ಫಸಲ್ ಬಿಮಾ ಯೋಜನೆ: ಸ್ಯಾಟಲೈಟ್ ಮೂಲಕ ಬೆಳೆ ಹಾನಿ ಸಮೀಕ್ಷೆ! ಬಸವರಾಜ ಬೊಮ್ಮಾಯಿ
ಹಾವೇರಿ, ಮಾರ್ಚ್ 16: ಭಾರತದ ರೈತರಿಗೆ ಅನಿರೀಕ್ಷಿತ ಬೆಳೆ ನಷ್ಟಗಳ ವಿರುದ್ಧ ಪರಿಹಾರ ಮತ್ತು ಆರ್ಥಿಕ ಬೆಂಬಲ ಒದಗಿಸುವ ಸಲುವಾಗಿ 'ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ' ಜಾರಿಗೆ ತರಲಾಗಿದೆ. ಈ ಫಸಲ್ ಬಿಮಾ ಯೋಜನೆಯನ್ನು ಇನ್ನಷ್ಟು ರೈತಸ್ನೇಹಿ ಯಾಗಿಬೇಕು ಎಂದು ಕೇಂದ್ರ ಸಚಿವರಿಗೆ ಸಂಸದ ಬಸವರಾಜ ಬೊಮ್ಮಾಯಿ ಮಹತ್ವದ ಪತ್ರ ಬರೆದಿದ್ದಾರೆ.
ಫಸಲ್ ಬಿಮಾ ಯೋಜನೆಯನ್ನು ಇನ್ನಷ್ಟು ರೈತಸ್ನೇಹಿಯನ್ನಾಗಿ ಮಾಡಲು ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನಿನ ಸರ್ವೆ ನಂಬರ್ ಆಧಾರದಲ್ಲಿ ಸ್ಯಾಟಲೈಟ್ ಮೂಲಕ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು. ಈ ಕುರಿತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹ್ವಾಣ್ ಅವರಿಗೆ ಸಂಸದ ಬವರಾಜ ಬೊಮ್ಮಾಯಿ ಅವರು ಪತ್ರ ಮುಖೇನ ಮನವಿ ಮಾಡಿದರು.

ಪತ್ರದಲ್ಲಿ, ಫಸಲ್ ಬಿಮಾ ಯೋಜನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ರೈತ ಪರವಾದ ಯೋಜನೆಯಾಗಿದೆ. ಈ ಯೋಜನೆಯನ್ನು ಇನ್ನಷ್ಟು ರೈತ ಪರ ಹಾಗೂ ಪಾರದರ್ಶಕವಾಗಿ ಜಾರಿ ಮಾಡುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಬರ, ಪ್ರವಾಹದಂತಹ ಅನೇಕ ಕಾರಣಗಳಿಂದ ಬೆಳೆ ಹಾನಿಗೊಳಗಾದಾಗ ಗ್ರಾಮ ಪಂಚಾಯತಿ ಮಟ್ಟದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದೆ. ಅದರ ಬದಲು ಪ್ರತಿ ರೈತರ ಜಮೀನಿನ ಸರ್ವೆ ನಂಬರ್ ಆಧಾರದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿದರೆ ನಿಜವಾಗಲೂ ಬೆಳೆಹಾನಿಗೊಳಗಾದ ಎಲ್ಲ ರೈತರು ವಿಮಾ ಪರಿಹಾರ ಪಡೆಯಲು ಅನುಕೂಲವಾಗುತ್ತದೆ. ಅಲ್ಲದೇ ಅನಗತ್ಯವಾಗಿ ವಿಮಾ ಪರಿಹಾರ ಪಡೆಯುವುದನ್ನು ತಪ್ಪಿಸಿದಂತಾಗುತ್ತದೆ ಎಂದು ವಿವರಿಸಿದರು.

