ಕನಸಿನಲ್ಲಿ ದೇವಿ ಹೇಳಿಕೆ : ರುಂಡ ಚಂಡಾಡಿದ ಯುವಕ
ಕನಸಿನಲ್ಲಿ ದೇವಿ ಬಂದು ಯಾರದಾದರೂ ತಲೆ ಕತ್ತರಿಸಿದರೆ ಒಳ್ಳೆಯದಾಗುತ್ತದೆ ಎಂಬ ಭ್ರಮೆಯಲ್ಲಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆತ ಮೀನು ಹಿಡಿಯುತ್ತಿದ್ದ ವ್ಯಕ್ತಿಯ ರುಂಡ ಚೆಂಡಾಡಿ ಬರ್ಬರವಾಗಿ ಹತ್ಯೆಗೈದಿದ್ದ.
ಹುಬ್ಬಳ್ಳಿ, ನವೆಂಬರ್, 29 : ಸಮೀಪದ ಮುಂಡಗೋಡ ಪಟ್ಟಣದಲ್ಲಿ ಕನಸಿನಲ್ಲಿ ದೇವಿ ಬಂದು ಯಾರದಾದರೂ ತಲೆ ಕತ್ತರಿಸಿದರೆ ತುಂಬಾ ಒಳ್ಳೆಯದಾಗುತ್ತದೆ ಎಂದು ಹೇಳಿದ್ದನ್ನು ಕೇಳಿಕೊಂಡು ವ್ಯಕ್ತಿಯೋರ್ವನು ಮೀನು ಹಿಡಿಯಲು ಕುಳಿತಿದ್ದ ಯುವಕನ ರುಂಡ ಕತ್ತರಿಸಿದ್ದಾನೆ.
ಕಳೆದ ವಾರ ಹುಬ್ಬಳ್ಳಿ ಶಿರಸಿ ಹೆದ್ದಾರಿಯಲ್ಲಿ ಬರುವ ಮಳಗಿ ಹತ್ತಿರದ ಧರ್ಮಾ ಜಲಾಶಯದ ಹೆಚ್ಚುವರಿ ನೀರು ಬಿಡುವ ಕಾಲುವೆ ಬಳಿ ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮ ಅಬ್ದುಲ್ ಖಾದರ್ (ಇಮ್ರಾನ್) ಅಲಿಸಾಬ ನದಾಫ ಎಂಬ ಯುವಕನ ರುಂಡ ಮುಂಡ ಬೇರ್ಪಡಿಸಿ ಕೊಲೆಗೈಯ್ಯಲಾಗಿತ್ತು.
ಕೊಲೆಗಾರರ ಯಾವುದೇ ಸುಳಿವು ಪೊಲೀಸರಿಗೆ ಲಭ್ಯವಾಗಿರಲಿಲ್ಲ. ಮೃತನ ಶವದ ಬಳಿ ಕೇವಲ ಮೀನು ಹಿಡಿಯಲು ಬಳಸುವ ಬಲೆ ಮತ್ತು ಚಪ್ಪಲಿಗಳು ಮಾತ್ರ ಇದ್ದವು. ಘಟನೆಯ ಬೆನ್ನತ್ತಿದ್ದ ಪೊಲೀಸರು ರವಿವಾರ ಕೊಲೆ ಆರೋಪಿ ಶಿರಸಿ ತಾಲೂಕಿನ ಬದನಗೋಡ ಗ್ರಾಮದ ರಮೇಶ ದಾಸಪ್ಪ ಗೊಲ್ಲರ (3) ಎಂಬಾತನನ್ನು ಬಂಧಿಸಿದ್ದಾರೆ.
ಘಟನೆಯ ವಿವರ : ಅತಿಯಾಗಿ ಆಧ್ಯಾತ್ಮದ ಕಡೆಗೆ ಒಲವು ಹೊಂದಿದ್ದ ಕೊಲೆ ಆರೋಪಿ ರಮೇಶನಿಗೆ ತನ್ನ ಕನಸಿನಲ್ಲಿ ಹುಲಿಗೆಮ್ಮ ದೇವಿ ಬಂದು ನಿನ್ನ ಕೈಯಾರೆ ಯಾರಾದರೂ ಮನುಷ್ಯನನ್ನು ರುಂಡಮುಂಡ ಬೇರ್ಪಡಿಸಿ ಬಲಿ ಕೊಡು ಎಂದು ಕೇಳಿಕೊಂಡಿದ್ದಳಂತೆ.
ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ರಮೇಶ ಯಾರನ್ನಾದರೂ ಕೊಲೆ ಮಾಡಬೇಕೆಂದು ಕೈಯಲ್ಲಿ ಮಚ್ಚು ಹಿಡಿದು ನ.19ರಂದು ಧರ್ಮಾ ಜಲಾಶಯದ ಬಳಿ ಬಂದಿದ್ದಾನೆ. ಅಲ್ಲಿ ಅಬ್ದುಲ್ ಒಬ್ಬನೇ ಜಲಾಶಯದ ನೀರಿನಲ್ಲಿ ಗಾಳ ಹಾಕಿಕೊಂಡು ಮೀನು ಹಿಡಿಯಲು ಕುಳಿತುಕೊಂಡಾಗ ಯಾರೂ ಇಲ್ಲದ್ದನ್ನು ಗಮನಿಸಿ ಅವನ ಕುತ್ತಿಗೆಗೆ ಹಿಂದಿನಿಂದ ಮಚ್ಚಿನಿಂದ ಕೊಚ್ಚಿದ್ದಾನೆ. ಕೂಡಲೇ ಘಟನಾ ಸ್ಥಳದಿಂದ ಅಬ್ದುಲ್ ಓಡಿ ಹೋಗಲಾರಂಭಿಸಿದ್ದಾನೆ. ಆದರೂ ಬಿಡದ ರಮೇಶ ಬೆನ್ನತ್ತಿ ಕುತ್ತಿಗೆಯನ್ನು ರುಂಡದಿಂದ ಬೇರ್ಪಡಿಸಿ ಕೊಲೆ ಮಾಡಿ ಪರಾರಿಯಾಗಿದ್ದ.
ಗ್ರಾಮಸ್ಥರ ಸುಳಿವು : ಕೊಲೆಯಾದ ದಿನದಂದು ಗ್ರಾಮದಲ್ಲಿ ರಮೇಶ ಮಚ್ಚು ಹಿಡಿದುಕೊಂಡು ಓಡಾಡಿದ್ದನ್ನು ಗ್ರಾಮಸ್ಥರೊಬ್ಬರು ಗಮನಿಸಿದ್ದಾರೆ. ನಂತರ ಅಂದಿನಿಂದ ಕಾಣೆಯಾಗಿದ್ದ ರಮೇಶ ನ.27ರಂದು ರವಿವಾರ ಗ್ರಾಮಕ್ಕೆ ಆಗಮಿಸಿದ್ದಾನೆ. ಕೂಡಲೇ ಪೊಲೀಸರಿಗೆ ಗ್ರಾಮದ ವ್ಯಕ್ತಿ ಸುದ್ದಿ ತಿಳಿಸಿದ್ದಾರೆ. ರಮೇಶನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಘಟನೆಯ ಸಂಪೂರ್ಣ ವಿವರ ಬೆಳಕಿಗೆ ಬಂದಿದೆ.