'ನವೀನ್ ಮೃತದೇಹ ತಾಯ್ನಾಡಿಗೆ ತರುವ ಪ್ರಯತ್ನದಲ್ಲಿದ್ದೇವೆ': ಸಿಎಂ
ಹುಬ್ಬಳ್ಳಿ, ಮಾರ್ಚ್ 6: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಾವನ್ನಪ್ಪಿದ ಹಾವೇರಿ ವಿದ್ಯಾರ್ಥಿ ನವೀನ್ ಅವರ ಮೃತದೇಹವನ್ನು ತಾಯ್ನಾಡಿಗೆ ತರುವಂತ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದು ಹುಬ್ಬಳ್ಳಿಯಲ್ಲಿಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, 'ನವೀನ್ ಮೃತದೇಹ ತರಲು ಪ್ರಯತ್ನಿಸುತ್ತಿದ್ದೇವೆ. ಆದಷ್ಟು ಬೇಗ ನವೀನ್ ಮೃತದೇಹ ತರಲು ಪ್ರಯತ್ನಿಸುತ್ತೇವೆ' ಎಂದು ಸಿಎಂ ಹೇಳಿದರು. ಉಕ್ರೇನ್ನಲ್ಲಿ ಇನ್ನೂ 200ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ವಾಪಸ್ಸು ಕರೆತರಲು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದರು.
ನಿನ್ನೆಯಷ್ಟೇ ಹಾವೇರಿಯಲ್ಲಿ ನವೀನ್ ಕುಟುಂಬಸ್ಥರನ್ನು ಭೇಟಿ ಮಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯ ಸರ್ಕಾರದಿಂದ ಪರಿಹಾರ ಘೋಷಿಸಿದ್ದಾರೆ. ಇದೇ ವೇಳೆ 25 ಲಕ್ಷ ರೂಪಾಯಿ ಚೆಕ್ ನೀಡಿದರು. ಪೋಷಕರಿಗೆ ಸಾಂತ್ವನ ಹೇಳಿದ ಬೊಮ್ಮಾಯಿ ನವೀನ್ ತಂದೆ ಗ್ಯಾನಗೌಡರ್ಗೆ 25 ಲಕ್ಷದ ಚೆಕ್ ಹಸ್ತಾಂತರಿಸಿದ್ದಾರೆ. ನವೀನ್ ಸಾವು ದೊಡ್ಡ ದುರಂತ ಎಂದಿದ್ದಾರೆ. ಹಿಂದೆ ನವೀನ್ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದಿದ್ದ ಸಿಎಂ ಈಗಲೂ ತುಂಬಾ ಬೇಸಪಡುತ್ತಿದ್ದಾರೆ. ಡಾಕ್ಟರ್ ಆಗಿ ತನ್ನ ಭವಿಷ್ಯ ರೂಪಿಸಲು ಹೊರಟ ನವೀನ್ ಸಾವು ನಿಜಕ್ಕೂ ದುರಂತ ಎಂದಿದ್ದಾರೆ. ಇದನ್ನೂ ನಾವ್ಯಾರು ಊಹಿಸಿರಲಿಲ್ಲ ಎಂದರು.