ಇನ್ನೊಂದು ಮಹತ್ವದ ವಿಷಯವೆಂದರೆ ಬೆಳೆ ಹಾನಿಯ ಪ್ರಮಾಣವನ್ನು ಹಿಂದಿನ ಏಳು ವರ್ಷಗಳ ಅಂದಾಜು ಪಡೆಯುವುದರಿಂದ ಸರಿಯಾದ ಹಾನಿಯ ಪ್ರಮಾಣವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ.
ಮಳೆಯ ಅನಿಶ್ಚಿತತೆ ಹಾಗೂ ಹವಾಮಾನ ವೈಪರಿತ್ಯರಿಂದ ಏಳು ವರ್ಷಗಳ ಅವಧಿಯಲ್ಲಿ ಬೆಳೆ ಹಾನಿಯ ಬಗ್ಗೆ ನಿಖರವಾದ ಮಾಹಿತಿ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬೆಳೆ ಹಾನಿಯ ಬಗ್ಗೆ ಪ್ರಸ್ತುತ ಹಂಗಾಮು ವರ್ಷ ಹಾಗೂ ಹಿಂದಿನ ವರ್ಷ ಸೇರಿ ಎರಡು ವರ್ಷಗಳನ್ನು ಪರಿಗಣಿಸಬೇಕು.
ಈ ಎರಡೂ ಸುಧಾರಣೆಗಳನ್ನು ಜಾರಿಗೆ ತರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಅಲ್ಲದೇ ಈಗಾಗಲೇ ಪ್ರೀಮಿಯಂ ಮೊತ್ತ ನಿಗದಿಯಾಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಯಾವುದೇ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ ಎಂದು ತಿಳಿಸಿದರು.
ಈ ಎರಡು ಸುಧಾರಣೆಗಳನ್ನು ತಂದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಿಮ್ಮ ಉದ್ದೇಶದಂತೆ ಫಸಲ್ ಬಿಮಾ ಯೋಜನೆ ರೈತರ ಆಪದ್ಭಾಂದವ ಆಗಲಿದೆ. ದಯವಿಟ್ಟು ಈ ವಿಷಯದಲ್ಲಿ ತಾವು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಅಧ್ಯಕ್ಷತೆಯಲ್ಲಿ ಈ ವಿಷಯದ ಕುರಿತು ಚರ್ಚಿಸಲು ನಾನು ಆಸಕ್ತನಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಿಗೆ ವಿಶೇಷ ಕಾರ್ಯಕ್ರಮ ರೂಪಿಸಿ
ನೂರು ವರ್ಷ ಪೂರೈಸಿರುವ ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಿ ಅನುದಾನ ನೀಡಬೇಕು ಎಂದು ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರಕ್ಕೆ ಆಗ್ರಹಿಸಿದರು.
ಒಬ್ಬ ವ್ಯಕ್ತಿಗೆ ನೂರು ವರ್ಷ ಆಗುವುದು ಮುಖ್ಯವಲ್ಲ. ಒಂದು ಶಿಕ್ಷಣ ಸಂಸ್ಥೆಗೆ ನೂರು ವರ್ಷ ಆಗುವುದು ಇತಿಹಾಸ ನಿರ್ಮಾಣ ಮಾಡಿದಂತೆ. ವ್ಯಕ್ತಿ ತನ್ನ ಆರೋಗ್ಯ ಕಾಪಾಡಿಕೊಂಡರೆ ನೂರು ವರ್ಷ ಪೂರೈಸಬಹುದು. ಒಂದು ಸಂಸ್ಥೆಗೆ ನೂರಾ ಐದು ವರ್ಷಕ್ಕೆ ನೂರಾರು ಕಥೆಗಳಿರುತ್ತವೆ. ಈ ಸಂಸ್ಥೆಗೆ ರುದ್ರಪ್ಪ ಮಲ್ಲಾಡ್ ಅವರು ಜಮೀನು ದಾನ ಮಾಡಿದ್ದಾರೆ. ಅವರನ್ನು ಸ್ಮರಣೆ ಮಾಡಿ ಅಭಿನಂದಿಸುತ್ತೇನೆ. ಇಲ್ಲಿನ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಯಶಸ್ಸು ಕಂಡಿದ್ದಾರೆ. ಅವರಿಗೂ ಅಭಿನಂದನೆಗಳು ಎಂದು ಹೇಳಿದರು.
