ಹುಬ್ಬಳ್ಳಿಯಲ್ಲಿ ಕೊರೊನಾದಿಂದ ಸಂತೆಗೂ ಬ್ರೇಕ್
ಹುಬ್ಬಳ್ಳಿ, ಮಾರ್ಚ್ 18: ಜಗತ್ತಿನಲ್ಲಿ ಕೊರೊನಾ ವೈರಸ್ ಭೀತಿ ದಿನೇ ದಿನೇ ವೃದ್ಧಿಸುತ್ತಿದ್ದು, ದಿನ ಬಳಕೆಯ ವಸ್ತುಗಳನ್ನು ಖರೀದಿಸಲು ಕೂಡ ಸಾರ್ವಜನಿಕರು ಪರದಾಡುವಂತಾಗಿದೆ. ಅಲ್ಲದೇ ಜಿಲ್ಲಾಡಳಿತದ ಆದೇಶದ ಮೇರೆಗೆ ತರಕಾರಿ ವ್ಯಾಪಾರಕ್ಕೆ ಪೊಲೀಸರು ಬ್ರೇಕ್ ಹಾಕಿದ್ದು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ದಿನನಿತ್ಯದ ವಸ್ತುಗಳನ್ನು ಖರೀದಿಸಲು ಪರದಾಡುವಂತಾಯಿತು.
ಹುಬ್ಬಳ್ಳಿಯ ಅಶೋಕ ನಗರದಲ್ಲಿ ನಡೆಯುವ ಬುಧವಾರ ಸಂತೆಗೆ ಭೇಟಿ ನೀಡಿದ ಪೊಲೀಸ್ ಇಲಾಖೆ ಸಿಬ್ಬಂದಿ ರಾಜ್ಯ ಸರ್ಕಾರದ ಹಾಗೂ ಜಿಲ್ಲಾಡಳಿತದ ಆದೇಶದ ಮೇರೆಗೆ ಸಂತೆಯನ್ನು ನಡೆಸದಂತೆ ಮುಂಜಾಗ್ರತಾ ಕ್ರಮ ಜರುಗಿಸಿದರು.
ಚೀನಾದ ವುಹಾನ್ ರೀತಿ ಕಲಬುರಗಿಯಲ್ಲೂ ದಿಗ್ಬಂಧನ: ಏನೆಲ್ಲಾ ಕ್ರಮ?
ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ದಿನ ಬಳಕೆ ವಸ್ತುಗಳು ಹಾಗೂ ತರಕಾರಿ ಹಣ್ಣುಗಳನ್ನು ಮಾರದಂತೆ ತಡೆದರು. ಅಲ್ಲದೇ ವ್ಯಾಪಾರಸ್ಥರು ಪೊಲೀಸ್ ಇಲಾಖೆಯವರ ಮಾತು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸಂತೆಯಲ್ಲಿಯೇ ಮೊಕ್ಕಾಂ ಹೂಡಿದ್ದು, ಸಂತೆ ನಡೆಸದಂತೆ ತಡೆ ನೀಡಿದರು. ಮಾ.21ರ ವರೆಗೆ ಜಿಲ್ಲಾಡಳಿತ ಸೆಕ್ಷನ್ 144 ಜಾರಿ ಮಾಡಿದ್ದು,ಇದನ್ನು ಧಿಕ್ಕರಿಸಿ ಸಂತೆ ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.