ದಶಕದ ಸಮಸ್ಯೆಗೆ ಕೊನೆಗೂ ಮುಕ್ತಿ: ತ್ಯಾಜ್ಯ ವಿಲೇವಾರಿಗೆ ಟೆಂಡರ್ ಕರೆದ ಧಾರವಾಡ ಪಾಲಿಕೆ
ಹುಬ್ಬಳ್ಳಿ, ಮೇ 16:ಅಂತೂ ಇಂತೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ತ್ಯಾಜ್ಯಕ್ಕೆ ಮುಕ್ತಿ ನೀಡಲು ಮುಂದಾಗಿದೆ. ಮಹಾನಗರ ಪಾಲಿಕೆಯ ಹುಬ್ಬಳ್ಳಿ ಮತ್ತು ಧಾರವಾಡದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ದಶಕಗಳಿಂದ ಕೊಳೆಯುತ್ತ ಬಿದ್ದಿರುವ ತ್ಯಾಜ್ಯಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಬಂದಿದೆ. ಈ ನಿಟ್ಟಿನಲ್ಲಿ ವಿನೂತನ ಕಾರ್ಯದ ಮೂಲಕ ಹೊಸ ನಿರ್ಧಾರಕ್ಕೆ ಬಂದಿದೆ.
ಹುಬ್ಬಳ್ಳಿಯ ಕಾರವಾರ ರಸ್ತೆಯ ಕೆಂಪಗೇರಿ ಮತ್ತು ಧಾರವಾಡದ ಹೊಸ ಯಲ್ಲಾಪುರದ ತ್ಯಾಜ್ಯ ಘಟಕದಲ್ಲಿ ವರ್ಷಗಳಿಂದ ಗುಡ್ಡದಂತೆ ಸಂಗ್ರಹವಾಗಿರುವ ತ್ಯಾಜ್ಯದ ವಿಲೇವಾರಿಗೆ ಪಾಲಿಕೆ ಟೆಂಡರ್ ಕರೆದಿದೆ. ಕೆಂಪಗೇರಿ ಘಟಕದಲ್ಲಿರುವ ಅಂದಾಜು 3.6 ಲಕ್ಷ ಟನ್ ಹಳೆಯ ತ್ಯಾಜ್ಯ ತೆರವಿಗೆ 22.70 ಕೋಟಿ ಮತ್ತು ಹೊಸ ಯಲ್ಲಾಪುರದಲ್ಲಿರುವ 1.2 ಲಕ್ಷ ಟನ್ ತ್ಯಾಜ್ಯ ತೆರವಿಗೆ 7.15 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ.

ಇನ್ನೂ ವಿಲೇವಾರಿ ಘಟಕದ ಹೆಚ್ಚಿನ ಜಾಗವನ್ನು ಅತಿಕ್ರಮಿಸಿದ್ದ ವಿಲೇವಾರಿಯಾಗದ ತ್ಯಾಜ್ಯದ ತೆರವಿಗಾಗಿ ಸಿದ್ಧ ಪಡಿಸಿದ್ದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ರಾಜ್ಯ ಸರ್ಕಾರದ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿತ್ತು. ಹಳೆಯ ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್ ಸೇರಿದಂತೆ ಆರ್ಡಿಎಫ್ (ತ್ಯಾಜ್ಯದಿಂದ ಸಿಗುವ ಇಂಧನ) ವಸ್ತುಗಳನ್ನು ಸಿಮೆಂಟ್ ಕಾರ್ಖಾನೆಗಳಿಗೆ ಕಳಿಸಲಾಗುವುದು.
ಕಟ್ಟಡ ಅವಶೇಷಗಳನ್ನು ವಿಂಗಡಿಸಿ ಬೇರೆ ಕಡೆಗೆ ಸಾಗಿಸಲಾಗುವುದು. ತಗ್ಗು ಪ್ರದೇಶಗಳಿಗೂ ಹಾಕಲಾಗುವುದು. ತ್ಯಾಜ್ಯ ತೆರವಾದ ಬಳಿಕ, ಆ ಜಾಗವನ್ನು ಕೆಲ ವರ್ಷ ಹಾಗೆಯೇ ಬಿಟ್ಟು, ನಂತರ ಆ ಜಾಗವನ್ನು ಇತರ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ಧಾರವಾಡದ 16 ಎಕರೆಯಲ್ಲಿ ಮತ್ತು ಹುಬ್ಬಳ್ಳಿಯಲ್ಲಿ 19 ಎಕರೆ 15 ಗುಂಟೆ ಜಾಗದಲ್ಲಿ ಹಳೆಯ ತ್ಯಾಜ್ಯ ಹರಡಿ ಕೊಂಡಿದೆ. ಹುಬ್ಬಳ್ಳಿ ತ್ಯಾಜ್ಯ ತೆರವಿಗೆ 15 ತಿಂಗಳು ಮತ್ತು ಧಾರವಾಡದ ತ್ಯಾಜ್ಯವನ್ನು 11 ತಿಂಗಳಲ್ಲಿ ತೆರವು ಮಾಡಲು ಕಾಲಾವಕಾಶ ನಿಗದಿಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.












Click it and Unblock the Notifications