ಸಿ.ಟಿ.ರವಿ ಪ್ರಕರಣ: ಕೇಂದ್ರ ಸಚಿವರ ಅಸಮರ್ಥರೆಂದರೆ ಒಪ್ಪಿಕೊಳ್ತಾರಾ?: ಜಿ.ಪರಮೇಶ್ವರ ಗರಂ
ಹುಬ್ಬಳ್ಳಿ, ಡಿಸೆಂಬರ್ 24: ಸುವರ್ಣಸೌಧದಲ್ಲಿ ಸಚಿವೆಗೆ ಅಶ್ಲೀಲ ಪದ ಬಳಿಸಿದ್ದಾರೆ ಎಂದು ಆರೋಪಿಸಲಾದ ಸಿಟಿ ರವಿ ಅವರ ಬಂಧನ, ನಂತರ ನಡೆದ ಒಂದಷ್ಟು ಘಟನಾವಳಿಗೆ ಸಂಬಂಧಿಸಿದಂತೆ ವ್ಯಾಪಕ ಆರೋಪಗಳು ಕೇಳಿ ಬರುತ್ತಿವೆ. ಸರ್ಕಾರದ ವಿರುದ್ಧ ಕಿಡಿ ಕಾರಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಗೃಹ ಸಚಿವ ಜಿ.ಪರಮೇಶ್ವರ ಅವರ ತಿರುಗೇಟು ನೀಡಿದ್ದಾರೆ. ಅಸಮರ್ಥ ಕೇಂದ್ರ ಸಚಿವ ಎಂದರೆ ಒಪ್ಪಿಕೊಳ್ತಾರಾ ಎಂದು ಅವರು ಪ್ರಶ್ನಿಸಿದ್ದಾರೆ.
ಮಂಗಳವಾರ ಹುಬ್ಬಳ್ಳಿಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಮಾತನಾಡಿ, ಗೃಹ ಸಚಿವರ ಕುರಿತು ಪ್ರಹ್ಲಾದ್ ಜೋಶಿ ಲೇವಡಿ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಪ್ರಹ್ಲಾದ್ ಜೋಶಿ ಅಸಮರ್ಥ ಕೇಂದ್ರ ಸಚಿವ ಎಂದರೆ ಒಪ್ಪಿಕೊಳ್ತಾರಾ..?. ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ ಅದಕ್ಕೆ ಅವರು ಹಾಗೆ ಹೇಳಿದ್ದಾರೆ. ವಿಧಾನಸಭಾ ಪರಿಷತ್ ಸದಸ್ಯ ಸಿಟಿ ರವಿ ಪ್ರಕರಣವನ್ನು ಈಗಾಗಲೇ ಸಿಓಡಿ ತನಿಖೆಗೆ ಒಪ್ಪಿಸಲಾಗಿದ್ದು. ಈ ಪ್ರಕರಣದ ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ ಎಂದರು.

ತನಿಖೆ ಸಮಯದಲ್ಲಿ ಹೇಳಿಕೆ ಸರಿಯಲ್ಲ
ಸಿಟಿ ರವಿ ಅವರ ಪ್ರಕರಣವು ತನಿಖೆ ನಡೆಯುತ್ತಿದೆ. ಈ ವೇಳೆ ನಾವು ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಸಿಟಿ ರವಿ ಪ್ರಕರಣ ಮುಗಿದ ಅಧ್ಯಾಯ ಎಂಬ ಸ್ಪೀಕರ್ ಹೇಳಿಕೆ ವಿಚಾರವಾಗಿ ಸಹ ಮಾತನಾಡಿದ ಅವರು, ಸಭಾಪತಿಗಳು ತಮ್ಮ ಕೆಲಸ ತಾವು ಮಾಡುತ್ತಾರೆ.
ಪ್ರಕರಣ ಸಂಬಂಧ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲಿಯ ಸಾಧಕ ಬಾಧಕಗಳನ್ನ ನೋಡಿಕೊಂಡು ಹೇಳಿಕೆ ಕೊಟ್ಟಿರಬಹುದು. ಕಾನೂನು ಪ್ರಕ್ರಿಯೆ ನಡೆಯುವಾಗ ಕೆಲವು ವಿಳಂಬವಾಗಬಹುದು. ಅದರೆ ತನಿಖೆಯನ್ನು ಸರಿಯಾಗಿ ಮಾಡಬೇಕಾಗುತ್ತದೆ. ಪ್ರಕರಣದ ಸತ್ಯಾಸತ್ಯತೆ ನೋಡಬೇಕಿದೆ ಎಂದರು.
ಒಂದು ಕಡೆ ಸಿಟಿ ರವಿ ಅವರು ತಾವು ಆ ರೀತಿಯಾಗಿ ಏನು ಹೇಳಿಲ್ಲ ಎನ್ನುತ್ತಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪಕ್ಕದಲ್ಲಿದ್ದವರು ಆ ಮಾತು ಹೇಳಿದ್ದಾರೆ ಎಂದಿದ್ದಾರೆ. ಇದೆಲ್ಲದರ ಬಗ್ಗೆ ತನಿಖೆ ಆಗಲೆಂದೇ ಸಿಓಡಿಗೆ ಹಸ್ತಾಂತರ ಮಾಡಲಾಗಿದೆ.
ಪೊಲೀಸರು ಇವರ ಆದೇಶ ಮಾತ್ರ ಪಾಲಿಸುತ್ತಾರೆ
ಇನ್ನೂ ಸಿಟಿ ರವಿ ಅವರ ಮೇಲೆ ಹಲ್ಲೆ ಮಾಡಿದವರ ಮೇಲೆ ಪ್ರಕರಣದ ತನಿಖೆ ವಿಳಂಬ ಆಗುತ್ತಿದೆ ಎಂಬ ಆರೋಪ, ಇಲ್ಲಿ ಕೆಲವು ಕಾರಣಕ್ಕೆ ವಿಳಂಬ ಆಗಿರಬಹುದು. ಗೃಹ ಇಲಾಖೆಯ ಹಸ್ತಕ್ಷೇಪ ಬಗ್ಗೆ ಆರೋಪಿಸಲಾಗಿದೆ. ಪೊಲೀಸ್ ಇಲಾಖೆ ಜವಾಬ್ದಾರಿಯುತ ಇಲಾಖೆಯಾಗಿದೆ.
ಮುಖ್ಯಮಂತ್ರಿ ಅಥವಾ ಗೃಹ ಸಚಿವರ ಆದೇಶವನ್ನು ಮಾತ್ರ ಪೊಲೀಸರು ಪಾಲನೆ ಮಾಡುತ್ತಾರೆ. ಬೇರಾವ ಆದೇಶ ಮಾಡಿದ್ರೂ ಅದನ್ನು ಪಾಲನೆ ಮಾಡುವುದಿಲ್ಲ. ಅವರಿವರು ಆರೋಪ ಮಾಡುತ್ತಾರೆ ಎಂದು ನಾವು ಗೃಹ ಇಲಾಖೆ ನಡೆಸುವುದುಲ್ಲ. ಅದಕ್ಕೊಂದು ಕಾನೂನು ಚೌಕಟ್ಟಿದೆ. ಅದರಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.












Click it and Unblock the Notifications