ರಣಜಿ ಟ್ರೋಫಿ: ಮುಂಬಯಿ-ಗುಜರಾತ್ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ
ಹುಬ್ಬಳ್ಳಿ, ನವೆಂಬರ್, 21 : ಸ್ಥಳೀಯ ರಾಜನಗರ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬಯಿ ಮತ್ತು ಗುಜರಾತ್ ನಡುವಿನ ರಣಜಿ ಕ್ರಿಕೆಟ್ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ರಣಜಿ ಕ್ರಿಕೆಟ್ ವೀಕ್ಷಿಸಲು ಪ್ರೇಕ್ಷಕರು ಇಲ್ಲದೆ ಕ್ರೀಡಾಂಗಣ ಬಿಕೋ ಎನ್ನುತ್ತಿದೆ.
ಈ ಹಿಂದೆ ಕೆಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯಿದ್ದಾಗಲೂ ಪ್ರೇಕ್ಷಕರು ಅಷ್ಟೇನೂ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿರಲಿಲ್ಲ. ಹೀಗಾಗಿ ತಂಡಗಳನ್ನು ಪ್ರಾಯೋಜಿಸಿದ ಕಂಪನಿಗಳೇ ಶಾಲಾ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಮಾಡಿ ಪ್ರೇಕ್ಷಕರ ಕೊರತೆ ನೀಗಿಸಿದ್ದವು.

ಈಗ ರಣಜಿ ಪಂದ್ಯಾವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಯೋಜಕರಿಲ್ಲದಿರುವುದು ಕೂಡ ಪ್ರೇಕ್ಷಕರನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕ್ರೀಡಾಂಗಣದ ಸಿಬ್ಬಂದಿ. ಕೆಪಿಎಲ್ ಪಂದ್ಯಾವಳಿಗಳನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತಿತ್ತು.
ಆದರೆ ರಣಜಿ ಪಂದ್ಯಗಳನ್ನು ಇದುವರೆಗೂ ನೇರಪ್ರಸಾರ ಮಾಡಿಲ್ಲ. ಹೀಗಿದ್ದಾಗಿಯೂ ಪ್ರೇಕ್ಷಕರು ಮೈದಾನದತ್ತ ಸುಳಿಯುತ್ತಿಲ್ಲ. ಇನ್ನು ನಗರದ ಪ್ರದೇಶದಿಂದ ಕ್ರೀಡಾಂಗಣವು ದೂರವಾಗಿರುವುದು ಮತ್ತು ಪಾರ್ಕಿಂಗ್ ಸಮಸ್ಯೆಯೂ ಹೆಚ್ಚಿದೆ.
ಹೀಗಾಗಿ ಕೆಲ ಕ್ರಿಕೆಟ್ ಅಭಮಾನಿಗಳು ಕ್ರೀಡಾಂಗಣದತ್ತ ಸುಳಿಯುತ್ತಿಲ್ಲ. ಇರುವ ಒಂದೇ ಗ್ಯಾಲರಿಗೆ ಈಗಾಗಲೇ ಪೆಂಡಾಲ್ ಹಾಕಲಾಗಿದೆ. ಕ್ರೀಡಾಸಕ್ತರಿಗಾಗಿ ಉಚಿತವಾಗಿಯೇ ಪ್ರವೇಶ ನೀಡಿದ್ದೇವೆ.
ಮೊದಲನೇ ಗೇಟ್ ನಿಂದ ಆಟಗಾರರಿಗೆ ಮತ್ತು ಅಧಿಕಾರಿಗಳನ್ನು ಬಿಡಲಾಗುತ್ತಿದೆ. 4 ನೇ ಗೇಟ್ ನಿಂದ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಗ್ಯಾಲರಿ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುದರಿಂದ 2 ಮತ್ತು 3 ಗೇಟ್ ಗಳನ್ನು ಬಂದ್ ಮಾಡಲಾಗಿದೆ ಎಂದು ಕೆಎಸ್ಸಿಎ ಧಾರವಾಡ ವಲಯದ ನಿಯಂತ್ರಕ ಬಾಬಾ ಭೂಸದ ಹೇಳಿದ್ದಾರೆ.
ಇನ್ನು ಕರ್ನಾಟಕ ತಂಡದ ಪಂದ್ಯವಿದ್ದರೆ ಸಹಜವಾಗಿ ನಗರದ ಜನತೆ ಮತ್ತು ಇತರೆಡೆಗಳಿಂದಲೂ ಕ್ರೀಡಾಭಿಮಾನಿಗಳು ಬರುತ್ತಿದ್ದರು. ಆದರೆ, ಈಗ ಗುಜರಾತ್ ಮತ್ತು ಮುಂಬಯಿ ತಂಡಗಳ ಪಂದ್ಯಗಳು ನಡೆಯುತ್ತಿರುವುದರಿಂದ ಪ್ರೇಕ್ಷಕರ ಬರುತಿಲ್ಲವೆಂದು ಎಂದು ಭೂಸದ ಹೇಳಿದರು.
20 ಜನ ಸಹಾಯಕರಾಗಿ,20 ಜನ ಭದ್ರತಾ ಸಿಬ್ಬಂದಿ, ಭ್ರಷ್ಟಾಚಾರ ನಿಗ್ರಹದ ತಂಡ ಆಗಮಿಸಿದ್ದಾರೆಂದು ಭೂಸದ ತಿಳಿಸಿದರು. ಮಾಜಿ ಟೆಸ್ಟ್ ಆಟಗಾರರಾದ ಪಾರ್ಥಿವ್ ಪಟೇಲ್, ಧವಲ್ ಕುಲಕರ್ಣಿ, ಅಭಿಷೇಕ ನಯ್ಯರ್ ಸೇರಿದಂತೆ ಹೆಸರಾಂತ ಆಟಗಾರರು ಪಂದ್ಯಾವಳಿಯಲ್ಲಿ ಆಡುತ್ತಿದ್ದರೂ ಪ್ರೇಕ್ಷಕರು ವೀಕ್ಷಿಸಲು ಬರುತ್ತಿಲ್ಲ.












Click it and Unblock the Notifications