ಬಾಲಕಿ ಅತ್ಯಾಚಾರ ಖಂಡಿಸಿ ಹುಬ್ಬಳ್ಳಿಯಲ್ಲಿ ಎಬಿವಿಪಿ ಆಕ್ರೋಶ
ಹುಬ್ಬಳ್ಳಿ, ಅಕ್ಟೋಬರ್ 25: ಶಿವಮೊಗ್ಗದಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮಂಗಳವಾರ ನಗರದಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಕಾಮುಕರ ಅಟ್ಟಹಾಸ ತಡೆಯುವಲ್ಲಿ ವಿಫಲವಾದ ಸರಕಾರದ ವಿರುದ್ಧ ರಾಜ್ಯಾದ್ಯಂತ ಅಕ್ಟೋಬರ್ 26ರಂದು ಪ್ರತಿಭಟನೆ ನಡೆಸಲು ಕರೆ ನೀಡಲಾಯಿತು.
ಬಾಲಕಿಯ ಮೇಲೆ ಶಿವಮೊಗ್ಗದ ಸಕ್ರೆಬೈಲಿನಲ್ಲಿ ನಿರಂತರ ಅತ್ಯಾಚಾರ ನಡೆದಿದೆ. ಶಾರೂಖ್, ತೌಫಿಕ್, ಅಮ್ಜದ್, ಮುಬಾರಕ್, ಪರ್ವೀನ್ ಬಾನು ಇನ್ನಿತರ ಆರೋಪಿಗಳ ವಿರುದ್ಧ ಪೋಕ್ಸೊಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದರು.[ಶಿವಮೊಗ್ಗ: ಪಿಯು ವಿದ್ಯಾರ್ಥಿನಿ ಮೇಲೆ 6 ಮಂದಿ ಗ್ಯಾಂಗ್ ರೇಪ್]
ರಾಜಕೀಯ ಒತ್ತಡಗಳಿಂದಾಗಿ ಆರೋಪಿಗಳನ್ನು ಬಿಡುಗಡೆ ಮಾಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಸರಕಾರ ಕಠಿಣ ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ. ಆದ್ದರಿಂದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಠಿಣ ಕಾನೂನು ರೂಪಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.[ಶಿವಮೊಗ್ಗ: ಕೊಲೆ ಪ್ರಕರಣದಲ್ಲಿ ಏಳು ಮಂದಿ ಬಂಧನ]
ಸೌಜನ್ಯ, ನಂದಿತಾ, ರತ್ನಾ ಕೊಠಾರಿ ಇನ್ನಿತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಬೇಕು ಮತ್ತು ಕಠಿಣ ಕಾನೂನು ರೂಪಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು. ಪ್ರಸಾದ ಕರನಂದಿ, ಕಿಶೋರ, ಉಮೇಶ ರಡ್ಡಿ, ಕಿರಣ ಕಲಾಲ, ಶ್ರವಣ ಹುಣಸಗಿ, ಚೇತನ, ಅಲೋಕ, ಸಿದ್ದು ಸಾಲಿಮಠ, ತೇಜಸ ಗೋಕಾಕ, ಮಂಜುನಾಥ ಹತ್ತಿ, ಲೀಲಾ, ಕಾವ್ಯ, ಸಂಗೀತಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.