Heggadadevankote elections: ಕೋಟೆಗೆ ಯಾರಾಗಲಿದ್ದಾರೆ "ಅರಸು"?, ಮಾಹಿತಿ ತಿಳಿಯಿತಿ
ಮೈಸೂರು, ಮಾರ್ಚ್, 26: ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿಯೇ ಇದೆ. ರಾಜ್ಯದ ಅತಿ ದೊಡ್ಡ ಹಾಗೂ ಎರಡನೇ ಅಧಿಕಾರ ಶಕ್ತಿ ಕೇಂದ್ರವಾಗಿರುವ ಹಳೆ ಮೈಸೂರು ಇದೀಗ ಮತ್ತೊಮ್ಮೆ ಸದ್ದು ಮಾಡಿದೆ. ಹಾಗಾದರೆ ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಚುನಾವಣಾ ರಂಗು ಯಾವ ರೀತಿ ಇದ ಎಂದು ತಿಳಿಯೋಣ ಬನ್ನಿ.
ಮೈಸೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 4 ಸ್ಥಾನದಲ್ಲಿ ಜಯ ಸಾಧಿಸಿದ್ದರೆ, ಜೆಡಿಎಸ್ ಕೂಡ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಮೂರು ಸ್ಥಾನವನ್ನು ಗೆದ್ದಿತ್ತು. ಇನ್ನು ಲೋಕಸಭೆ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಜಯಭೇರಿ ಬಾರಿಸಿದ್ದರು. ಇದೀಗ ಇಲ್ಲಿನ ರಾಜಕೀಯ ವಾತಾವರಣ ಸಾಕಷ್ಟು ಬದಲಾಗಿದೆ.

ಎಚ್.ಡಿ.ಕೋಟೆ ಕ್ಷೇತ್ರ ಪರಿಚಯ
ಎಚ್.ಡಿ.ಕೋಟೆಯು ವನಸಿರಿಗಳ ನಾಡು, ಆನೆಗಳ ಬೀಡು ಎಂದೇ ಪ್ರಸಿದ್ಧಿ ಪಡೆದುಕೊಡಿದೆ. ಸದ್ಯ ತಾಲೂಕಿನಲ್ಲಿ 2.20 ಲಕ್ಷ ಮತದಾರಿದ್ದಾರೆ. ಕ್ಷೇತ್ರದಲ್ಲಿ ನಾಯಕ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಇಲ್ಲಿ ಜೆಡಿಎಸ್ನ ಚಿಕ್ಕಮಾದು ಪ್ರಥಮ ಪ್ರಯತ್ನದಲ್ಲಿಯೇ ಗೆದ್ದಿದ್ದರು. ತಂದೆ ಅಕಾಲಿಕ ನಿಧನದ ನಂತರ ಕಳೆದ ಬಾರಿ ಅನಿಲ್ ಚಿಕ್ಕಮಾಧು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಜೊತೆಗೆ ಗೆಲುವು ಕೂಡ ಸಾಧಿಸಿದ್ದರು.
ಕಾಂಗ್ರೆಸ್ನಿಂದ ಗೆದ್ದು ಬಿಜೆಪಿಗೆ ಹೋಗಿದ್ದ ಚಿಕ್ಕಣ್ಣ ಈಗ ಜೆಡಿಎಸ್ನಲ್ಲಿದ್ದಾರೆ. ಜೊತೆಗೆ ಮಗ ಜಯಪ್ರಕಾಶ್ಗೆ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ಇನ್ನು ಬಿಜೆಪಿಯಿಂದ ಅಪ್ಪಣ್ಣ, ಡಾ.ಎಚ್.ವಿ.ಕೃಷ್ಣಸ್ವಾಮಿ ಇಲ್ಲಿನ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಎಚ್.ಡಿ.ಕೋಟೆ ಕ್ಷೇತ್ರದ ರಾಜಕೀಯ ಚಿತ್ರಣ
ಮೈಸೂರು ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ನಂಜನಗೂಡು ಹಾಗೂ ತಿ.ನರಸೀಪುರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಎಚ್.ಡಿ.ಕೋಟೆ ಹಿಂದುಳಿದ ತಾಲೂಕು ಎಂಬ ಹಣೆಪಟ್ಟೆಯನ್ನು ಕಟ್ಟಿಕೊಂಡಿದೆ. ಇಲ್ಲಿ ಪ್ರಾಕೃತಿಕ ಸಂಪತ್ತು ಹೇರಳವಾಗಿದೆ. ಕಬಿನಿ ಹಿನ್ನೀರಿನ ಪ್ರದೇಶ ಇರುವ ಕೋಟೆ ಪ್ರವಾಸಿಗರ ಪಾಲಿನ ನೆಚ್ಚಿನ ತಾಣವಾಗಿದೆ. ಅಲ್ಲದೇ ಹುಲಿಗಳನ್ನು ಹೆಚ್ಚು ಹೊಂದಿರುವ ಅಂತರಸಂತೆ ಸಾರಿ ಹೆಚ್ಚಿನ ಪ್ರಖ್ಯಾತಿ ಪಡೆದುಕೊಂಡಿದೆ.

