ಇನ್ಮುಂದೆ ವಾಯುವ್ಯ ಸಾರಿಗೆಯಲ್ಲೂ ವಾಯು ಮಾಲಿನ್ಯ ತಪಾಸಣೆ ಕೇಂದ್ರ
ಹುಬ್ಬಳ್ಳಿ,ಜನವರಿ 6: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆದಾಯ ಹೆಚ್ಚಿಸಿಕೊಳ್ಳಲು ಹೊಸ ಪ್ಲ್ಯಾನ್ ಮಾಡಿದೆ. ವಾಯು ಮಾಲಿನ್ಯ ತಪಾಸಣೆ ಕೇಂದ್ರ ಆರಂಭಿಸಿದೆ. ಇದುವರೆಗೆ ಸಂಸ್ಥೆಯ ವಾಹನಗಳಿಗೆ ಸೀಮಿತವಾಗಿದ್ದ ವಾಯು ಮಾಲಿನ್ಯ ತಪಾಸಣೆ ಕೇಂದ್ರದಲ್ಲಿ ಖಾಸಗಿ ವಾಹನಗಳ ತಪಾಸಣಾ ಕಾರ್ಯ ನಡೆಯಲಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ಖಾಸಗಿ ವಾಹನಗಳ ಪಿಯುಸಿ (ಪೊಲೂಷನ್ ಅಂಡರ್ ಕಂಟ್ರೋಲ್) ಟೆಸ್ಟ್ ಸೆಂಟರ್ ತೆರೆಯುತ್ತಿರುವುದು ರಾಜ್ಯದಲ್ಲೇ ಮೊದಲು. ಬೆಳಗಾವಿ ಶಿರಸಿ ಬಾಗಲಕೋಟೆ, ಚಿಕ್ಕೋಡಿ, ಹಾವೇರಿ, ಗದಗ, ಧಾರವಾಡ, ಹುಬ್ಬಳ್ಳಿ-ಧಾರವಾಡ ನಗರ, ಹುಬ್ಬಳ್ಳಿ ಗ್ರಾಮಾಂತರ ಹೀಗೆ 6 ಜಿಲ್ಲೆಗಳ 9 ವಿಭಾಗಗಳನ್ನು ಹೊಂದಿರುವ ದೊಡ್ಡ ನಿಗಮವಿದು.
ಬರೋಬ್ಬರಿ 22,500ಕ್ಕೂ ಅಧಿಕ ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ನಿಗಮ ಮಾತ್ರ ಲಾಭದತ್ತ ಬರುತ್ತಲೇ ಇಲ್ಲ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ವಿಶೇಷ ಅನುದಾನವಾಗಿ 1,100 ಕೋಟಿಯನ್ನು ಸಂಸ್ಥೆ ಕೇಳಿತ್ತು. ಆದರೆ ಸರ್ಕಾರ ಇದಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ. ಬಳಿಕ ಕೆಲವೊಂದಿಷ್ಟು ಜಾಗೆ, ಕಟ್ಟಡಗಳನ್ನು ಲೀಸ್ ಮೇಲೆ ನೀಡಲು ನಿರ್ಧರಿಸಿತ್ತು. ಅದಾದ ಬಳಿಕ ಇದೀಗ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಮತ್ತೊಂದು ಮಾರ್ಗವನ್ನು ಕಂಡುಕೊಂಡಿದೆ. ಅದೇ ವಾಯು ಮಾಲಿನ್ಯ ತಪಾಸಣೆ ಪರೀಕ್ಷೆ.
ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ವಾಯುಮಾಲಿನ್ಯ ತಪಾಸಣೆ ಕೇಂದ್ರ ತೆರೆಯಲಾಗಿದೆ. ಇದರಿಂದ ತನ್ನ ಸಂಸ್ಥೆಗಳ ಬಸ್ ಸೇರಿದಂತೆ ಎಲ್ಲ ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಲು ಅನುಕೂಲವಾಗುತ್ತದೆ. ಇದರೊಂದಿಗೆ ಖಾಸಗಿ ವಾಹನಗಳನ್ನು ಇಲ್ಲಿ ತಪಾಸಣೆ ಮಾಡಲಿದೆ. ಪ್ರತಿ ಖಾಸಗಿ ವಾಹನಕ್ಕೆ. 150 ದರ ನಿಗದಿಪಡಿಸಿದೆ. ಪ್ರತಿದಿನ ಕನಿಷ್ಠವೆಂದರೂ 100 ಖಾಸಗಿ ವಾಹನಗಳಾದರೂ ವಾಯು ಮಾಲಿನ್ಯ ತಪಾಸಣೆ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಒಟ್ಟಿನಲ್ಲಿ ಸಾರಿಗೆ ಸಂಸ್ಥೆ ಆದಾಯ ಹೆಚ್ಚಿಸಿಕೊಳ್ಳಲು, ಹೊಸ ಹೆಜ್ಜೆ ಇಟ್ಟಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಈ ಆದಾಯ ಎಷ್ಟರ ಮಟ್ಟಿಗೆ ಹೆಚ್ಚಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.