ದೀಪಾವಳಿಗೆ ಹೆಂಡತಿ ಮನೆಗೆ ಹೋದ ವ್ಯಕ್ತಿ ಶವವಾಗಿ ಪತ್ತೆ
ಹುಬ್ಬಳ್ಳಿ, ನವೆಂಬರ್ 3: ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ಗದಗ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿಯ ಮಗ ಸಂತೋಷ ಶಂಕ್ರಪ್ಪ ಪೂಜಾರ (36) ಮೃತರು ಎಂದು ಗುರುತಿಸಲಾಗಿದೆ. ಹೆಂಡತಿಯ ಮನೆಗೆ ದೀಪಾವಳಿ ಹಬ್ಬ ಆಚರಿಸಲು ತೆರಳಿದ್ದ ಸಂತೋಷ ಅವರು ಮೃತಪಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ.
ಕೊಲೆ ಶಂಕೆ ವ್ಯಕ್ತವಾಗಿದ್ದು, ಕೂಡಲೇ ಈ ಬಗ್ಗೆ ತನಿಖೆ ಕೈಗೊಳ್ಳಬೇಕೆಂದು ಮೃತ ಸಂತೋಷ ಆವರ ಸಂಬಂಧಿಕರು ಹೇಳಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಹಿಳೆ ನಾಪತ್ತೆ: ನಗರದ ಉಣಕಲ್ ನಿವಾಸಿ ಶಿವಲೀಲಾ ಪ್ರತಾಪಸಿಂಗ್ ಅಂಗಡಿ (54) ಎಂಬ ಮಹಿಳೆ ಅಕ್ಟೋಬರ್ 27 ರಿಂದ ಕಾಣೆಯಾಗಿದ್ದಾರೆ ಎಂದು ಅವರ ಪತಿ ಪ್ರತಾಪಸಿಂಗ್ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತನ್ನ ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಹೇಳಿದ್ದ ಶಿವಲೀಲಾ, ಇದುವರೆಗೂ ಬಂದಿಲ್ಲ ಎಂದು ದೂರು ನೀಡಲಾಗಿದೆ.
ಯುವತಿ ನಾಪತ್ತೆ: ನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ದೀಪಾವಳಿ ಹಬ್ಬದ ದಿನದಿಂದ ಕಾಣೆಯಾದ ಪ್ರಕರಣ ದಾಖಲಾಗಿದೆ. ಅಶ್ವಮೇಧ ಪಾರ್ಕ್ ನಿವಾಸಿ ಅಕ್ಷತಾ ಸಿದ್ಧಲಿಂಗಯ್ಯ ನರೇಗಲಮಠ (19) ಅ.28 ರಂದು ಹಬ್ಬಕ್ಕಾಗಿ ಗೆಳತಿಯ ಮನೆಗೆ ಹೋಗಿ ಬರುತ್ತೇನೆ ಎಂದು ಹೋದವಳು ಇದುವರೆಗೂ ಬಂದಿಲ್ಲ ಎಂದು ಅಕ್ಷತಾ ತಂದೆ ಸಿದ್ಧಲಿಂಗಯ್ಯ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ: ಸಂಚಾರ ನಿಯಮ ಉಲ್ಲಂಘನೆಯ 681 ಪ್ರಕರಣ ದಾಖಲಿಸಿ, 1,22,000 ರುಪಾಯಿ ದಂಡ ವಸೂಲಿ ಮಾಡಲಾಗಿದೆ.












Click it and Unblock the Notifications