10 ಲಕ್ಷ ದೇಣಿಗೆ ನೀಡುವುದಾಗಿ ಘೊಷಣೆ
ನೂರು ವರ್ಷ ಅಂದರೆ ಏನಾದರೂ ಗುರುತು ಇಡುವ ಕೆಲಸ ಆಗಬೇಕು.ಇದು ಹೈಸ್ಕೂಲ್ ಆಗಿ ಮುಂದುವರೆಯುವ ಈ ಸಂದರ್ಭದಲ್ಲಿ ಮಾದರಿ ಶಾಲೆಯಾಗಿ ಪಿಯುಸಿ ಕಾಲೇಜು ಆಗಬೇಕು. ಅದಕ್ಕಾಗಿ ಎಲ್ಲರೂ ಸಂಕಲ್ಪ ಮಾಡಬೇಕು.
ಶಿಕ್ಷಣ ಬದುಕಿಗೆ ಬಹಳ ಮುಖ್ಯ ಶಿಕ್ಷಣ ಮನುಷ್ಯನನ್ನು ಮಾನವನನ್ನಾಗಿ ಮಾಡುತ್ತದೆ. ಇಲ್ಲಿನ ಮಕ್ಕಳು ಹೆಚ್ಚಿನ ವಿದ್ಯೆ ಪಡೆದು ಬದುಕಿನ ಎಲ್ಲ ರಂಗದಲ್ಲಿ ಯಶಸ್ಸಿಯಾಗಲಿ. ಇಲ್ಲಿನ ಯುವಕರು ಆದರ್ಶ ಶಾಲೆಯನ್ನಾಗಿ ಮುಂದುವರೆಸಲಿ ನನ್ನ ಸಂಸದರ ನಿಧಿಯಿಂದ 10 ಲಕ್ಷ ರೂ. ನೀಡುತ್ತೇನೆ ಎಂದು ಹೇಳಿದರು.
ಮಕ್ಕಳು ಯಾಕೆ, ಎಲ್ಲಿ, ಏನು, ಎಷ್ಟು, ಎನ್ನುವ ಫ್ರಶ್ನೆ ಮಾಡುವುದು ಯಶಸ್ಸಿನ ಮಂತ್ರ. ಪ್ರಶ್ನೆ ಮಾಡುವ ಮೂಲಕ ಬುದ್ದಿ ಶಕ್ತಿಯನ್ನು ತಾರ್ಕಿಕವಾಗಿ ಚಿಂತನೆಗೆ ಹಚ್ಚುತ್ತದೆ. ಒಮ್ಮೆ ವಿದ್ಯಾರ್ಥಿ ಆದರೆ ಸಾಯುವವರೆಗೂ ವಿದ್ಯಾರ್ಥಿ. ವ್ಯಾತ್ಯಾಸ ಏನೆಂದರೆ ಶಾಲೆಯಲ್ಲಿ ಪಠ್ಯ ಗುರುಗಳು ಇರುತ್ತಾರೆ. ಆದರೆ ಬದುಕಿನಲ್ಲಿ ಪ್ರತಿದಿನ ಪರೀಕ್ಷೆಯನ್ನು ಎದುರಿಸುತ್ತೇವೆ. ಯಾರ ಬುದ್ದಿಶಕ್ತಿಯ ಬಾಗಿಲು ತೆರೆದಿರುತ್ತದೊ ಅವರು ನಿರಂತರ ಕಲಿಯುತ್ತಾರೆ ಎಂದು ಹೇಳಿದರು.
