ನಿಮ್ಮ ಹಾಗೆ ಸರ್ಕಾರದ ಆಸ್ತಿ ಲೂಟಿ ಹೊಡೆದಿಲ್ಲ: ಈಶ್ವರಪ್ಪಗೆ ಜಮೀರ್ ತಿರುಗೇಟು
ಹಾವೇರಿ, ಜುಲೈ 1: ಪಿಕ್ ಪಾಕೆಟ್ ಮಾಡುವವರನ್ನು ಒದ್ದು ಒಳಗೆ ಹಾಕುವಂತೆ ಸಚಿವ ಜಮೀರ್ ಅಹ್ಮದ್ ಅವರನ್ನು ಪೊಲೀಸರು ಲಾಕಪ್ನಲ್ಲಿ ಇಟ್ಟರೆ ಐಎಂಎ ಲೂಟಿ ಪ್ರಕರಣದ ಸತ್ಯಗಳು ಬಯಲಾಗುತ್ತವೆ ಎಂಬ ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಅವರ ಹೇಳಿಕೆಗೆ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.
'ನಾನು ನನ್ನ ಸ್ವಂತ ಆಸ್ತಿ ಮಾರಾಟ ಮಾಡಿರುವುದು. ನಿಮ್ಮ ಹಾಗೆ ಸರ್ಕಾರದ ಖಜಾನೆ ಲೂಟಿ ಹೊಡೆದಿಲ್ಲ' ಎಂದು ಜಮೀರ್, ಈಶ್ವರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.
ಹಾವೇರಿಯಲ್ಲಿ ಸೋಮವಾರ ಮಾತನಾಡಿದ ಅವರು, 'ಮಿಸ್ಟರ್ ಈಶ್ವರಪ್ಪ ಅವರೇ, ನಾನು ಐಎಎಂ ಜ್ಯೂವೆಲರ್ಸ್ ಮಾಲೀಕ ಮನ್ಸೂರ್ಗೆ ಮಾರಾಟ ಮಾಡಿರುವುದು ನನ್ನ ಸ್ವಂತ ಆಸ್ತಿಯನ್ನು. ನನ್ನ ಜಾಗ ಮಾರಲು ನನಗೆ ಯಾರ ಅಪ್ಪಣೆಯೂ ಬೇಕಿರಲಿಲ್ಲ. ನಿಮ್ಮಂತೆ ನಾನು ಸರ್ಕಾರಿ ಆಸ್ತಿ ಲೂಟಿ ಹೊಡೆದಿಲ್ಲ' ಎಂದರು.
ಮೈತ್ರಿ ಸರ್ಕಾರದ ಕಳ್ಳೆತ್ತುಗಳನ್ನು ಲಾಕಪ್ಗೆ ಹಾಕಿ ಬೆಂಡೆತ್ತಬೇಕು: ಈಶ್ವರಪ್ಪ
ಸಿದ್ದರಾಮಯ್ಯ ಅವರು ಅಹಿಂದ ತಂಡ ಕಟ್ಟುತ್ತಾರೆ ಎಂಬ ಸುದ್ದಿ ಸತ್ಯವಲ್ಲ. ಅವರು ಆ ರೀತಿ ಯಾವುದೇ ತಂಡ ಕಟ್ಟಲು ಮುಂದಾಗಿಲ್ಲ. ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾರೆ ಎಂದು ಹೇಳಿದರು.
ಸಿಎಂ ಆಗಿ ಜೈಲಿಗೆ ಹೋಗಿ ಬಂದವರು
'ನಿಮ್ಮ ನಾಯಕ ಯಡಿಯೂರಪ್ಪ ಮತ್ತು ಅವರ 11 ಆಪ್ತರು ಜೈಲಿಗೆ ಹೋಗಿ ಬಂದಿದ್ದರು. ಮುಖ್ಯಮಂತ್ರಿಯಾಗಿ ಜೈಲಿಗೆ ಹೋಗಿ ಬಂದಿರುವ ಉದಾಹರಣೆ ಈ ದೇಶದಲ್ಲಿಯೇ ಬೇರೆ ಇಲ್ಲ. ಈಗ ನಮ್ಮ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ?' ಎಂದು ಪ್ರಶ್ನಿಸಿದರು.
ಸಚಿವ ಜಮೀರ್ ಅಹಮದ್ ಖಾನ್ ಕಾಣೆಯಾಗಿದ್ದಾರೆ!
