ಎಚ್ಚರ, ಹುಬ್ಬಳ್ಳಿ ಬಿಟ್ಟು ಧಾರವಾಡಕ್ಕೆ ಬಂದ್ರು ಸರಗಳ್ಳರು!
ಹುಬ್ಬಳ್ಳಿ, ಆಗಸ್ಟ್, 24: ಹುಬ್ಬಳ್ಳಿಯಲ್ಲಿ ಸಾಕಷ್ಟು ಕಳ್ಳತನ ಮಾಡಿ ಹೊಟ್ಟೆ ತುಂಬಿಕೊಂಡ ಕಳ್ಳರು ಇದೀಗ ಧಾರವಾಡಕ್ಕೆ ಕಾಳಿಟ್ಟು ಕೈಚಳಕ ತೋರಿಸಿದ್ದಾರೆ. ಧಾರವಾಡದ ವಿದ್ಯಾಗಿರಿ ಮತ್ತು ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಮೂರು ಸರಗಳ್ಳತನ ಪ್ರಕರಣಗಳು ದಾಖಲಾಗಿರುವುದೆ ಇದಕ್ಕೆ ಸಾಕ್ಷಿ.
ಧಾರವಾಡದ ಬಾರಾಕೊಟ್ರಿ, ರಾಘವೇಂದ್ರ ಕಾಲೋನಿ ನಿವಾಸಿ ಸುಮನ್ ಅರುಣ ನಾಜರೇ ಎಂಬುವರ 50 ಗ್ರಾಂ ತೂಕ ಬಂಗಾರದ ಸರವನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ.[ಹುಬ್ಬಳ್ಳಿ-ಧಾರವಾಡದ ಗೃಹಿಣಿಯರೇ ಸರಗಳ್ಳರಿದ್ದಾರೆ ಎಚ್ಚರ!]
ಸುಮನ್ ಅವರು ಮಂಗಳವಾರ ಆ.23 ರ ಬೆಳಗಿನ 7. 30 ರ ಸುಮಾರಿಗೆ ತಮ್ಮ ಮನೆಯ ಕಾಂಪೌಂಡ್ ಬಳಿ ಕಸ ಗುಡಿಸಿ ನೀರು ಹಾಕುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಅಡ್ರೆಸ್ ಕೇಳುವ ನೆಪದಲ್ಲಿ ಸುಮನ್ ಅವರ ಕೊರಳಿಗೆ ಕೈ ಹಾಕಿ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಬಿ ನಗರದಲ್ಲಿ:
ಸ್ಥಳೀಯ ಶಿವಬಸವನಗರ, ಸಿ.ಬಿ.ನಗರ ನಿವಾಸಿ ಶೇಕುಂತಲಮ್ಮ ಪಂಪಣ್ಣ ಬಾಲರಡ್ಡಿ ಆ. 23 ರ ಮಂಗಳವಾರ ಬೆಳಿಗ್ಗೆ 6.25 ಕ್ಕೆ ಮನೆ ಮುಂದೆ ಕಸಗುಡಿಸುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ಬಂದು ಕೊರಳಿಗೆ ಕೈಹಾಕಿ 30 ಗ್ರಾಂ. ತೂಕದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. [ಹುಬ್ಬಳ್ಳಿಗರೇ ನಿಮ್ಮನೆ ಬೀಗ ಗಟ್ಟಿ ಇದೆಯಾ ನೋಡ್ಕಳಿ!]
ಎಸ್ಡಿಎಂ ಆಸ್ಪತ್ರೆ ಬಳಿ:
ಹುಬ್ಬಳ್ಳಿಯ ಲೋಹಿಯಾನಗರ ಗೋಕುಲರೋಡ ನಿವಾಸಿ ಸುಧಾ ಮೃತ್ಯುಂಜಯ ಹುಡೇದ ಎಂಬುವರ ಕೊರಳಿನಲ್ಲಿದ್ದ 35 ಗ್ರಾಂ ತೂಕದ ಬಂಗಾರ ಸರವನ್ನು ಆ.20 ರಂದು ಬೆಳಗ್ಗೆ ಧಾರವಾಡ ಹತ್ತಿರದ ಎಸ್ಡಿಎಂ ಆಸ್ಪತ್ರೆ ಬಳಿ ರಸ್ತೆ ದಾಟುವಾಗ ಬೈಕ್ ನಲ್ಲಿ ಬಂದ ಮೂವರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನೆಯ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜುಕೋರರ ಬಂಧನ: ಧಾರವಾಡದ ಕ್ಯಾರಕೊಪ್ಪ ಗ್ರಾಮದ ಬಳಿ ಮಂಗಳವಾರ ಮುಂಜಾನೆ ದಾಳಿ ನಡೆಸಿದ ಪೊಲೀ ಜೂಜಾಡುತ್ತಿದ್ದ 7 ಜನರನ್ನು ಬಂಧಿಸಿ ಅವರಿಂದ 87,430 ರೂ. ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ : ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಆ. 23 ರ ಮಂಗಳವಾರದಂದು 596 ಕೇಸಗಳನ್ನು ದಾಖಲಿಸಿ 1,36,600ರ ರು. ದಂಡ ವಸೂಲಿ ಮಾಡಲಾಗಿದೆ ಎಂದು ಹು-ಧಾ ಪೊಲೀಸ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











Click it and Unblock the Notifications