ಹುಬ್ಬಳ್ಳಿಯಲ್ಲಿ ಜೋಳದ ರೊಟ್ಟಿ ಸವಿದು ದೇಶ, ರಾಜ್ಯ ರಾಜಕಾರಣ ಚರ್ಚಿಸಿದ ದೇವೇಗೌಡರು
ಹುಬ್ಬಳ್ಳಿ, ಜುಲೈ 15: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ದೇವೇಗೌಡರು ಇಂದು ಪಕ್ಷದ ಮುಖಂಡ ಬಸವರಾಜ ಹೊರಟ್ಟಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಸಚಿವ ಸ್ಥಾನ ಸಿಗದೆ ಅತೃಪ್ತಿ ಹೊರಹಾಕಿದ್ದ ಬಸವರಾಜ ಹೊರಟ್ಟಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಅವರು, ಅತೃಪ್ತಿ ಶಮನ ಮಾಡಿದ್ದಾರೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆಗೆ ಸೂಚನೆ ನೀಡಿದ್ದಾರೆ.
ಹೊರಟ್ಟಿ ಅವರ ಮನೆಗೆ ಬೆಳಿಗ್ಗೆ ಭೇಟಿ ನೀಡಿದ್ದ ದೇವೇಗೌಡರು ಜೋಳದ ರೊಟ್ಟಿ ಸವಿದರು. ಅಲ್ಲದೆ ವಿವಿಧ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿ, ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ಆ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ದೇಶದಲ್ಲಿ ತೃತೀಯ ರಂಗ ಇನ್ನೂ ಅಸ್ಥಿತ್ವಕ್ಕೆ ಬಂದಿಲ್ಲ ಎಂದ ಅವರು, ತೃತೀಯ ರಂಗ ಅಸ್ಥಿತ್ವಕ್ಕೆ ಬಂದರೆ ಅದರ ಉಸ್ತುವಾರಿಯನ್ನು ನಾನು ವಹಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಮಹಾಘಟಬಂಧನ ಇನ್ನೂ ಖಾತ್ರಿಯಾಗಿಲ್ಲ
ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷವೇ ವಿರೋಧಿಯಾಗಿವೆ ಹಾಗಾಗಿ ಚುನಾವಣೆಗೆ ಮುಂಚೆ ಕೆಲವೆಡೆ ಮೈತ್ರಿ ಆದರೆ ಕೆಲವೆಡೆ ಚುನಾವಣೆ ನಂತರ ಆಗಬಹುದು ಇನ್ನೂ ಯಾವುದೂ ನಿರ್ಧಾರವಾಗಿಲ್ಲ ಎಂದು ಅವು ಸ್ಪಷ್ಟನೆ ನೀಡಿದರು. ಕುಮಾರಸ್ವಾಮಿ ಪ್ರಮಾಣವಚನದ ವೇಳೆ ವೇದಿಕೆ ಮೇಲೆ ಹಾಜರಿದ್ದ 23 ನಾಯಕರೂ ಒಟ್ಟಾಗಿಯೇ ಚುನಾವಣೆ ಎದುರಿಸುತ್ತಾರೆ ಎಂದು ನಾನು ಹೇಳಲಾರೆ. ಆದರೆ ಅವರೆಲ್ಲಾ ಬಿಜೆಪಿಯ ವಿರುದ್ಧ ಇದ್ದಾರೆ ಹಾಗೂ ಅದರ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದರು.

ನಾನೇ ಪಕ್ಷ ಸಂಘಟನೆ ಮಾಡುತ್ತೇನೆ
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಮೇಲೆ ಪಕ್ಷದ ಸಂಘಟನೆಗೆ ಹೆಚ್ಚು ಸಮಯ ಸಿಗುತ್ತಿಲ್ಲ. ಮುಖ್ಯಮಂತ್ರಿಯಾಗಿ ಅವರು 18 ಗಂಟೆಗಳ ಕಾಲ ರಾಜ್ಯಕ್ಕಾಗಿ ದುಡಿಯುತ್ತಿದ್ದಾರೆ ಹಾಗಾಗಿ ಅವರ ಬದಲಿಗೆ ನಾನೇ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದು ದೇವೇಗೌಡ ಅವರು ಹೇಳಿದರು.

ಉ.ಕರ್ನಾಟಕ್ಕೆ ಅನ್ಯಾಯವಾಗಲು ಎಚ್ಡಿಕೆ ಬಿಡರು
ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಕುಮಾರಸ್ವಾಮಿ ಬಿಡುವುದಿಲ್ಲ ಎಂದ ದೇವೇಗೌಡರು, ಉತ್ತರ ಕರ್ನಾಟಕಕ್ಕೆ ಬಿಜೆಪಿ ಕೊಟ್ಟ ಕೊಡುಗೆ ಏನು ಜೆಡಿಎಸ್ ಕೊಟ್ಟ ಕೊಡುಗೆ ಏನು ಎಂಬುದರ ಬಗ್ಗೆ ಬೇಕಾದರೆ ವಿಧಾನಸಭೆಯಲ್ಲಿ ಚರ್ಚೆಯಾಗಲಿ ಎಂದು ಅವರು ಹೇಳಿದರು. ಈ ಬಗ್ಗೆ ಶ್ವೇತ ಪತ್ರ ಹೊರಡಿಸುವಂತೆ ಕುಮಾರಸ್ವಾಮಿಗೆ ನಾನು ಹೇಳುತ್ತೇನೆ ಎಂದು ಅವರು ಹೇಳಿದರು.

ಎಚ್ಕೆ ಪಾಟೀಲರ ವಿರುದ್ಧ ಗರಂ
ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ. ನನ್ನ ಕಾಲದಲ್ಲಿ ಅನೇಕ ಅಭಿವೃದ್ಧಿಯಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕಕ್ಕೆ ಎಷ್ಟು ಸಚಿವ ಸ್ಥಾನ ಕೊಟ್ಟಿದ್ದರು, ಎಚ್.ಕೆ.ಪಾಟೀಲರು ಈಗ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಅವರು ಈ ಹಿಂದೆ ಸಚಿವರಾಗಿದ್ದಾಗ ತಮ್ಮ ಗದಗ ಜಿಲ್ಲೆಗೆ ಎಷ್ಟು ಹಣ ನೀಡಿದ್ದಾರೆ ಎಂದು ಹೇಳಲಿ. ಉತ್ತರ ಕರ್ನಾಟಕಕ್ಕೆ ಯಾವುದೇ ತಾರತಮ್ಯವಾಗಿಲ್ಲ. ಭಾಷಾವಾರು ಪ್ರಾಂತ್ಯದ ನಂತರ ಉತ್ತರ ಕರ್ನಾಟಕಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬುದನ್ನು ಲೆಕ್ಕ ತರಿಸುತ್ತೇನೆ ಎಂದು ಗೌಡರು ಹೇಳಿದರು.












Click it and Unblock the Notifications