ಇನ್ನೂ ಏನು ದಾಖಲೆ ಬೇಕು ಕೇಳಿ
'2017ರ ಡಿಸೆಂಬರ್ನಲ್ಲಿ ನನ್ನ ಆಸ್ತಿಯನ್ನು ಮೊಹಮ್ಮದ್ ಮನ್ಸೂರ್ಗೆ ಮಾರಾಟ ಮಾಡಿದ್ದೆ. ಅದಕ್ಕೆ ಆರ್ಟಿಜಿಎಸ್ ಮೂಲಕ 5 ಕೋಟಿ ರೂಪಾಯಿ ಅಡ್ವಾನ್ಸ್ ಪಡೆದುಕೊಂಡಿದ್ದೆ. 2018ರ ಜೂನ್ನಲ್ಲಿ ಬಾಕಿ 4.36 ಪಡೆದು ಆಸ್ತಿ ನೋಂದಣಿ ಮಾಡಿಕೊಟ್ಟಿದ್ದೇನೆ. ಚುನಾವಣೆಯಲ್ಲಿ ಅಫಿಡವಿಟ್ನಲ್ಲಿ ಈ ಎಲ್ಲ ವಿವರಗಳನ್ನು ಸಹ ನೀಡಿದ್ದೇನೆ. ಅದಕ್ಕೆ ತೆರಿಗೆಯನ್ನೂ ಪಾವತಿಸಿದ್ದೇನೆ. ಇನ್ನೇನು ದಾಖಲೆ ಬೇಕೆಂದು ಈಶ್ವರಪ್ಪ ಕೇಳಲಿ. ಅದನ್ನೂ ತೋರಿಸುತ್ತೇನೆ' ಎಂದು ಸವಾಲು ಹಾಕಿದರು.
ಲಾಕಪ್ನಲ್ಲಿ ಹಾಕಬೇಕು
ಎಸ್ಐಟಿ ತನಿಖೆ ನಡೆಸಿದರೆ ಐಎಂಎ ಹಗರಣದ ಸತ್ಯ ಹೊರಬರುವುದಿಲ್ಲ. ಜಮೀರ್ ಅಹ್ಮದ್ ಅವರನ್ನು ಸಂಪುಟದಿಂದ ಕೈಬಿಟ್ಟು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಪೊಲೀಸರು ಅವರನ್ನು ಲಾಕಪ್ನಲ್ಲಿ ಇಡಬೇಕು. ಆಗ ಮಾತ್ರ ಸತ್ಯ ಹೊರಬರಲಿದೆ. ಎಂದು ಈಶ್ವರಪ್ಪ ಆಗ್ರಹಿಸಿದ್ದರು.
ಸಿದ್ದರಾಮಯ್ಯ ಕಟ್ಟಲು ಹೊರಟಿರುವ ಅಹಿಂದ ಸೈನ್ಯದ ಸದಸ್ಯರ ಪಟ್ಟಿ?
ಸಿಬಿಐ ತನಿಖೆಗೂ ಸಿದ್ಧ
'ಜಾರಿ ನಿರ್ದೇಶನಾಲಯದಿಂದ ನೋಟಿಸ್ ಬಂದಿರುವುದು ನನಗೆ ಮಾತ್ರವಲ್ಲ. ಮನ್ಸೂರ್ ಜತೆ ನಡೆಸಿದ ಎಲ್ಲರಿಗೂ ಇಡಿ ನೋಟಿಸ್ ಕಳುಹಿಸಿದೆ. ನಾವು ನಡೆಸಿದ ವಹಿವಾಟಿಗೆ ಸೂಕ್ತ ದಾಖಲೆಗಳನ್ನು ಕೇಳಿದ್ದಾರೆ ಅಷ್ಟೇ. ಆಸ್ತಿ ಮಾರಾಟ ಮಾಡಿರುವುದು ಬಿಟ್ಟರೆ ಈ ಹಗರಣದಲ್ಲಿ ನನ್ನ ಪಾತ್ರ ಏನೂ ಇಲ್ಲ. ಎಸ್ಐಟಿ ಬಗ್ಗೆ ಇವರಿಗೆ ನಂಬಿಕೆ ಇಲ್ಲದೆ ಇದ್ದರೆ ಸಿಬಿಐ ತನಿಖೆಗೂ ನಾನು ಸಿದ್ಧ' ಎಂದರು.