ಇನ್ನು ನವೀನ್ ದೇಹವನ್ನು ತಾಯ್ನಾಡಿಗೆ ತರೋಕೆ ನಿರಂತರ ಪ್ರಯತ್ನ ನಡೆದಿದೆ. ಮಾರ್ಚುರಿಯಲ್ಲಿ ಬಾಡಿ ಇಟ್ಟಿರೋದಾಗಿ ಮಾಹಿತಿ ಸಿಕ್ಕಿದೆ. ಬಾಂಬ್ ದಾಳಿ ನಿಂತ ನಂತರ ಪಾರ್ಥಿವ ಶರೀರ ತರೋಕೆ ಪ್ರಯತ್ನಿಸುತ್ತೇವೆ. ಉಕ್ರೇನ್ನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಭಾರತದ ಹಲವು ವಿದ್ಯಾರ್ಥಿಗಳು ಅಲ್ಲೇ ಸಿಲುಕಿದ್ದಾರೆ ಅವರನ್ನ ಕರೆತರುವ ಕೆಲಸ ನಡೀತೀದೆ. ಯುದ್ಧ ಆದಷ್ಟು ಬೇಗ ನಿಲ್ಲಲಿ. ಶೀಘ್ರವೇ ನವೀನ್ ಮೃತದೇಹವನ್ನು ತರೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇನ್ನೂ ಉಕ್ರೇನ್ನಲ್ಲಿ ಎಂಬಿಬಿಎಸ್ ಮೊದಲ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ರಾಮನಗರದ ಐಜೂರು ನಿವಾಸಿ ಜೋಹರ್ ಪಾಷ, ಹಜೀರಾ ಬಾನು ಪುತ್ರಿ ಆಯೇಷಾ ಕೌಸರ್ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಈ ವೇಳೆ ಉಕ್ರೇನ್ ಕರಾಳ ದಿನಗಳನ್ನು ನೆನಸಿಕೊಂಡ ಆಯೇಷಾ 'ನಾನು ಉಕ್ರೇನ್ ಗಡಿ ತಲುಪುವಾಗ ನಾನು ಪ್ರಯಾಣಿಸುತ್ತಿದ್ದ ಬಾಂಬ್ ದಾಳಿಯಾಯಿತು. ಉಕ್ರೇನ್ ಸೈನಿಕರು ನಮ್ಮ ತಲೆಗೆ ಗನ್ ಇಟ್ಟು ವಿಚಾರಣೆ ನಡೆಸಿದರು. ಊಟವಿಲ್ಲ ನೀರಿಲ್ಲ. ಕುಡಿಯುವ ನೀರು ವಾಸನೆ ಬರುತ್ತಿತ್ತು. ಒಂದು ಹೊತ್ತಿನ ಊಟವನ್ನು ನಾವೆಲ್ಲರು ಹಂಚಿಕೊಂಡು ತಿಂದಿದ್ದೇವೆ. ಸಾಕಷ್ಟು ನಡೆದೆವು. ಒಂದು ಬಾಂಬ್ ಶಬ್ದವನ್ನು ಮರೆಯುವ ಹೊತ್ತಿಗೆ ಮತ್ತೊಂದು ಬಾಂಬ್ ದಾಳಿಯಾಗುತ್ತಿತ್ತು. ಮಲಗಿದರು ನಿದ್ದೆ ಬರುತ್ತಿರಲಿಲ್ಲ ಎಂದು ಹೇಳಿಕೊಂಡರು.
ಇನ್ನೂ ಉಕ್ರೇನ್ ನಿಂದ ಧಾರವಾಡದ ವಿದ್ಯಾರ್ಥಿನಿ ಚೈತ್ರ ಹುಬ್ಬಳ್ಳಿಗೆ ಬಂದಿಳಿದ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಸ್ವಾಗತಿಸಿದರು. ಹೂಗುಚ್ಚ ಹಾರವನ್ನು ಹಾಕುವ ಮೂಲಕ ಅವರನ್ನು ಬರಮಾಡಿಕೊಳ್ಳಳಾಯಿತು. ಚಿತ್ರದುರ್ಗದ ನಿತೀಶ್ ಎಂಬ ವಿದ್ಯಾರ್ಥಿ ಕೂಡ ಇಂದು ವಾಪಾಸ್ ಆಗಿದ್ದಾರೆ.
ಇತ್ತ ಚನ್ನಪಟ್ಟಣದ ವಿದ್ಯಾರ್ಥಿನಿ ನಿವೇದಿತಾ ಕೂಡ ವಾಪಸ್ ಆಗಿದ್ದಾರೆ. ಜಫೋರಿಝೀಯಾದಲ್ಲಿದ್ದ ಚನ್ನಪಟ್ಟಣ ವಿದ್ಯಾರ್ಥಿನಿ ನಿವೇದಿತಾ, ಜಫೋರಿಝೀಯಾ ಮೆಡಿಕಲ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. 3ನೇ ಸೆಮ್ ಮೆಡಿಕಲ್ ವಿದ್ಯಾರ್ಥಿನಿ ನಿವೇದಿತ ಇಂದು ಬೆಳಗಿನ ಫ್ಲೈಟ್ ನಲ್ಲಿ ಬಂದಿಳಿದರು. ನಿವೇದಿತಾ ಕಂಡು ಪೋಷಕರ ಆನಂದ ಬಾಷ್ಪ ಸುರಿಸಿದರು.












Click it and Unblock the Notifications