ಹಾಗೆ ನೋಡಿದರೆ ಪ್ರತಿ ಬಾರಿ ಚುನಾವಣೆಯಲ್ಲೂ ಎಚ್.ಡಿ.ಕೋಟೆ ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ನೇರ ಹಣಾಹಣಿ ಆಗುತ್ತಲೇ ಬಂದಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಕೂಡ ಪೈಪೋಟಿ ನೀಡುತ್ತಾ ಬರುತ್ತಿದೆ. ಈ ಬಾರಿ ಬಿಜೆಪಿ ಕೂಡ ತೊಡೆ ತಟ್ಟಿ ನಿಂತಿದ್ದು, ಕಮಲ ಅರಳಿಸುವ ಉತ್ಸಾಹದಲ್ಲಿದೆ. ಈಗಾಗಲೇ ಮೂರು ಪಕ್ಷಗಳು ತಮ್ಮದೆ ಆದ ತಂತ್ರಗಾರಿಕೆ ಹಾಗೂ ರಾಜಕೀಯ ಲೆಕ್ಕಾಚಾರ ಹಾಕಿಕೊಂಡಿದೆ. ಇನ್ನು ಕೋಟೆಗೆ ಯಾರು ಅರಸರಾಗುತ್ತಾರೆ ಎಂದು ಕಾದುನೋಡಬೇಕಿದೆ.
ಸೋಲು, ಗೆಲುವಿನ ಲೆಕ್ಕಾಚಾರ
ಹಾಲಿ ಶಾಸಕ ಅನಿಲ್ ಅವರ ತಂದೆ ಚಿಕ್ಕಮಾದು ಅವರು 2013ರ ಚುನಾವಣೆಯಲ್ಲಿ ಜೆಡಿಎಸ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ, ಅವರು ಅಕಾಲಿಕ ನಿಧನಕ್ಕೆ ಒಳಗಾದರು. ಈ ವೇಳೆ ಅನಿಲ್ ಹುಣಸೂರಿನ ಹನಗೋಡು ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ಗೆ ಜೆಡಿಎಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇನ್ನು 2018ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಚಿಕ್ಕಮಾದು ಅವರ ಮಗ ಅನಿಲ್ಗೆ ಟಿಕೆಟ್ ಕೈ ತಪ್ಪಿತ್ತು. ಇದರಿಂದ ನೊಂದ ಅನಿಲ್ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
Heggadadevankote Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಸಿ.ಅನಿಲ್ ಕುಮಾರ್ (ಕಾಂಗ್ರೆಸ್) | 76,652 | ಚಿಕ್ಕಣ್ಣ (ಜೆಡಿಎಸ್) | 54,559 |
| 2013 | ಚಿಕ್ಕಮಾದು ಎಸ್. (ಜೆಡಿಎಸ್) | 48,606 | ಚಿಕ್ಕಣ್ಣ (ಕಾಂಗ್ರೆಸ್) | 36,108 |
| 2008 | ಚಿಕ್ಕಣ್ಣ (ಕಾಂಗ್ರೆಸ್) | 43,222 | ಕೆ. ಚಿಕ್ಕವೀರನಾಯಕ (ಬಿಜೆಪಿ) | 30,680 |
ಇತ್ತೀಚೆಗೆ ಕ್ಷೇತ್ರದಲ್ಲಿ ಬಿಜೆಪಿ ಕೂಡ ಪ್ರಬಲವಾಗುತ್ತಿದ್ದು, ಪಕ್ಷದಿಂದ ಸ್ಪರ್ಧಿಸಲು ಮೂವರು ತದಿಗಾಲಲ್ಲಿ ನಿಂತಿದ್ದಾರೆ. ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಮುಖಂಡ ಕೃಷ್ಣಸ್ವಾಮಿ, ಜಂಗಲ್ ಲಾಡ್ಜ್ ಆ್ಯಂಡ್ ರೆಸಾರ್ಟ್ ಅಧ್ಯಕ್ಷ ಅಪ್ಪಣ್ಣ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಸಿದ್ದರಾಜು 2013 ಹಾಗೂ 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು.
ಅಪ್ಪಣ್ಣ ಮತ್ತು ಕೃಷ್ಣಸ್ವಾಮಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರೂ ಆಗಿದ್ದಾರೆ. 2013ರ ಚುನಾವಣೆಯಲ್ಲಿ ಅಪ್ಪಣ್ಣ ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತು ಕೃಷ್ಣಸ್ವಾಮಿ ಎಚ್.ಡಿ.ಕೋಟೆ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಗಾಗಿ ಸ್ಪರ್ಧಿಸಿ ಸೋಲುಂಡಿದ್ದರು.
ಮಾಜಿ ಶಾಸಕ ಚಿಕ್ಕಣ್ಣ ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದಾರೆ. ಚುನಾವಣಾ ರಾಜಕಾರಣದಿಂದ ಅವರು ನಿವೃತ್ತಿ ಆಗುತ್ತಿದ್ದು, ಶಿವ ಜಯಪ್ರಕಾಶ್ ಅವರನ್ನು ಕಣಕ್ಕೆ ಇಳಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಜೆಡಿಎಸ್ನಿಂದ ಜಯಪ್ರಕಾಶ್ ಮತ್ತು ಕೃಷ್ಣನಾಯಕ ಪ್ರಬಲ ಆಕಾಂಕ್ಷಿಗಳಾಗಿದ್ದು, ಇಬ್ಬರ ನಡುವೆ ಜೆಡಿಎಸ್ ಟಿಕೆಟ್ಗೆ ಭಾರಿ ಪೈಪೋಟಿ ಏರ್ಪಟ್ಟಿದೆ.












Click it and Unblock the Notifications