ಹುಬ್ಬಳ್ಳಿ; ಈದ್ಗಾ ಮೈದಾನದಲ್ಲಿ ಗಣೇಶೋತ್ಸವ, ಸೋಮವಾರ ಅಂತಿಮ ವರದಿ
ಹುಬ್ಬಳ್ಳಿ, ಆಗಸ್ಟ್, 28 : ನಗರದ ಚನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕುರಿತಂತೆ ಸೋಮವಾರ ನಿರ್ಧಾರ ಹೊರಬರಲಿದೆ. ಈ ಕುರಿತು ಈಗಾಗಲೇ ಒಂದು ಸಮಿತಿ ರಚನೆ ಮಾಡಲಾಗಿದ್ದು, ಆಗಸ್ಟ್ 29ರಂದು ಇದರ ಬಗ್ಗೆ ಸಮಿತಿ ನಿರ್ಧಾರವನ್ನು ಪ್ರಕಟಿಸಲಿದೆ.
ಇದಕ್ಕೆ ಸಂಬಂಧಿಸಿದಂತೆ ಸಂತೋಷ್ ಚೌವ್ಹಾಣ ನೇತೃತ್ವದ ಸದನ ಸಮಿತಿಗೆ ಈಗಾಗಲೇ 6 ಸಂಘಟನೆಗಳು ಹಾಗೂ ಎರಡು ಪಕ್ಷಗಳು ಅಹವಾಲು ಸಲ್ಲಿಸಿವೆ. ಆರು ಸಂಘಟನೆಗಳು ಮತ್ತು ಹಿಂದೂಸ್ತಾನ ಜನತಾ ಪಕ್ಷಗಳು ಈದ್ಗಾದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ಒತ್ತಾಯಿಸಿದ್ದರೆ, ಎಐಎಂಐಎಂ ಮಾತ್ರ ವಿರೋಧ ವ್ಯಕ್ತಪಡಿಸಿದೆ.
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ ನೇತೃತ್ವದಲ್ಲಿ ಈದ್ಗಾ ಗಣೇಶೋತ್ಸವ ಸಮಿತಿ ಸದಸ್ಯರು ಗಣೇಶೋತ್ಸವಕ್ಕೆ ಪಟ್ಟು ಹಿಡಿದಿದ್ದಾರೆ. ಸಂಜೆಯ ವೇಳೆಗೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಅಲ್ಲದೇ ಕಾನೂನು ತೊಡಕುಗಳ ಬಗ್ಗೆ ಚರ್ಚಿಸಲು ಸರ್ಕಾರದ ಉಸ್ತುವಾರಿ ಕಾರ್ಯದರ್ಶಿ ಮಟ್ಟದ ಹಿರಿಯ ಅಧಿಕಾರಿಗಳು ಹುಬ್ಬಳ್ಳಿಗೆ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಈದ್ಗಾ ಮೈದಾನವನ್ನು ಪೊಲೀಸರು ಸಂಪೂರ್ಣವಾಗಿ ಬಂದ್ ಮಾಡಿದ್ದು, ಎಲ್ಲ ಗೇಟ್ಗಳನ್ನು ಮುಚ್ಚಿದ್ದಾರೆ. ಅಲ್ಲದೇ ಈದ್ಗಾ ಮೈದಾನದ ಸುತ್ತಮುತ್ತಲೂ ಸಿಸಿಟಿವಿ ಅಳವಡಿಸಲಾಗಿದೆ.

ಈದ್ಗಾದಲ್ಲಿ ಗಣೇಶೋತ್ಸವ ಕುರಿತು ಚರ್ಚೆ
ಅಧ್ಯಕ್ಷ ಸಂತೋಷ ಚವ್ಹಾಣ, ಸದಸ್ಯರಾದ ಶಿವು ಮೆಣಸಿನಕಾಯಿ, ಸುರೇಶ್ ಬೇದರೆ, ನಿರಂಜನ ಹಿರೇಮಠ, ಇಮ್ರಾನ್ ಯಲಿಗಾರ ಅಲ್ಲದೇ ಸಮಿತಿ ಸಮನ್ವಯ ಅಧಿಕಾರಿ ಆಗಿರುವ ಪಾಲಿಕೆ ಸಹಾಯಕ ಆಯುಕ್ತ ಎಸ್. ಸಿ. ಬೇವೂರ ಈಗಾಗಲೇ ಎರಡು ಮೂರು ಸಭೆಗಳನ್ನು ನಡೆಸಿದ್ದು, ಸಂಜೆ ಮತ್ತೆ ಸುಧೀರ್ಘವಾಗಿ ಚರ್ಚಿಸುವ ಸಾಧ್ಯತೆಗಳಿವೆ. ಸಮಿತಿಯು ಕಾನೂನು ತಜ್ಞರ ಜೊತೆಯೂ ಚರ್ಚಿಸಲಿದ್ದು, ಹಿಂದಿನ ಕೋರ್ಟ್ ಆದೇಶಗಳನ್ನು ಕೂಲಂಕುಷವಾಗಿ ಪರಿಶೀಲಿಸುವುದಲ್ಲದೇ ಎಲ್ಲ ಪಕ್ಷಗಳ ಮುಖಂಡರ ಅಭಿಮತ ಪಡೆಯುವ ಸಾಧ್ಯತೆಗಳಿವೆ. ನಿನ್ನೆ ಪಾಲಿಕೆ ವಿಪಕ್ಷ ನಾಯಕ ದೊರೆರಾಜ ಮಣಿಕುಂಟ್ಲ ಸಮಿತಿಯನ್ನು ರಚಿಸಬೇಕು ಎಂದು ಮೇಯರ್ಗೆ ಪತ್ರ ಬರೆದಿದ್ದರು.

