ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮತ್ತೆ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಎಂ ಬಿ ಪಾಟೀಲ್
ಹುಬ್ಬಳ್ಳಿ, ಆಗಸ್ಟ್ 20 : ಈ ಬಾರಿ ವೀರಶೈವ ಲಿಂಗಾಯತಕ್ಕೆ ಒಳಪಡುವ ಎಲ್ಲಾ ಪಂಗಡಗಳನ್ನು ಒಟ್ಟುಗೂಡಿಸಿ ಹೋರಾಟ ಮಾಡಲು ಚಿಂತನೆ ನಡೆದಿದೆ. ಚುನಾವಣೆ ಬಳಿಕ ಎಲ್ಲಾ ಮಠಾಧೀಶರನ್ನು, ವಿರಕ್ತ ಮಠ ಮತ್ತು ಪಂಚ ಪೀಠಾಧಿಪತಿಗಳ ಜೊತೆಗೆ ಮಾತುಕತೆ ನಡೆಸುತ್ತೇವೆ ಎಂದು ಪ್ರತ್ಯೇಕ ಧರ್ಮ ಕುರಿತು ಮಾಜಿ ಸಚಿವ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ನಮ್ಮ ಸಮಾಜಕ್ಕೆ ಅಲ್ಪಸಂಖ್ಯಾತ ಮನ್ನಣೆ ಸಿಗಬೇಕು. ನಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಹೆಚ್ಚಾಗಬೇಕೆಂಬುವುದು ನಮ್ಮ ಉದ್ದೇಶ . ಇನ್ನೂ ಸಾವರ್ಕರ್ ಭಾವಚಿತ್ರವನ್ನು ಸುಟ್ಟಿರುವುದು ತಪ್ಪು. ಅದೇ ರೀತಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದು ಚಿಲ್ಲರೆ ಕೆಲಸ ಎಂದು ಎಂಬಿ ಪಾಟೀಲ್ ಹೇಳಿದರು.
ಧರ್ಮ ಒಡೆಯುವ ಕೆಲಸ ಮಾಡಲ್ಲ
ರಾಜ್ಯದಲ್ಲಿ ಲಿಂಗಾಯತ ಸಮಾಜದ 99 ಉಪಪಂಗಡಗಳಿಗೆ ಸೌಲಭ್ಯ ಸಿಗುತ್ತಿಲ್ಲ. ಲಿಂಗಾಯತ ಉಪಪಂಗಡಗಳಿಗೆ ಶೈಕ್ಷಣಿಕ ಸೌಲಭ್ಯ ಸಿಗಬೇಕು ಎನ್ನುವ ಉದ್ದೇಶದಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಯತ್ನ ಮಾಡಲಾಗಿತ್ತು. ನಾವು ಯಾವುದೇ ಧರ್ಮ ಒಡೆದಿಲ್ಲ. ಶೈಕ್ಷಣಿಕ ವಿಚಾರವಾಗಿ ಪ್ರಯತ್ನ ಮಾಡಿದೆವು. ಈಗ ರಾಜ್ಯದಲ್ಲಿ ಉಪ ಪಂಗಡಗಳು ಬೇರೆ ಬೇರೆಯಾಗುತ್ತಿವೆ. ಹೀಗಾಗಿ ನಾವು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ, ಧರ್ಮ ಒಡೆಯುವ ಕೆಲಸ ಮಾಡುತ್ತಿಲ್ಲ. ಚುನಾವಣೆ ನಂತರ ಎಲ್ಲಾ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಯುಪಿ ಮಾಡೆಲ್ ಸರ್ಕಾರ ಏಕೆ?
ದೇಶದ ಯುಪಿ, ಬಿಹಾರ ಜನ ನಮ್ಮಲ್ಲಿ ದುಡಿಯೋಕೆ ಬರುತ್ತಾರೆ. ನಮ್ಮ ರಾಜ್ಯಕ್ಕೆ ಮೆಡಿಕಲ್, ಇಂಜಿನಿಯರಿಂಗ್ ಓದೋಕೆ ಬರುತ್ತಾರೆ. ಆದರೆ ನಮ್ಮ ಮುಖ್ಯಮಂತ್ರಿಗೆ ಯುಪಿ ಮಾಡೆಲ್ ಸರ್ಕಾರ ಬೇಕಂತೆ. ಮೋದಿಯವರು ಸ್ವಾತಂತ್ರ್ಯದ ದಿನ ಭ್ರಷ್ಟಾಚಾರದ ವಿರುದ್ದ ಯುದ್ಧ ಸಾರುತ್ತೀವಿ ಅಂತಾರೆ. 40 ಪರ್ಸೆಂಟ್ ವಿರುದ್ದ ಗುತ್ತಿಗೆದಾರರೇ ಪ್ರಧಾನಿ ಮೋದಿಯವರಿಗೆ ದೂರು ನೀಡಿದ್ದಾರೆ. ಅವರ ಮೇಲೆ ಏಕೆ ಐಟಿ, ಇಡಿ ದಾಳಿ ಮಾಡಿಲ್ಲ ಎಂದು ಪ್ರಶ್ನಿಸಿದರು.
ಈ ರಾಜ್ಯದಲ್ಲಿ ಸರ್ಕಾರವಿಲ್ಲ ಎಂದು ಅವರ ಸಚಿವರೇ ಹೇಳುತ್ತಾರೆ. ಸುಮ್ಮನೆ ಮ್ಯಾನೇಜ್ ಮಾಡುತ್ತಿದ್ದೀವಿ ಎಂದು ಮಾಧುಸ್ವಾಮಿ ಹೇಳಿದ್ದಾರೆ. ನಾವು ಜನರ ಮನೆ ಮನೆಗೆ ಹೋಗುತ್ತೇವೆ. ನಾವು ಈ ಬಾರಿ 140-150 ಸೀಟ್ ಪಡೆದು ಅಧಿಕಾರಕ್ಕೆ ಬರುತ್ತೇವೆ. ಮತ್ತೆ ರಾಜ್ಯವನ್ನು ನಂಬರ್ ಒನ್ ಆಗಿ ಮಾಡುತ್ತೇವೆ ಎಂದು ಎಂ.ಬಿ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications