ಸಂಗೊಳ್ಳಿ ರಾಯಣ್ಣ ನೆಲದಲ್ಲಿ ಕಂಬಳಿ ಹೊದ್ದು ಅಮಿತ್ ಶಾ ಪ್ರಚಾರ!
ಬೆಳಗಾವಿ, ಏಪ್ರಿಲ್ 13: ನಿನ್ನೆ(ಏ.12)ಯಿಂದ ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಇಂದು(ಏ.13) ಬೆಳಗಾವಿಯ ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣ ಸ್ಮಾರಕಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದರು.
ಬೇಂದ್ರೆ ನಿವಾಸಕ್ಕೆ ಅಮಿತ್ ಶಾ ಭೇಟಿ, ಸಕ್ಕರೆ ನೀಡಿ ಸ್ವಾಗತ
ಸಂಗೊಳ್ಳಿ ರಾಯಣ್ಣ ಸ್ಮಾರಕಕ್ಕೆ ಭೇಟಿ ನೀಡಿದ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕಂಬಳಿ ಹೊದ್ದಿದ್ದಿದ್ದು ವಿಶೇಷ. ಕುರುಬ ಸಮುದಾಯದ ಓಲೈಕೆಗಾಗಿ ಈ ಬಿರು ಬೇಸಿಗೆಯಲ್ಲೂ ಕಂಬಳಿ ಹೊದ್ದಿದ್ದ ಶಾ, ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಅವರ ಸೇನಾಧಿಕಾರಿಯಾಗಿದ್ದ ರಾಯಣ್ಣ ಶೌರ್ಯಕ್ಕೆ ಮತ್ತೊಂದು ಹೆಸರು. ಜನ್ಮಭೂಮಿಯ ಬಗ್ಗೆ ಅವರಿಗಿದ್ದ ಪ್ರೀತಿ ಮತ್ತು ಸಮರ್ಪಣಾಭಾವ ಎಲ್ಲ ಪೀಳಿಗೆಗೂ ಆದರ್ಶ ಎಂದು ಈ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟರು.
Visited Sangolli Rayanna's memorial in Nandagada (Karnataka) and paid floral tributes to Krantivira Sangolli Rayanna, the army chief of Rani Chennamma. He was a epitome of courage and bravery, his love and sacrifice to the motherland is a source of inspiration for all. pic.twitter.com/WQwIg0gnqA
— Amit Shah (@AmitShah) April 13, 2018
ಇದಕ್ಕೂ ಮುನ್ನ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ವಿಗ್ರಹಕ್ಕೂ ಅಮಿತ್ ಶಾ ಮಾಲಾರ್ಪಣೆ ಮಾಡಿದರು. ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ರಣ ಕಹಳೆಗೆ ಊದಿದ ಕಿತ್ತೂರಿನ ಮಣ್ಣು ಅತ್ಯಂತ ಪವಿತ್ರ ನೆಲ ಎಂದು ಈ ಸಂದರ್ಭದಲ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪ್ರಚಾರ ಕಾರ್ಯ ಆರಂಭಿಸಿರುವ ಅಮಿತ್ ಶಾ ವಾರಕ್ಕೊಮ್ಮೆ ಎಂಬಂತೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಅವರ ಪ್ರಚಾರ ಕಾರ್ಯದ ಆರನೇ ಭಾಗವಾಗಿ ನಿನ್ನೆ ಹುಬ್ಬಳ್ಳಿಗೆ ಆಗಮಿಸಿರುವ ಅವರು ಇಂದು ಬೆಳಗಾವಿಯಲ್ಲೂ ಪ್ರಚಾರ ನಡೆಸಿದರು.