ದಲಿತ ಸಿಎಂ ಹೆಸರಲ್ಲಿ ನನಗೆ ಅವಮಾನ ಮಾಡಬೇಡಿ: ಖರ್ಗೆ ಮನವಿ
ಹುಬ್ಬಳ್ಳಿ, ಮೇ 15: ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದಿದ್ದರೂ ಅವರಿಗೆ ಅವಕಾಶ ಸಿಕ್ಕಿಲ್ಲ. ಮುಂದೆ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಹೇಳಿಕೆಗಳನ್ನು ಕೇಳಿ ಬೇಸತ್ತಿರುವ ಖರ್ಗೆ, ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಪದೇ ಪದೇ ದಲಿತ ಮುಖ್ಯಮಂತ್ರಿ ಎಂಬ ಹೆಸರು ಪ್ರಸ್ತಾಪ ಮಾಡಿ ನನಗೆ ಅವಮಾನ ಮಾಡಬೇಡಿ ಎಂದು ತಮ್ಮದೇ ಪಕ್ಷದ ನಾಯಕರ ವಿರುದ್ಧ ಸಿಡಿಮಿಡಿ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸ್ವಪಕ್ಷೀಯರು ಮತ್ತು ಮಿತ್ರಪಕ್ಷದವರ ಹೇಳಿಕೆಗಳಿಂದ ತಮಗೆ ಮುಜುಗರ ಉಂಟಾಗುತ್ತಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತದೆ. ನಂತರ ನಾನೂ ಈ ಬಗ್ಗೆ ಕೇಳುವುದಿಲ್ಲ, ಅವರೂ ಈ ಬಗ್ಗೆ ಹೇಳುವುದಿಲ್ಲ ಎಂದು ಅಸಮಾಧಾನ ತೋರಿಸಿದರು.
ತಮ್ಮ ವಿರುದ್ಧ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುದ್ಧ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು. ಜಾಧವ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದೇ ನಾನು ಮತ್ತು ಧರ್ಮಸಿಂಗ್ ಎಂದು ಹೇಳಿದರು.
ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಕೆಲವು ನಾಯಕರು ತಮ್ಮನ್ನು ಸೋಲಿಸಲು ಕುತಂತ್ರ ಮಾಡಿದ್ದಾರೆ. ಆದರೆ ಅದು ಯಾವತ್ತಿಗೂ ಫಲಿಸುವುದಿಲ್ಲ. ಸಂಸತ್ನಲ್ಲಿ ಬೇರೆಯವರಂತೆ ನಾನು ನಿದ್ರಿಸಿಲ್ಲ ಎಂದು ಕಿಡಿಕಾರಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಎಂದೋ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಮೈತ್ರಿ ಸರ್ಕಾರಕ್ಕೂ ಅವರೇ ಸಿಎಂ ಆಗಬೇಕಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ಗೆ ಕೊಟ್ಟ ಮಾತಿಗೆ ಅವರು ಬದ್ಧರಾಗಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ಮಂಗಳವಾರ ಹೇಳಿದ್ದರು.
ಖರ್ಗೆ ಅವರಿಂದ ರಾಜಕೀಯವಾಗಿ ಬೆಳೆದವರು ಇಂದು ಅವರ ವಿರುದ್ಧವೇ ತೊಡೆ ತಟ್ಟಿ ಭಾಷಣ ಮಾಡುತ್ತಿದ್ದಾರೆ. ಹೈದರಾಬಾದ್-ಕರ್ನಾಟಕ ಭಾಗದ ಜನರಿಗೆ ಪ್ರಾಮಾಣಿಕ ಕೊಡುಗೆ ಕೊಟ್ಟ ಖರ್ಗೆ ಅವರನ್ನು ಟೀಕಿಸಲಾಗುತ್ತಿದೆ' ಎಂದು ಕುಮಾರಸ್ವಾಮಿ ಹೇಳಿದ್ದರು.












Click it and Unblock the Notifications