ಮುಂದುವರೆದ ಕೋಳಿವಾಡ, ಸಚಿವ ಆರ್.ಶಂಕರ್ ಮಾತಿನ ಸಮರ
ಹಾವೇರಿ, ಜೂನ್ 14 : ರಾಣೆಬೆನ್ನೂರು ಕ್ಷೇತ್ರದ ಶಾಸಕ ಆರ್.ಶಂಕರ್ ಮತ್ತು ಕಾಂಗ್ರೆಸ್ ನಾಯಕ ಕೆ.ಬಿ.ಕೋಳಿವಾಡ ನಡುವಿನ ಮಾತಿನ ಸಮರ ಮುಂದುರೆದಿದೆ. ಆರ್.ಶಂಕರ್ ಶುಕ್ರವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಪ್ರಮಾಣ ವಚನ ಸಮಾರಂಭದ ಬಳಿಕ ಮಾತನಾಡಿದ ಆರ್.ಶಂಕರ್ ಅವರು, 'ನನಗೆ ಮಂತ್ರಿ ಸ್ಥಾನ ತಪ್ಪಿಸಲು ಮಾಜಿ ಸ್ಪೀಕರ್ ಕೋಳಿವಾಡ ಸಾಕಷ್ಟು ಪ್ರಯತ್ನ ಮಾಡಿದ್ದರು. ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದರು. ಆದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಚಿವ ಸ್ಥಾನ ಸಿಕ್ಕಿದೆ' ಎಂದು ಹೇಳಿದರು.
'ವಿಧಾನಸಭೆ ಚುನಾವಣೆ ವೇಳೆ ನನಗೆ ಟಿಕೆಟ್ ತಪ್ಪಿಸಿ ಕೋಳಿವಾಡ ಅವರು ಟಿಕೆಟ್ ಪಡೆದರು. ಆದರೆ, ಕ್ಷೇತ್ರದ ಜನರು ನನ್ನ ಪರವಾಗಿ ತೀರ್ಪು ನೀಡಿದರು. ರಾಜಕೀಯ ಲಾಭಕ್ಕಾಗಿ ಅವರು ಏನೆಲ್ಲಾ ಮಾಡಿದ್ದಾರೆ ಎಂದು ಗೊತ್ತು' ಎಂದು ಶಂಕರ್ ತಿಳಿಸಿದರು.

'ಕಳೆದ ಬಾರಿ ನಾನು ಗೆಲ್ಲುವ ವಾತಾವರಣವಿತ್ತು. ಆದ್ದರಿಂದ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನನಗೆ ಟಿಕೆಟ್ ನೀಡಬೇಕು ಎಂದು ನಿರ್ಧರಿಸಿ ಆಹ್ವಾನಿಸಿದ್ದರು. ಆದರೆ, ಕೋಳಿವಾಡ ಅವರು ಕುತಂತ್ರ ಮಾಡಿ, ಹೆದರಿಸಿ ಟಿಕೆಟ್ ಪಡೆದರು' ಎಂದು ಶಂಕರ್ ಆರೋಪಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ್ದ ಕೆ.ಬಿ.ಕೋಳಿವಾಡ ಅವರು, 'ಆರ್.ಶಂಕರ್ ಒಬ್ಬ ಅವಕಾಶವಾದಿ ಅವರಿಗೆ ಸಚಿವ ಸ್ಥಾನ ನೀಡಬಾರದು' ಎಂದು ಹೇಳಿದ್ದರು.
ರಾಣೆಬೆನ್ನೂರು ಕ್ಷೇತ್ರದ ಕೆಪಿಜೆಪಿ ಶಾಸಕ ಆರ್.ಶಂಕರ್ ಅವರು ಶುಕ್ರವಾರ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಆರ್.ಶಂಕರ್ ಅವರು ಕೆ.ಬಿ.ಕೋಳಿವಾಡ ಅವರನ್ನು ಸೋಲಿಸಿದ್ದರು.












Click it and Unblock the Notifications