ಕತಾರ್ನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ: ನಾಗಾಭರಣಗೆ 'ಕತಾರ್ ಕನ್ನಡ ಸಮ್ಮಾನ್' ಪ್ರಶಸ್ತಿ
ಹುಬ್ಬಳ್ಳಿ, ನವೆಂಬರ್ 9: ನವೆಂಬರ್ ಕನ್ನಡ ರಾಜ್ಯೋತ್ಸವ ಹಬ್ಬದ ತಿಂಗಳಾಗಿದ್ದು, ರಾಜ್ಯ ಮಾತ್ರವಲ್ಲದೇ, ದೇಶ ವಿದೇಶದಲ್ಲೂ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕರ್ನಾಟಕ ಸಂಘ ಕತಾರ್ನಲ್ಲಿ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಸಂಪನ್ನಗೊಂಡಿದೆ.
ದೋಹಾದ ಡಿಪಿಎಸ್ ಶಾಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಸಾವಿರಕ್ಕೂ ಹೆಚ್ಚು ಕನ್ನಡಿಗರು ಹಾಗೂ ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕರ್ನಾಟಕ ಸಂಘ ಹಾಗೂ ಅದರ ಸೋದರ ಸಂಸ್ಥೆಗಳಾದ ತುಳುಕೂಟ ಕತಾರ್, ಬಂಟ್ಸ್ ಕತಾರ್, ಮಂಗಳೂರ ಕಲ್ಚರಲ್ ಅಸೋಸಿಯೇಷನ್, ಬಿಲ್ಲವಾಸ್ ಕತಾರ್, ಮಂಗಳೂರು ಕ್ರಿಕೆಟ್ ಕ್ಲಬ್ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಬಾರಿಸು ಕನ್ನಡ ದಿಂಡಿಮವ ಹಾಡು ಹಾಗೂ ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾದ ಮಹೇಶ್ ಗೌಡ ಅವರ ಸ್ವಾಗತ ಭಾಷಣದಿಂದ ಕಾರ್ಯಕ್ರಮ ಆರಂಭಗೊಂಡಿದೆ.

ಮೂರು ವರ್ಷಗಳ ಬಳಿಕ ಕತಾರ್ನಲ್ಲಿ ಕನ್ನಡ ಹಬ್ಬ
ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾದ ಮಹೇಶ್ ಗೌಡ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕೊರೊನಾ ಕಾರಣಗಳಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆನ್ಲೈನ್ಗೆ ಸೀಮಿತಿಗೊಳಿಸಲಾಗಿತ್ತು. ಹೀಗಾಗಿ ಈ ವರ್ಷ ಎಲ್ಲರ ಸಮ್ಮುಖದಲ್ಲಿ ಆಚರಿಸುತ್ತಿರುವುದಕ್ಕೆ ಸಂತಸದ ವಿಚಾರ ಹಾಗೂ ಪ್ರತಿಷ್ಠಿತ ಪಂದ್ಯಾವಳಿ ಫಿಫಾ ನಡೆಯುತ್ತಿರುವ ಸಂದರ್ಭದಲ್ಲಿ ಸಂಘವು ರಾಜ್ಯೋತ್ಸವ ಆಚರಿಸಿರುವುದು ಹೆಮ್ಮೆಯ ವಿಷಯ ಎಂದರು.

ಕೊಲ್ಲಿ ರಾಷ್ಟ್ರಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಡೊಳ್ಳು ಕುಣಿತ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್ ನಾಗಾಭರಣ, ನಟ ನಿರ್ದೇಶಕ ಅನೂಪ್ ಭಂಡಾರಿ, ಮಿಮಿಕ್ರಿ ಕಲಾವಿದರು ಯೋಗಿ ಗೌಡ, ಕರ್ನಾಟಕದ ದಿನಪತ್ರಿಕೆಯ ಮುಖ್ಯಸ್ಥರಾದ ರವಿ ಹೆಗ್ಡೆ, ಭಾರತ ರಾಯಭಾರಿ ಕಚೇರಿಯ ಪ್ರತಿನಿಧಿ ಏಂಜೆಲಿನ ಪ್ರೇಮಲತಾ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿ ಹಾಗೂ ಉಪಾಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೊಲ್ಲಿ ರಾಷ್ಟ್ರಗಳ ಇತಿಹಾಸದಲ್ಲಿ ಮೊದಲನೇ ಬಾರಿಗೆ ಮಹಿಳಾ ತಂಡದಿಂದ ಕರ್ನಾಟಕದ ಸಾಂಸ್ಕೃತಿಕ ಶೈಲಿಯಾದ ಡೊಳ್ಳು ಕುಣಿತ ಆಯೋಜಿಸಲಾಗಿತ್ತು. ಸುಮಾ ಮಹೇಶ್ ಗೌಡ ಈ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದ್ದು, ಪ್ರೇಕ್ಷಕರ ಹಾಗೂ ಅತಿಥಿಗಳ ಮೆಚ್ಚುಗೆ ಪಡೆದಿದೆ.

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಾಯಭಾರಿಗಳ ಮೆಚ್ಚುಗೆ
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಟಿ.ಎಸ್ ನಾಗಾಭರಣ ಕರ್ನಾಟಕ ಸಂಘವು ನಡೆಸುತ್ತಿರುವ ಕನ್ನಡ ಶಾಲೆ ಹಾಗೂ ಕನ್ನಡ ಕಾರ್ಯಕ್ರಮಗಳನ್ನು ಶ್ಲಾಘಿಸಿದ್ದಾರೆ. ಅಲ್ಲದೇ ಕನ್ನಡ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸುತ್ತಿರುವ ಅಭಿಯಾನಗಳ ಬಗ್ಗೆ ಪ್ರೇಕ್ಷಕರಿಗೆ ತಿಳಿಸಿದರು. ಇನ್ನು ಕಾರ್ಯಕ್ರಮದಲ್ಲಿ ಟಿ.ಎಸ್. ನಾಗಾಭರಣ ಅವರಿಗೆ 'ಕತಾರ್ ಕನ್ನಡ ಸಮ್ಮಾನ್' ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.
ಇನ್ನು ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿ ಏಂಜೆಲಿನ ಪ್ರೇಮಲತಾ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಕರ್ನಾಟಕ ಸಂಘ ಕತಾರ್ನ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದ್ದಾರೆ. ಮುಂದಿನ ದಿನಗಳ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಪ್ರೇಕ್ಷಕರ ಮನ ಗೆದ್ದ ಮಿಮಿಕ್ರಿ ಯೋಗಿ ಗೌಡ
67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟ ಅನೂಪ್ ಭಂಡಾರಿ ಸಿನಿಮಾಗಳ ಹಾಡನ್ನು ಹಾಗೂ ಟಿ.ಎಸ್ ನಾಗಾಭರಣ ಅವರ ಹಾಡುಗಳನ್ನು ಪ್ರದರ್ಶನಗೊಳಿಸಲಾಯಿತು. ಅಪ್ಪು ಸ್ಮರಣಿಕೆ ಕಾರ್ಯಕ್ರಮ ಈ ಬಾರಿಯ ವಿಶೇಷತೆಯಾಗಿತ್ತು. ಕನ್ನಡ ಉಳಿಸಿ ಹಾಗೂ ಬೆಳೆಸಿ ಎಂಬ ನೀತಿ ಕಥೆಯ ನಾಟಕ ಪ್ರದರ್ಶನ ಮಾಡಲಾಯಿತು. ಅಲ್ಲದೇ ಪ್ರಪಂಚದಾದ್ಯಂತ ಯಶಸ್ವಿ ಪ್ರದರ್ಶನಗೊಳ್ಳುತ್ತಿರುವ ಕನ್ನಡ ಸಿನಿಮಾ ಕಾಂತಾರದ ವರಾಹ ರೂಪಂ ಹಾಡಿನ ನೃತ್ಯ ಪ್ರದರ್ಶನಗೊಂಡಿದ್ದು, ಎಲ್ಲರ ಮೆಚ್ಚುಗೆ ಪಡೆದಿದೆ. ಇನ್ನು ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಯೋಗಿ ಗೌಡ ನಟರು, ರಾಜಕೀಯ ವ್ಯಕ್ತಿಗಳು ಮಾಧ್ಯಮದ ದಿಗ್ಗಜರ ಧ್ವನಿಗಳನ್ನು ಮಿಮಿಕ್ರಿ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.












Click it and Unblock the Notifications