ವಿವೇಕ ಯೋಜನೆ
ನೂರು ವರ್ಷ ಪೂರೈಸಿರುವ ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಿ ಅನುದಾನ ನೀಡಬೇಕು. ನಾನು ಸಿಎಂ ಆಗಿದ್ದಾಗ ಬಜೆಟ್ ನಲ್ಲಿ ಈ ಯೋಜನೆ ಘೊಷಣೆ ಮಾಡಿದ್ದೆ, ವಿವೇಕ ಯೋಜನೆ ಮಾಡಿದ್ದೆ ರಾಜ್ಯದಲ್ಲಿ 30 ಸಾವಿರ ಶಾಲಾ ಕೊಠಡಿ ಕೊರತೆ ಇದೆ. ಪ್ರತಿ ವರ್ಷ 9 ಸಾವಿರ ಶಾಲಾಕೊಠಡಿ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದೆ, 2022-23 ರಲ್ಲಿ ನಾಲ್ಕೂವರೆ ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡಿದ್ದೆವು. ಆ ಯೋಜನೆ ಮುಂದುವರೆಯಬೇಕಿತ್ತು ಆದರೆ ಸರ್ಕಾರ ನಿಲ್ಲಿಸಿದೆ ಎಂದರು.
ಹಾವೇರಿ ಜಿಲ್ಲೆಯಲ್ಲಿ 150 ಶಾಲಾ ಕೊಠಡಿ ನಿರ್ಮಾಣ ಆಗಿವೆ. ಶಿಕ್ಷಕರ ನೇಮಕ ಹಾಗೂ ಶಾಲಾ ಕೊಠಡಿ ನಿರ್ಮಾಣ ಆಗಬೇಕು. ನಾವು ಬಜೆಟ್ ನಲ್ಲಿ ಶಿಕ್ಷಣಕ್ಕೆ ಶೇ 14% ರಷ್ಟು ಅನುದಾನ ಮೀಸಲಿಟ್ಟಿದ್ದೇವು. ಅದು ಈಗ 11% ಕ್ಕೆ ಇಳಿದಿದೆ. ಶಿಕ್ಷಣವಿಲ್ಲದ ಸಮಾಜದಿಂದ ಅರಾಜಕತೆ ಉಂಟಾಗುತ್ತದೆ. ಅಂಬೇಡ್ಕರ್ ಅವರ ಮೂಲ ಉದ್ದೇಶ ಶಿಕ್ಷಣ ಆಗಿತ್ತು. ಶಿಕ್ಷಣ, ಸಂಘಟನೆ ಹೋರಾಟ ಅಂತ ಹೇಳಿದ್ದರು.
ಪ್ರತಿಯೊಬ್ಬರು ಶಿಕ್ಷಣ ಪಡೆಯಲು ಸರ್ಕಾರ ಅವಕಾಶ ಮಾಡಿಕೊಡಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತರೆ ಸರ್ಕಾರಿ ಶಾಲೆಗಳು ಉಳಿಯುತ್ತವೆ ಇಲ್ಲದಿದ್ದರೆ ಖಾಸಗಿ ಶಾಲೆಗಳಿಗೆ ಹೋಗುತ್ತಾರೆ. ಕನ್ನಡ ಶಾಲೆಗಳು ಉಳಿಬೇಕು ಎಂದು ಹೋರಾಟ ನಡೆಯುತ್ತದೆ. ಮತ್ತೊಂದೆಡೆ ಕಾನ್ವೆಂಟ್ ಶಾಲೆಗಳು ಹಳ್ಳಿ ಹಳ್ಳಿಗೆ ಆಗುತ್ತಿವೆ. ಕನ್ನಡ ಶಾಲೆಳಗಲ್ಲಿ ಗುಣಮಟ್ಟದ ಶಿಕ್ಷಣದ ಮೂಲಕ ಕನ್ನಡ ಶಾಲೆಗಳನ್ನು ಉಳಿಸಬೇಕು ಎಂದರು.












Click it and Unblock the Notifications