ಸೋಮವಾರ 11 ಗಂಟೆಗೆ ಅಂತಿಮ ವರದಿ ಪ್ರಕಟ
ಈಗಾಗಲೇ 8 ಅರ್ಜಿಗಳು ಬಂದಿದ್ದು, ರಾತ್ರಿಯೊಳಗೆ ಕಾನೂನು ತಜ್ಞರ ಜೊತೆ ಚರ್ಚಿಸಲಾಗುತ್ತದೆ. ಸಮಿತಿಯು ಸೋಮವಾರ ಬೆಳಗ್ಗೆ 11ಗಂಟೆಗೆ ಈದ್ಗಾದಲ್ಲಿ ಗಣೇಶನ ಕೂಡಿಸುವ ಬಗ್ಗೆ ಅಂತಿಮ ವರದಿ ನೀಡಲಿದೆ ಎಂದು ಸಮಿತಿ ಅಧ್ಯಕ್ಷ ಚೌವ್ಹಾಣ ಹೇಳಿದ್ದಾರೆ. ಮೇಯರ್ ಈರೇಶ್ ಅಂಚಟಗೇರಿ ಸಮ್ಮೇಳನಕ್ಕೆಂದು ರಾಯಪುರ್ಕ್ಕೆ ತೆರಳಿದ್ದು, ಅವರು ಭಾನುವಾರ ರಾತ್ರಿಯೊಳಗೆ ವಾಪಸ್ ಆಗಲಿದ್ದಾರೆ. ಸೋಮವಾರ ವರದಿ ಸ್ವೀಕರಿಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿದ್ದಾರೆ. ಸಮಿತಿ ನೀಡುವ ವರದಿ ಆಧಾರದ ಮೇಲೆ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಆಗದಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಈದ್ಗಾ ಮೈದಾನ ಸುತ್ತ ಕಣ್ಗಾವಲು
ಹುಬ್ಬಳ್ಳಿ ಮೊದಲೇ ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ ಕೆಲವು ಸಮಾಜ ಘಾತುಕ ಶಕ್ತಿಗಳಿಂದ ತೊಂದರೆ ಆಗುವ ಹಿನ್ನೆಲೆಯಲ್ಲಿ ಸರ್ಕಾರದ ಪ್ರತಿನಿಧಿ ಬಂದು ಚರ್ಚಿಸುವ ಸಾಧ್ಯತೆಗಳು ಇವೆ. ಪಾಲಿಕೆ ಮುಂಜಾಗ್ರತಾ ಕ್ರಮವಾಗಿ ಮೈದಾನದ ಸುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಮೈದಾನದ ಒಳಗಡೆ ಮೂರು ಕಡೆ, ಮೈದಾನ ಪ್ರವೇಶದ ಮೂರು ಕಡೆ ಹಾಗೂ ಇಡೀ ಮೈದಾನದ ಎಲ್ಲ ದೃಶ್ಯಾವಳಿ ಸೆರೆ ಹಿಡಿಯಬಲ್ಲ ಎರಡು ಸಿಸಿಟಿವಿ ಅಳವಡಿಸಲಾಗಿದೆ. ಗಣೇಶ ಹಬ್ಬದ ಉತ್ಸವದ ವೇಳೆ ಅವಳಿ ನಗರದಲ್ಲಿ ಬಿಗಿ ಭದ್ರತೆಗೂ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ.

ಕಾನೂನು ಪರಿಪಾಲನೆಗಳ ಕುರಿತು ಚರ್ಚೆ
ಬೆಂಗಳೂರು ಚಾಮರಾಜಪೇಟೆ ಮಾದರಿಯಲ್ಲಿ ಒಂದು ದಿನ ಅಥವಾ ಮೂರು ದಿನ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೂ ಕಾನೂನು ಪರಿಪಾಲನೆಗಳ ಬಗ್ಗೆ ಚರ್ಚೆ ಮಹತ್ವದ್ದಾಗಿದೆ. ಅನುಮತಿ ಇಲ್ಲದೆ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಚಟುವಟಿಕೆಗಳನ್ನು ನಡೆಸಬಾರದು. ಪೂಜಾ ಕಾರ್ಯಕ್ರಮಗಳನ್ನು ಬೆಳಗ್ಗೆ 6ರಿಂದ ಸಂಜೆ 6ರೊಳಗೆ ಮುಗಿಸಬೇಕು. ಅತಿಯಾದ ಡಿಜೆ ಬಳಕೆ, ಇತರರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಈ ಕುರಿತು ಕಟ್ಟು ನಿಟ್ಟಿನಲ್ಲಿ ಕೆಲವು ನಿಬಂಧನೆಗಳು ಅವ್ವಯ ಆಗಬಹುದು. ಈಗಾಗಲೇ 8 ಅರ್ಜಿಗಳು ಬಂದಿದ್ದು, ಕಾನೂನು ತಜ್ಞರು, ವಿವಿಧ ಮುಖಂಡರ ಜೊತೆ ಚರ್ಚಿಸಿ ಸಮಿತಿಯು ಸೋಮವಾರ ಬೆಳಗ್ಗೆ 11ಗಂಟೆಗೆ ಮಹಾಪೌರರಿಗೆ ಅಂತಿಮ ವರದಿ ನೀಡಲಿದೆ.












Click it and Unblock the Notifications