ಬಂಡಾಯ ಶಮನ ಮಾಡುವಲ್ಲಿ ಯಶಸ್ವಿಯಾದ ಬಿಜೆಪಿ ನಾಯಕರು!
ಹುಬ್ಬಳ್ಳಿ, ಏಪ್ರಿಲ್ 22 : ಜಿಲ್ಲೆಯಲ್ಲಿ ಎದುರಾಗಿದ್ದ ಬಿಜೆಪಿ ಬಂಡಾಯ ಒಂದು ಕ್ಷೇತ್ರದಲ್ಲಿ ದೂರವಾದಂತಾಗಿದೆ. ಧಾರವಾಡ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ವಿರುದ್ಧ ಮಾಜಿ ಶಾಸಕಿ ಸೀಮಾ ಮಸೂತಿ ತೋರಿದ್ದ ಬಂಡಾಯ ಕೊನೆಗೂ ಶಮನಗೊಂಡಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರ ಹುಬ್ಬಳ್ಳಿಯ ಮಧುರಾ ಕಾಲೋನಿಯಲ್ಲಿನ ನಿವಾಸದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಸೀಮಾ ಮಸೂತಿಯವರನ್ನು ಸಮಾಧಾನಪಡಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ.
ಕೈ ತಪ್ಪಿದ ಟಿಕಟ್, ಬಿಜೆಪಿ ತೊರೆದ ಸೀಮಾ ಮಸೂತಿ!
ಸುಮಾರು ಒಂದು ಗಂಟೆಗಳ ಕಾಲ ನಡೆದ ಸಭೆಯ ನಂತರ ಶೆಟ್ಟರ್ ನಿವಾಸದಿಂದ ಕಣ್ಣೀರಿಡುತ್ತಲೇ ಸೀಮಾ ಮಸೂತಿ ಹೊರಬಂದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಗೆ ದುಡಿದವಳು ಈ ಸಾರಿ ನನಗೆ ಅನ್ಯಾಯ ಆಗಿದ್ದು ನಿಜ. ಆದರೆ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವ ನಿರ್ಧಾರ ಹಿಂಪಡೆದಿದ್ದೇನೆ ಎಂದರು.
ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸೂಕ್ತ ಸ್ಥಾನ ಕೊಡುವ ಭರವಸೆ ಮುಖಂಡರು ನೀಡಿದ್ದಾರೆ. ಬೆಂಬಲಿಗರ ಒತ್ತಾಯದ ಮೇರೆಗೆ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವ ನಿರ್ಧಾರ ತೆಗೆದುಕೊಂಡಿದ್ದೆ. ಆದರೆ, ತಮ್ಮ ನಿರ್ಧಾರದಿಂದ ಪಕ್ಷಕ್ಕೆ ಹಿನ್ನಡೆಯಾಗಬಾರದೆಂಬ ಕಾರಣಕ್ಕೆ ಅಭ್ಯರ್ಥಿ ಅಮೃತ ದೇಸಾಯಿಯವರ ಗೆಲುವಿಗೆ ಪ್ರಯತ್ನಿಸುವೆ ಎಂದು ತಿಳಿಸಿದರು.
ಅಮೃತ ದೇಸಾಯಿಯವರ ಗೆಲುವಿಗೆ ಪ್ರಯತ್ನಿಸುವಂತೆ ತಮ್ಮ ಬೆಂಬಲಿಗರಿಗೂ ಸೂಚಿಸುವುದಾಗಿ ಹೇಳಿದರು. ಬಿಜೆಪಿ ಧಾರವಾಡ ಕ್ಷೇತ್ರದ ಅಭ್ಯರ್ಥಿ ಅಮೃತ ದೇಸಾಯಿ, ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಧಾರವಾಡ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಈರಣ್ಣ ಜಡಿ ಸಭೆಯಲ್ಲಿ ಪಾಲ್ಗೊಂಡಿದ್ದರು.