'ಎಚ್ಡಿಡಿ ಮನಸ್ಸು ಮಾಡಿದ್ದರೆ ಚೆನ್ನಮ್ಮರನ್ನು ಎಂದೋ ರಾಜ್ಯಸಭೆಗೆ ಕಳುಹಿಸುತ್ತಿದ್ದರು'
Recommended Video
ಹುಬ್ಬಳ್ಳಿ, ಏಪ್ರಿಲ್ 19: ಕುಟುಂಬ ರಾಜಕೀಯದ ಬಗ್ಗೆ ಲೇವಡಿ ಮಾಡುತ್ತಿರುವ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಎಂದರೆ ದೇವೇಗೌಡ ಆಂಡ್ ಸನ್ಸ್ ಪಾರ್ಟಿಯಾಗಿದೆ ಎಂದು ಟೀಕಿಸಿದ್ದ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್, ಎಚ್ ಡಿ ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ ಅವರನ್ನು ರಾಜ್ಯಸಭೆಗೆ ಸದಸ್ಯರನ್ನಾಗಿ ಮಾಡಿದರೆ ಜೆಡಿಎಸ್ ಕುಟುಂಬ ರಾಜಕಾರಣದ ಪಿಕ್ಚರ್ ಪೂರ್ಣವಾಗುತ್ತದೆ ಎಂದು ಲೇವಡಿ ಮಾಡಿದ್ದರು.
ಎಚ್ ಡಿ ದೇವೇಗೌಡ ಅವರ ಕುಟುಂಬದಲ್ಲಿ ಮಾಜಿ ಪ್ರಧಾನಿ, ಸಂಸದರು, ಮುಖ್ಯಮಂತ್ರಿ, ಸಚಿವರು, ಶಾಸಕರು , ಜಿಲ್ಲಾ ಪಂಚಾಯಿತಿ ಸದಸ್ಯರು ಹೀಗೆ ಎಲ್ಲ ಹುದ್ದೆಗಳಲ್ಲಿಯೂ ಇದ್ದಾರೆ. ಈಗ ಮೊಮ್ಮಕ್ಕಳನ್ನೂ ರಾಜಕೀಯಕ್ಕೆ ಕರೆದು ತಂದಿದ್ದಾರೆ. ಅವರ ಮನೆಯಲ್ಲಿ ದೇವೇಗೌಡರ ಪತ್ನಿ ಚೆನ್ನಮ್ಮ ಮಾತ್ರ ಉಳಿದಿದ್ದಾರೆ. ಅವರನ್ನೂ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದರೆ ಪಿಕ್ಚರ್ ಪೂರ್ಣವಾಗುತ್ತದೆ ಎಂದು ಅವರು ವ್ಯಂಗ್ಯವಾಡಿದ್ದರು.
ಜಗದೀಶ್ ಶೆಟ್ಟರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಎಚ್ ಡಿ ಕುಮಾರಸ್ವಾಮಿ, ದೇವೇಗೌಡರು ಮನಸ್ಸು ಮಾಡಿದ್ದರೆ, ಚೆನ್ನಮ್ಮ ಅವರನ್ನು ಎಂದೋ ರಾಜ್ಯಸಭೆಗೆ ಕಳುಹಿಸುತ್ತಿದ್ದರು ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈಗ ಜಲನೀತಿಯ ಕುರಿತು ಮಾತನಾಡುತ್ತಿದ್ದಾರೆ. ಐದು ವರ್ಷ ಇವರದೇ ಸರ್ಕಾರವಿತ್ತು. ಇಷ್ಟು ಸಮಯ ಏನು ಮಾಡುತ್ತಿದ್ದರು? ಐದು ವರ್ಷದಲ್ಲಿ ದೇಶಕ್ಕೆ ಪ್ರಧಾನಿ ಕೊಡುಗೆ ಏನು? ನಮ್ಮದು ಅಸಮರ್ಥ ಸರ್ಕಾರ ಎನ್ನುತ್ತಾರೆ. ಆದರೆ, ಮೋದಿ ಅವರದು ದಿವಾಳಿ ಸರ್ಕಾರ ಎಂದು ಟೀಕಿಸಿದರು.

