'ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ರಾಜ್ಯ ಸರಕಾರದಿಂದ ವಿಶ್ವಾಸದ್ರೋಹ'
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಸಿದ್ದರಾಮಯ್ಯನವರಿಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇದ್ದ ಆಸಕ್ತಿ ಈಗಿಲ್ಲ. ಈ ವಿಚಾರದಲ್ಲಿ ರಾಜ್ಯ ಸರಕಾರ ವಿಶ್ವಾಸ ದ್ರೋಹ ಮಾಡಿದೆ ಎಂದು ಎಸ್ ಆರ್ ಹಿರೇಮಠ್ ಹುಬ್ಬಳಿಯಲ್ಲಿ ಆರೋಪಿಸಿದ್ದಾರೆ
ಹುಬ್ಬಳ್ಳಿ, ಮೇ 20: ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ಅವರು ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಜಂತಕಲ್ ಮೈನಿಂಗ್ ಸೇರಿದಂತೆ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ರಾಜ್ಯ ಸರಕಾರ ವಿಶ್ವಾಸದ್ರೋಹ ಮಾಡುತ್ತಿದೆ ಎಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನೇರವಾದ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುವ ಮೊದಲಿಗೆ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ತೆಗೆದುಕೊಳ್ಳುವ ಮಾತುಗಳನ್ನು ಆಡುತ್ತಿದ್ದರು. ಆದರೆ ಮುಖ್ಯಮಂತ್ರಿ ಆದ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕಾಗಿ ರಚಿಸಿದ ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ ಹಾಗೂ ಗಣಿ ಸಚಿವ ವಿನಯ್ ಕುಲಕರ್ಣಿ ಅವರಿಗೂ ಈ ಬಗ್ಗೆ ಆಸಕ್ತಿ ಇಲ್ಲ ಎಂದರು.[ಎಚ್ಡಿಕೆ ಗಣಿ ಲಂಚ ಸಿಡಿ ಪ್ರಕರಣಕ್ಕೆ ಮತ್ತೆ ಜೀವ, ಗಾಲಿ ರೆಡ್ಡಿಗೆ ನೋಟಿಸ್]
ಈಗ ಬಿಜೆಪಿ ಸೇರಿರುವ ಎಸ್ಸೆಂ ಕೃಷ್ಣ ಅವರು ಅಕ್ರಮ ಗಣಿಗಾರಿಕೆಯ ಜನಕ. ಅವರ ನಂತರ ಮುಖ್ಯಮಂತ್ರಿಗಳಾದ ಎನ್ ಧರಂ ಸಿಂಗ್, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅದರ ಕೇಂದ್ರ ಬಿಂದುಗಳಾಗಿದ್ದರು ಎಂದು ಹಿರೇಮಠ್ ಆರೋಪ ಮಾಡಿದ್ದಾರೆ. ಶ್ರೀ ಸಾಯಿ ವೆಂಕಟೇಶ್ವರ ಹಾಗೂ ಹನುಮಾನ್ ಮೈನ್ ಗೆ ಗಣಿಗಾರಿಕೆಗೆ ಅವಕಾಶ ನೀಡಿರುವುದೂ ಅಕ್ರಮ ಎಂದಿದ್ದಾರೆ.