ಕುಮಾರಸ್ವಾಮಿಗೆ ಆಡಳಿತ ನಡೆಸಲು ಕಾಂಗ್ರೆಸ್ ಬಿಡುತ್ತಿಲ್ಲ: ಹೊರಟ್ಟಿ
ಹುಬ್ಬಳ್ಳಿ, ಡಿಸೆಂಬರ್ 27: ಕಾಂಗ್ರೆಸ್ ಪಕ್ಷದವರು ಕುಮಾರಸ್ವಾಮಿಗೆ ಆಡಳಿತ ಮಾಡಲು ಬಿಡುತ್ತಿಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.
ಪರಿಷತ್ ಸದಸ್ಯರಾಗಿರುವ ಅವರು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಪಕ್ಷದ ಮಿತ್ರ ಪಕ್ಷ ಕಾಂಗ್ರೆಸ್ ಮೇಲೆ ಕಿಡಿ ಕಾರಿದ್ದು, ಕುಮಾರಸ್ವಾಮಿ ಅವರ ಆಡಳಿತಕ್ಕೆ ಕಾಂಗ್ರೆಸ್ ತೊಡರುಗಾಲು ಹಾಕುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕರ ವರ್ತನೆ ನೋಡಿ ಜೆಡಿಎಸ್ ವರಿಷ್ಠರು ಬೇಸತ್ತಿದ್ದಾರೆ, ಮಂತ್ರಿ ಹಾಗೂ ನಿಗಮ ಮಂಡಳಿ ಸ್ಥಾನಗಳು ಸಹ ಅವರೇ ಹೆಚ್ಚು ಪಡೆದಿದ್ದಾರೆ ಹೀಗೆಯೇ ಮುಂದುವರೆದರೆ ಮೈತ್ರಿ ಸರ್ಕಾರ ಏಕೆ ನಡೆಯಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

'ಕಾಂಗ್ರೆಸ್ ಸರ್ಕಾರ ಅಲ್ಲ ಮೈತ್ರಿ ಸರ್ಕಾರ ಇದೆ'
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದಂತಿದೆ. ಇಲ್ಲಿರುವುದು ಮೈತ್ರಿ ಸರ್ಕಾರ ಎಂದು ಅವರು ಮರೆತಿದ್ದಾರೆ. ಸರ್ಕಾರ ಉರುಳಬೇಕು ಎಂದು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ ಆದರೆ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸುವ ಯತ್ನ ಮಾಡುತ್ತಿದ್ದಾರೆ ಎಂದರು.

'ಒಪ್ಪಂದದ ರೀತಿಯಲ್ಲೇ ಸರ್ಕಾರ ನಡೆಯಬೇಕು'
ಒಪ್ಪಂದದ ರೀತಿಯಲ್ಲಿಯೇ ಸರ್ಕಾರ ನಡೆಯಬೇಕು, ಇಲ್ಲವಾದರೆ ಸರ್ಕಾರ ನಡೆಸುವ ಉದ್ದೇಶವಾದರೂ ಏನು, ಒಪ್ಪಂದದಂತೆ ನಡೆದುಕೊಳ್ಳದಿದ್ದರೆ ಸರ್ಕಾರ ನಡೆಸದಿರುವುದೇ ಉತ್ತಮ ಎಂದು ಅವರು ಕಿಡಿಕಾರಿದ್ದಾರೆ.

ಜೆಡಿಎಸ್ ವರಿಷ್ಠರ ಮೇಲೂ ಆಕ್ಷೇಪ
ಇತ್ತೀಚೆಗಷ್ಟೆ ಸಭಾಧ್ಯಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಭಾರಿ ಆಕ್ರೋಶಕ್ಕೆ ಒಳಗಾಗಿದ್ದ ಬಸವರಾಜ ಹೊರಟ್ಟಿ ಅವರು ಜೆಡಿಎಸ್ ವರಿಷ್ಠರ ಮೇಲೂ ಆಕ್ರೋಶ ವ್ಯಕ್ತಪಡಿಸಿದ್ದರು, ಆ ನಂತರ ಈಗ ಕಾಂಗ್ರೆಸ್ ನಾಯಕರ ಮೇಲೆ ಸಿಟ್ಟು ವ್ಯಕ್ತಪಡಿಸುತ್ತಿದ್ದಾರೆ.

'ಸರ್ಕಾರ ಉರುಳಿದರೆ ಕಾಂಗ್ರೆಸ್ ಕಾರಣ'
ಈ ಹಿಂದೆ ಸಹ ಬಸವರಾಜ ಹೊರಟ್ಟಿ ಅವರು ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದರು, ಸರ್ಕಾರ ಉರುಳಿದರೆ ಅದಕ್ಕೆ ಕಾಂಗ್ರೆಸ್ ಕಾರಣವಾಗುತ್ತದೆಯೇ ವಿನಃ ಜೆಡಿಎಸ್ ಅಲ್ಲ ಎಂದಿದ್ದರು. ಜೆಡಿಎಸ್ನ ಹಿರಿಯ ಸದಸ್ಯರಾಗಿದ್ದರೂ ಸಹ ಅವರು ಮಿತ್ರ ಪಕ್ಷ ಕಾಂಗ್ರೆಸ್ ವಿರುದ್ದ ಪದೇ-ಪದೇ ಹೇಳಿಕೆ ನೀಡುತ್ತಲೇ ಇದ್ದಾರೆ.












Click it and Unblock the Notifications