ಯಾವಾಗಲೋ ಕಳುಹಿಸುತ್ತಿದ್ದರು
ಎಚ್ ಡಿ ದೇವೇಗೌಡ ಅವರು ಚೆನ್ನಮ್ಮರನ್ನು ರಾಜ್ಯಸಭೆಗೆ ಕಳುಹಿಸುತ್ತಿದ್ದರೆ ಎಂಬ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್ ಡಿ ಕುಮಾರಸ್ವಾಮಿ, ಶೆಟ್ಟರ್ ನಮ್ಮ ತಾಯಿ ಚೆನ್ನಮ್ಮ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. 80 ವರ್ಷದ ತಾಯಿಯನ್ನು ರಾಜಕೀಯ ವಿಚಾರಕ್ಕೆ ಎಳೆದು ತಂದಿದ್ದಾರೆ. ಮನಸ್ಸು ಮಾಡಿದ್ದಾರೆ ಎಚ್ ಡಿ ದೇವೇಗೌಡ ಅವರು ಯಾವಾಗಲೋ ರಾಜ್ಯಸಭೆಗೆ ಸದಸ್ಯರನ್ನಾಗಿ ಕಳುಹಿಸುತ್ತಿದ್ದರು ಎಂದು ಹೇಳಿದರು.

ಪ್ರಧಾನಿಯೇ ಗಡುವು ನೀಡುತ್ತಿದ್ದಾರೆ
ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ಇಷ್ಟು ದಿನಗಳಿಂದ ರಾಜ್ಯ ನಾಯಕರು ಗಡುವು ಕೊಡುತ್ತಿದ್ದರು. ಈಗ ಪ್ರಧಾನಿಯವರೇ ಸರ್ಕಾರಕ್ಕೆ ಗಡುವು ಕೊಡುತ್ತಿದ್ದಾರೆ. ಅವರೇ ಮೇ 23ರಂದು ಸರ್ಕಾರ ಬೀಳುತ್ತದೆ ಎನ್ನುತ್ತಿದ್ದಾರೆ. ಹತ್ತು ತಿಂಗಳು ಸರಿಯಾಗಿ ಆಡಳಿತ ನಡೆಸಲು ಬಿಜೆಪಿ ನಾಯಕರು ಬಿಡಲಿಲ್ಲ. ಕಾಂಗ್ರೆಸ್ ಶಾಸಕರನ್ನು ಸೆಳೆದುಕೊಳ್ಳಲು ಆಪರೇಷನ್ ಕಮಲ ನಡೆಸಲು ಪ್ರಯತ್ನಿಸಿದರು. ಶಾಸಕರ ಖರೀದಿಗೆ ದುಡ್ಡು ಎಲ್ಲಿಂದ ಬಂತು? ಪ್ರಧಾನಿ ಮೋದಿ ಚಹಾ ಮಾರಿ ತಂದುಕೊಟ್ಟರೇ ಎಂದು ಲೇವಡಿ ಮಾಡಿದರು.

ಪ್ರಧಾನಿಯಂತೆ ಪೊಳ್ಳು ಮಾತಾಡೊಲ್ಲ
ನಾನು ಉತ್ತರ ಕರ್ನಾಟಕಕ್ಕೆ ದ್ರೋಹ ಮಾಡಿದ್ದೇನೆ ಎಂದು ಪದೇ ಪದೇ ಆರೋಪ ಮಾಡುತ್ತಿದ್ದಾರೆ. ಅನುದಾನದ ಕುರಿತು ನಾನು ಚರ್ಚೆಗೆ ಸಿದ್ಧ. ರೈತರ ಸಾಲ ಮನ್ನಾ ಬಗ್ಗೆ ಪ್ರಧಾನಿ ಹೀಯಾಳಿಸುತ್ತಾರೆ. ಧಾರವಾಡ ಜಿಲ್ಲೆಯೊಂದರಲ್ಲೇ 250 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಕಿಸಾನ್ ಸಮ್ಮಾನ್ಗೆ ಪಟ್ಟಿ ಕಳುಹಿಸಿಲ್ಲ ಎಂದು ಆರೋಪಿಸುತ್ತಾರೆ. ಅವರು ಬೇಕಿದ್ದರೆ ನಮ್ಮ ವೆಬ್ಸೈಟ್ ನೋಡಲಿ. ನಾನು ದಾಖಲೆ ಇಲ್ಲದೆ ಪ್ರಧಾನಿಯಂತೆ ಪೊಳ್ಳು ಮಾತನಾಡುವುದಿಲ್ಲ. ಉತ್ತರ ಕರ್ನಾಟಕಕ್ಕೆ ಬಿಜೆಪಿಯವರು ಮತ್ತು ನನ್ನ ಕೊಡುಗೆ ಕುರಿತು ಚರ್ಚೆಗೆ ಸಿದ್ಧ ಎಂದರು.

