ಹುಬ್ಬಳ್ಳಿ: ಪಂಚಮಸಾಲಿ ಸಮಾಜದಿಂದ 2ಎ ಮೀಸಲಾತಿಗಾಗಿ ಪಂಚಲಕ್ಷ ಪತ್ರ ಚಳವಳಿ
ಹುಬ್ಬಳ್ಳಿ, ಆ.25 ; ಲಿಂಗಾಯತ ಧರ್ಮದಲ್ಲಿನ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ. ಆದರೂ ಕೂಡ ಪಂಚಮಸಾಲಿ ಸಮಾಜದವರ ಹೋರಾಟ ಮಾತ್ರ ಕುಗ್ಗಿಲ್ಲ. ಯಾವುದೇ ಕಾರಣಕ್ಕೂ ಮೀಸಲಾತಿ ಪಡೆದೇ ತಿರುತ್ತೇವೆ ಎಂಬ ಪಣ ತೊಟ್ಟಿದ್ದಾರೆ. ಕಳೆದ ಹಲವಾರು ದಿನಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಮುಖ್ಯಮಂತ್ರಿಗಳಿಗೆ, ಸರ್ಕಾರಕ್ಕೆ, ಸಮಾಜದ ಪ್ರಮುಖರಿಗೆ, ಅಧಿಕಾರಿಗಳಿಗೆ ಹಾಗೂ ಪಂಚಮಸಾಲಿ ಸಮಾಜದ ಸಚಿವರು, ಶಾಸಕರಿಗೆ ಬಿಸಿ ಮುಟ್ಟಿಸುತ್ತಲೇ ಇದ್ದಾರೆ. ಇದೀಗ ಪಂಚಲಕ್ಷ ಪತ್ರಗಳನ್ನು ಬರೆಯುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹೊರಟಿದ್ದಾರೆ.
ಈಗ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಮುಂಚೂಣಿಯಲ್ಲಿದ್ದಾರೆ. ಸಮಾಜದ ಹಿರಿಯ ಮುಖಂಡರಾದ ಗಂಗಾಧರ ದೊಡ್ಡವಾಡ ಅವರು ಹೋರಾಟ ತೀವ್ರಗೊಳಿಸಲು ಮುಂದಾಗಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಇದೀಗ ಹೋರಾಟ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ. ಹುಬ್ಬಳ್ಳಿಯಲ್ಲಿ ಪಂಚ ಲಕ್ಷ ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಬರೆಯುವ ಮೂಲಕ ಸರ್ಕಾರದ ಕಣ್ಣು ತೆರೆಸಲು ಮುಂದಾಗಿದ್ದಾರೆ. ಹೀಗೆ ಸಮಾಜದ ಪಂಚ ಲಕ್ಷ ಪತ್ರ ಬರೆಯುವ ಚಳವಳಿ ಆರಂಭಕ್ಕೆ ಚಾಲನೆ ನೀಡಲಾಯಿತು.
ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಕುಮಾರಿ ಅಕ್ಷರ ಕೊಟಗಿ ಅವರ ಐದನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಹುಟ್ಟುಹಬ್ಬ ಅಂಗವಾಗಿ ಪಂಚಮಸಾಲಿ ಮೀಸಲಾತಿ ಚಳುವಳಿಗೆ ಮೊದಲ ಪತ್ರ ಬರೆಯುವ ಮೂಲಕ ಗಮನ ಸೆಳೆದಳು. ಸರ್ಕಾರ ಅನೇಕ ರೀತಿಯಲ್ಲಿ ಭರವಸೆ ನೀಡಿದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಮಾತ್ರ ಹಿಂದೇಟು ಹಾಕುತ್ತಿದ್ದು, ಇದು ನಿರ್ಲಕ್ಷ್ಯ ಧೋರಣೆ ಎಂದು ಕಿಡಿ ಕಾರಿದರು. ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ಪಟ್ಟು ಹಿಡಿದಿದ್ದಾರೆ.

