ರಮೇಶ್ ಜಾರಕಿಹೊಳಿಯನ್ನು ಸಂಪುಟದಿಂದ ಕೈಬಿಟ್ಟಿದ್ದು ತಪ್ಪು: ಹೊರಟ್ಟಿ
ಹುಬ್ಬಳ್ಳಿ, ಮೇ 7: ಕಾಂಗ್ರೆಸ್ನ 'ರೆಬೆಲ್' ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟು ಹೈಕಮಾಂಡ್ ತಪ್ಪು ಮಾಡಿದೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಮೇಶ್ ಅವರನ್ನು ಸಂಪುಟದಿಂದ ತೆಗೆದುಹಾಕಿದ್ದು ಸರಿಯಲ್ಲ. ಹೈಕಮಾಂಡ್ ಈ ತಪ್ಪು ಮಾಡಬಾರದಿತ್ತು ಎಂದರು.
ಸಮ್ಮಿಶ್ರ ಸರ್ಕಾರದ ಸಂಪುಟದಿಂದ ರಮೇಶ್ ಅವರನ್ನು ಕೈಬಿಡುವುದಾಗಿದ್ದರೆ ಅವರನ್ನು ಸಚಿವರನ್ನಾಗಿ ಏಕೆ ಮಾಡಬೇಕಿತ್ತು? ನಾಯಕರ ತಪ್ಪಿನಿಂದಾಗಿ ಈಗ ಸಮಸ್ಯೆ ಉದ್ಭವವಾಗಿದೆ. ಸಚಿವರಾಗದೆ ಇದ್ದಿದ್ದರೂ ಸತೀಶ್ ಜಾರಕಿಹೊಳಿ ಆರಾಮವಾಗಿದ್ದರು. ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡಂತೆ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಹೊರಗಟ್ಟಿ ಸತೀಶ್ ಅವರಿಗೆ ಸಚಿವ ಸ್ಥಾನ ಕೊಟ್ಟು ಕಾಂಗ್ರೆಸ್ ಹೈಕಮಾಂಡ್ ತಪ್ಪು ಮಾಡಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿ ಸರ್ಕಾರ ರಚಿಸುತ್ತದೆ ಎನ್ನುವುದು ಆ ಪಕ್ಷದವರ ಹಗಲುಗನಸು. ಏಕಾಏಕಿ ಹತ್ತು ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿಕೊಳ್ಳುತ್ತಾರೆ ಎಂಬ ಭ್ರಮೆಯಲ್ಲಿದೆ. ಇದು ಸಾಧ್ಯವಾಗುವುದಿಲ್ಲ ಎಂದರು.
ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಕೆಲವು ಕಾರ್ಯಕರ್ತರು ಮೈತ್ರಿ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಐದೂ ಬೆರಳು ಸಮ ಇರುವುದಿಲ್ಲ. ಇದಕ್ಕೆ ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿದರು.
ಕುಂದಗೋಳ ಕ್ಷೇತ್ರದಲ್ಲಿ ಮಾಜಿ ಸಚಿವ ದಿವಂಗತ ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರ ಗೆಲುವಿಗಾಗಿ ಜೆಡಿಎಸ್ ಮುಖಂಡರೆಲ್ಲರೂ ಕಾಂಗ್ರೆಸ್ ಜತೆಗೂಡಿ ಶ್ರಮಿಸುತ್ತಿದ್ದೇವೆ. ನಾವು ಮಾತುಕೊಟ್ಟ ಮೇಲೆ ತಪ್ಪುವುದಿಲ್ಲ ಎಂದರು.












Click it and Unblock the Notifications