ಮೋದಿಯದು ದಿವಾಳಿ ಸರ್ಕಾರ
ಕರ್ನಾಟಕ ಸರ್ಕಾ ಸಮರ್ಥ ಸರ್ಕಾರ ಎಂದು ಪ್ರಧಾನಿ ಮೋದಿ ಅವರ ಟೀಕೆಗೆ ಉತ್ತರಿಸಿದ ಅವರು, ಮೋದಿಯವರ ಕೇಂದ್ರ ಸರ್ಕಾರ ದಿವಾಳಿ ಸರ್ಕಾರ. ನರೇಗಾ ಯೋಜನೆಗೆ 13 ಸಾವಿರ ಕೋಟಿ ರೂ ಇದುವರೆಗೂ ನೀಡಿಲ್ಲ. ಹೀಗಾಗಿ ಮೋದಿಯವರ ಸರ್ಕಾರ ದಿವಾಳಿಯಾಗಿದೆ ಎಂದು ವ್ಯಂಗ್ಯವಾಡಿದರು.

ಐಟಿಯವರು ದನ ಕಾಯ್ತಿದ್ದಾರಾ?
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಲು 150 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ದೂರವಾಣಿ ಸಂಭಾಷಣೆ ವಿವಾದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ, ಅದ್ಯಾರೋ ಮಾತಾಡ್ತಾರೆ. ಅದಕ್ಕೆ ನಾನು ಉತ್ತರ ನೀಡಬೇಕೇ? ಆದಾಯ ತೆರಿಗೆ ಇಲಾಖೆಯವರು ದನ ಕಾಯ್ತಿದ್ದಾರಾ. ಮಂಡ್ಯದಲ್ಲಿ ಪ್ರತಿ ದಿನ ಐಟಿ ದಾಳಿ ನಡೆಸುತ್ತಿದ್ದಾರೆ, ಇದನ್ನು ಗಮನಿಸಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ನಮಗೆ ಪಾಕ್ ಗಡಿ ಗೊತ್ತಿಲ್ಲ
ಬಾಲಕೋಟ್ ಎಲ್ಲಿದೆ ಎಂದು ಇಲ್ಲಿನವರಿಗೆ ಗೊತ್ತಿಲ್ಲ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಪುಲ್ವಾಮಾ ದಾಳಿಯ ಬಗ್ಗೆ ಹೇಳಿಕೆ ನೀಡಿದ್ದ ಎಚ್ ಡಿ ಕುಮಾರಸ್ವಾಮಿ ಅವರನ್ನು ವ್ಯಂಗ್ಯವಾಡಿದ್ದರು. ಅದಕ್ಕೆ ಟಾಂಗ್ ನೀಡಿದ ಕುಮಾರಸ್ವಾಮಿ, ಪ್ರಧಾನಿ ಪಾಕಿಸ್ತಾನಕ್ಕೆ ಹೋಗಿ ಉಡುಗೊರೆ ಪಡೆದು ಹಬ್ಬ ಆಚರಿಸಿದರು. ನಮಗೆ ಪಾಕ್ ಗಡಿ ಗೊತ್ತಿಲ್ಲ. ಕರ್ನಾಟಕದ ಗಡಿ ಮಾತ್ರ ಗೊತ್ತು. ಪಾಪ ಹಿಂದೆ ಯಾರೂ ಪಾಕ್ ಗಡಿ ಮುಟ್ಟಿರಲಿಲ್ಲ ಎಂಬಂತೆ ಪ್ರಧಾನಿ ಮಾತನಾಡುತ್ತಾರೆ. ಇಂದಿರಾ ಗಾಂಧಿ ಕಾಲದಲ್ಲಿ ಯುದ್ಧ ಆಗಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಪುಲ್ವಾಮಾ ದಾಳಿ ಬಗ್ಗೆ ನನಗೇನು ಗೊತ್ತು?
ಪುಲ್ವಾಮಾ ಘಟನೆ ಬಗ್ಗೆ ನನ್ನ ಮೇಲೆ ಆರೋಪ ಮಾಡುತ್ತಾರೆ. ಒಬ್ಬ ನಿವೃತ್ತ ಸೈನಿಕರು ಹೇಳಿದ್ದಷ್ಟನ್ನೇ ನಾನು ಹೇಳಿದ್ದೇನೆ. ಚುನಾವಣೆ ವೇಳೆ ಮೋದಿ ಸರ್ಕಾರ ಪಾಕಿಸ್ತಾನದ ಜತೆ ಘರ್ಷಣೆ ಮಾಡುತ್ತದೆ ಎಂದು ನಿವೃತ್ತ ಸೈನಿಕರೊಬ್ಬರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೆ. ಪುಲ್ವಾಮಾ ದಾಳಿ ಬಗ್ಗೆ ನನಗೇನು ಗೊತ್ತು? ಎಂದರು.












Click it and Unblock the Notifications