಘಟನೆಯ ಕಾರ್ಯಗಳಿಗಾಗಿ ಇನ್ನೂ ದೊಡ್ಡ ಜಾಗ ಬೇಕಿದೆ. ಈ ಬಗ್ಗೆ ಕುಮಾರಸ್ವಾಮಿ ಅವರ ಗಮನಕ್ಕೂ ತಂದಿದ್ದೇವೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರದ ಜೆಡಿಎಸ್ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ತಿಳಿಸಿದ್ದಾರೆ.

      ಗೃಹ ಪ್ರವೇಶ

      ಗೃಹ ಪ್ರವೇಶ

      ಈ ಮನೆಯನ್ನು ಬಾಡಿಗೆಗೆ ಪಡೆದುಕೊಂಡ ಬಳಿಕ 2016ರ ನವೆಂಬರ್‌ 18ರಂದು ಎಚ್‌.ಡಿ. ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಶಾಸ್ತ್ರೋಕ್ತವಾಗಿ ಗೃಹಪ್ರವೇಶ ಮಾಡಿದ್ದರು.

      ಹೋಮ ಹವನಗಳನ್ನು ನಡೆಸಿದ್ದ ಕುಮಾರಸ್ವಾಮಿ, ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಗೃಹಪ್ರವೇಶ ಮಾಡಿದ್ದರು. ಅವರು ಮುಖ್ಯಮಂತ್ರಿಯಾದ ಬಳಿಕ ಮನೆ ಮಾಲೀಕ ಸುರೇಶ ರಾಯರಡ್ಡಿ ಅವರ ನೇತೃತ್ವದಲ್ಲಿ ಕೂಡ ಈ ಮನೆಯಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದಿದ್ದವು. ಕುಮಾರಸ್ವಾಮಿ ಅವರು ಐದು ವರ್ಷ ಸುಭದ್ರ ಆಡಳಿತ ನೀಡಲಿ, ಅವರ ಸರ್ಕಾರಕ್ಕೆ ಯಾವುದೇ ವಿಘ್ನ ಬಾರದಿರಲಿ ಎಂದು ಪೂಜೆ ಸಲ್ಲಿಸಿದ್ದಾಗಿ ಸುರೇಶ ರಾಯರಡ್ಡಿ ತಿಳಿಸಿದ್ದರು.

      ಈಡೇರದ ಭರವಸೆ

      ಈಡೇರದ ಭರವಸೆ

      ಮುಖ್ಯಮಂತ್ರಿಯಾದ ಬಳಿಕ ಹುಬ್ಬಳ್ಳಿಗೆ ನಿರಂತರವಾಗಿ ಬಂದು ವಾಸ್ತವ್ಯ ಹೂಡುತ್ತಾರೆ ಎಂದು ಜನರಲ್ಲಿ ಭರವಸೆ ಇತ್ತು. ಮನೆ ಮಾಡಿದ ಎರಡು ವರ್ಷದಲ್ಲಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯೂ ಆದರು. ಆದರೆ, ಸರ್ಕಾರ ರಚನೆಗೊಂಡು ಹಲವು ತಿಂಗಳು ಕಳೆದರೂ ಕುಮಾರಸ್ವಾಮಿ ಈ ಭಾಗಕ್ಕೆ ಭೇಟಿ ನೀಡದೆ ಇರುವುದು ಜನರಲ್ಲಿ ಬೇಸರ ಮೂಡಿಸಿದೆ.

      ಚುನಾವಣೆಗೂ ಮುನ್ನ ಉತ್ತರ ಕರ್ನಾಟಕದಲ್ಲಿ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗಿದ್ದ ಕುಮಾರಸ್ವಾಮಿ ಕೆಲವು ದಿನ ಈ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ಭಾಗದ ಜನರ ನೇರಸಂಪರ್ಕದಲ್ಲಿ ಇರುವ ಉದ್ದೇಶದಿಂದ ಮನೆ ಮಾಡಿದ್ದೇನೆ. ಇಲ್ಲಿಂದ ಹೊಸ ರಾಜಕೀಯ ಚಟುವಟಿಕೆ ಆರಂಭವಾಗಲಿದೆ. ಕಷ್ಟ ಹೇಳಿಕೊಂಡು ಬರುವವರಿಗೆ ನಮ್ಮ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದರು.

      ಮನೆಯಲ್ಲಿ ಸಂಭವಿಸಿದ್ದ ಅವಘಡ

      ಮನೆಯಲ್ಲಿ ಸಂಭವಿಸಿದ್ದ ಅವಘಡ

      ಕುಮಾರಸ್ವಾಮಿ ಅವರು ಬಾಡಿಗೆಗೆ ಪಡೆದುಕೊಂಡಿರುವ ಈ ಮನೆಯಲ್ಲಿ 2017ರ ಅಕ್ಟೋಬರ್‌ 4ರಂದು ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಅವಘಡ ಸಂಭವಿಸಿತ್ತು. ಎರಡು ಸೋಫಾ ಸೆಟ್, ಬೆಡ್‌ರೂಂನಲ್ಲಿರುವ ಹಾಸಿಗೆ ಮತ್ತು ಕೆಲವು ಅಲಂಕಾರಿಕ ವಸ್ತುಗಳು, ಕೆಲವು ಎಲೆಕ್ಟ್ರಿಕ್ ವಸ್ತುಗಳು ಬೆಂಕಿಗೆಬ ಆಹುತಿಯಾಗಿದ್ದವು. ಈ ಘಟನೆ ಬಳಿಕ ಕುಮಾರಸ್ವಾಮಿ ಒಂದೆರಡು ಬಾರಿ ಮಾತ್ರ ಮನೆಗೆ ಬಂದಿದ್ದರು.

      ಎರಡು ಅಂತಸ್ತಿನ ಕಟ್ಟಡದಲ್ಲಿ ಐದು ಕೊಠಡಿಗಳು, ಪೂಜಾಕೋಣೆ, ಜಿಮ್, ವಿಶಾಲ ಸಭಾಂಗಣದ ಸೌಲಭ್ಯಗಳಿವೆ.

      ಪ್ರಹ್ಲಾದ್ ಜೋಶಿ ಟೀಕೆ

      ಪ್ರಹ್ಲಾದ್ ಜೋಶಿ ಟೀಕೆ

      ತಿಂಗಳಲ್ಲಿ ಒಂದು ವಾರ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡುವ ಜತೆಯಲ್ಲಿ, ಉತ್ತರ ಕರ್ನಾಟಕ ಪ್ರವಾಸ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದ್ದ ಕುಮಾರಸ್ವಾಮಿ ಈ ಭಾಗದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

      ದೇವೇಗೌಡ ಮತ್ತು ಕುಮಾರಸ್ವಾಮಿ ಅವರದ್ದು ಒಂದು ನಾಟಕ ಕಂಪೆನಿ. ಜನರಿಗೆ ಮೋಸ ಮಾಡಲು ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಪಡೆದುಕೊಂಡಿದ್ದರು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿರುವ ಅವರು, ಇಲ್ಲಿನ ಜನರಿಗೆ ಮುಖ ತೋರಿಸಲು ಸಾಧ್ಯವಾಗದೆ ಹುಬ್ಬಳ್ಳಿಗೇ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+