ಗಣಪತಿ ಪ್ರಕರಣದಲ್ಲಿ ಇರದ ಕಾಳಜಿ 'ಸಿಡಿ ಪ್ರಕರಣ'ದಲ್ಲಿ ಯಾಕೆ? ಶೆಟ್ಟರ್ ಪ್ರಶ್ನೆ
ಹುಬ್ಬಳ್ಳಿ, ಅಕ್ಟೋಬರ್ 9: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಹಂತದಲ್ಲೂ ರಾಜಕೀಯ ವೈಷಮ್ಯ ಆರಂಭಿಸಿದ್ದಾರೆ. ಬಿಜೆಪಿ ನಾಯಕರು ಮೇಲೆ ಮತ್ತು ಯಡಿಯೂರಪ್ಪನವರ ಮೇಲೆ ಸುಳ್ಳು ಸುಳ್ಳು ಕೇಸುಗಳನ್ನು ಹಾಕಿಸಿ, ವಿರೋಧಿಗಳನ್ನ ಹಣಿಯಲು ಆಡಳಿತ ಯಂತ್ರ ದುರುಪಯೋಗ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಮಾತನಾಡಿದ ಸಿಡಿ ಪ್ರಕರಣದಲ್ಲಿ ನೀಡಿದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯೇ ಅನುಮಾನ ಹುಟ್ಟಿಸುತ್ತಿದೆ," ಎಂದು ಹೇಳಿದ್ದಾರೆ.

"ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣದಲ್ಲಿ ಕಾಳಜಿ ವಹಿಸಿಲ್ಲ. ಆದರೆ ಯಡಿಯೂರಪ್ಪ ಮತ್ತು ಅನಂತ್ ಕುಮಾರ ಮಾತನಾಡಿದ ಸಿಡಿ ಪ್ರಕರಣದಲ್ಲಿ ಇಷ್ಟು ಬೇಗ ಚಾರ್ಜ್ ಶೀಟ್ ಹಾಕಲು ಹೊರಟಿದ್ದಾರೆ. ಎಫ್.ಎಸ್.ಎಲ್ ವರದಿಯ ಬಗ್ಗೆಯೇ ಹಲವು ಅನುಮಾನಗಳಿವೆ. ಹೀಗಿರುವಾಗ ಚಾರ್ಚ್ ಶೀಟ್ ಹಾಕುವುದು ಸರಿಯಲ್ಲ," ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೆ, "ಸಿದ್ದರಾಮಯ್ಯನವರ ಮೇಲೆ 18 ಕೇಸ್ ಗಳಿವೆ. ಅವರ ಕುಟುಂಬದ ಮೇಲೆ 28 ಕೇಸುಗಳಿವೆ. ಅದರ ಬಗ್ಗೆ ಎಲ್ಲೂ ತನಿಖೆ ನಡೆಯುತ್ತಿಲ್ಲ. ಗೋವಿಂದ ರಾಜು ಡೈರಿ ಪ್ರಕರಣ , ಹೈಕಮಾಂಡ್ ಗೆ ಕಪ್ಪ ಕಾಣಿಕೆ ಕೊಟ್ಟಿದ್ದು ಎಲ್ಲವೂ ತನಿಖೆಯಾಗಲಿ. ಅದನ್ನು ಬಿಟ್ಟು ಕೇವಲ ಬಿಜೆಪಿಯವರ ಮೇಲೆ ಹಾಕಿರುವ ಸುಳ್ಳು ಕೇಸ್ ಗಳ ತನಿಖೆ ನಡೆಯುತ್ತಿದೆ," ಎಂದು ಅವರು ಕಿಡಿಕಾರಿದರು.
ಇನ್ನು ಸಿದ್ದರಾಮಯ್ಯ ಹಿಂದೆ ಇದ್ದು ಕೆಲಸ ಮಾಡುತ್ತಿರುವವರು ಸೂಪರ್ ಸಿಎಂಗಳಾದ ಕೆಂಪಯ್ಯಾ, ಎಮ್.ಎನ್.ರೆಡ್ಡಿ, ಮುಖ್ಯಮಂತ್ರಿ ಕಾರ್ಯದರ್ಶಿ ಅತೀಕ್ ಎಂದು ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
"ಸಿಎಂ ಸಿದ್ದರಾಮಯ್ಯನವರ ವಿರುದ್ಧ ಯಾರು ಮಾತನಾಡುತ್ತಾರೋ ಅವರ ವಿರುದ್ಧ ಕೇಸ್ ಹಾಕಲು ಮುಂದಾಗುತ್ತಿದ್ದಾರೆ. ಸಿಎಂ ಅವರ ಈ ನಡವಳಿಕೆ ಸರಿಯಲ್ಲ. ನಾನೂ ಅರ್ಕಾವತಿ ಪ್ರಕರಣದ ಮಾಹಿತಿ ಹೊರ ಹಾಕಿದಾಗ ನನ್ನ ಮೇಲೆಯೂ ಸಿದ್ದರಾಮಯ್ಯ ಸುಳ್ಳು ಕೇಸ್ ಹಾಕಿಸಿದ್ದಾರೆ. ಕೇಸ್ ಹಾಕುವುದು ಅವರಿಗೆ ಒಂದು ಕೆಟ್ಟ ಚಾಳಿ ಆಗಿದೆ," ಎಂದು ಹೇಳಿದ ಶೆಟ್ಟರ್, ಅನಂತಕುಮಾರ್ ಮತ್ತು ಯಡಿಯೂರಪ್ಪ ಅವರ ಸಿಡಿ ಪ್ರಕರಣದಲ್ಲಿ ನಾವು ಕಾನೂನು ಬದ್ದ ಹೋರಾಟ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.












Click it and Unblock the Notifications