ಎಲ್ಲ ರೀತಿಯ ಮೀಸಲಾತಿಗೆ ಸಮಾಜ ಯೋಗ್ಯವಾಗಿದೆ. ಆದರೆ, ಸರ್ಕಾರ ಮೀನಮೇಷ ತೋರುತ್ತಿರುವುದು ಸರಿಯಲ್ಲ. ಇದು ತುಂಬಾ ವಿಷಾದನೀಯ ಸಂಗತಿ ಎಂದು ಪಂಚಮಸಾಲಿ ಸಮಾಜದವರು ಆಕ್ರೋಶ ಹೊರಹಾಕಿದರು. ಮೀಸಲಾತಿಗೆ ಕೇಲವರು ವಿರೋಧ ವ್ಯಕ್ತಪಡಿಸುತಿದ್ದು, ಇದು ಸರಿಯಲ್ಲ ಎಂದು ಅಭಿಪ್ರಯವನ್ನೂ ವ್ಯಕ್ತಪಡಿಸಿದರು. ಆದ್ದರಿಂದ ನಾವು ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯುವುದಿಲ್ಲ. ಸರ್ಕಾರ ನಮಗೆ 2ಎ ಮೀಸಲಾತಿ ನೀಡಬೇಕು. ನಮ್ಮ ಸಮಾಜದಲ್ಲಿ ಅನೇಕರು ಬಡವರು, ಹಿಂದುಳಿದವರು ಇದ್ದಾರೆ. ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಪ್ರಥಮ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರ ಮಾರ್ಗದಲ್ಲಿ ಈ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿದೆ. ಯಾರೇ ಎಷ್ಟೇ ವಿರೋಧ ಮಾಡಲಿ, ನಿರ್ಲಕ್ಷ್ಯ ಮಾಡಲಿ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಇದೀಗ ಐದು ಲಕ್ಷ ಪತ್ರಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬರೆಯಲು ಚಾಲನೆ ನೀಡಲಾಗಿದೆ ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಗಂಗಾಧರ ದೊಡ್ಡವಾಡ ಹೇಳಿದರು. ಆಗಸ್ಟ್ 22ರ ಒಳಗಾಗಿ ಪಂಚಮಸಾಲಿ ಸಮುದಾಯದವರಿಗೆ 2ಎ ಮೀಸಲಾತಿ ಕೊಡುವುದಕ್ಕೆ ಕ್ರಮ ತೆಗೆದುಕೊಳ್ಳುವತ್ತೇವೆ ಎಂದು ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದರು. ಆದರೆ ಈಗ ಮತ್ತೆ ಹಿಂದುಳಿದ ಆಯೋಗದ ವರದಿ ಬರಬೇಕು ಎಂದಿದ್ದಾರೆ. ಸರ್ಕಾರ ಯಾವುದೇ ರೀತಿಯ ಕುಂಟು ನೆಪಗಳಿಗೆ ಬಗ್ಗದೆ ಸಮಾಜ ಒಗ್ಗೂಡಿಸಿ ಹೋರಾಟಕ್ಕೆ ಇಳಿಯಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶಾಸಕ ಅರವಿಂದ್ ಬೆಲ್ಲದ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ್, ಷಡಕ್ಷರಿ ಸೇರಿದಂತೆ ವಕೀಲರು, ಉದ್ಯಮಿಗಳು, ಸಮಾಜ ಹಿರಿಯರು ಸಕ್ರಿಯವಾಗಿ ಹೋರಾಟಕ್ಕೆ ಕೈಜೋಡಿಸಿದ್ದಾರೆ ಎಂದರು.
ಪಂಚಮಸಾಲಿ ಸಮುದಾಯದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಬೆಳೆಯುವ ಮೂಲಕ ಉದ್ಯೋಗ ಪಡೆದು ಮುಂದೆ ಬರಬೇಕು. ಹೋರಾಟವನ್ನು ಹತ್ತಿಕ್ಕಲು ಮುಂದಾಗಿರುವ ಕೆಲವು ದುಷ್ಟ ಶಕ್ತಿಗಳಿಗೆ ಮುಂಬರುವ ದಿನಗಳಲ್ಲಿ ಭಾರಿ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಪಂಚಮಸಾಲಿ ಸಮಾಜದ ಪ್ರಮುಖರು ಎಚ್ಚರಿಕೆ ನೀಡಿದರು.












Click it and Unblock the Notifications