ಉಪ ಚುನಾವಣೆ ನಂತರ ಕೋಳಿವಾಡ ರಾಜಕೀಯ ನಿವೃತ್ತಿ
ಹಾವೇರಿ, ನವೆಂಬರ್ 15: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಉಪಚುನಾವಣೆ ನಂತರ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ರಾಣೇಬೆನ್ನೂರಿನ ತಮ್ಮ ನಿವಾಸದಲ್ಲಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದಾರೆ. 50 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ಎಲ್ಲ ಏಳು-ಬೀಳುಗಳನ್ನು ಕಂಡಿದ್ದೇನೆ, ಒಮ್ಮೆ ಮಂತ್ರಿಯಾಗಿದ್ದೆ, ಸ್ಪೀಕರ್ ಹುದ್ದೆಯನ್ನೂ ಅಲಂಕರಿಸಿದ್ದೇನೆ ಹಾಗಾಗಿ ರಾಜಕೀಯ ಸಾಕು ಎನಿಸಿದೆ ಎಂದು ಕಾರ್ಯಕರ್ತರ ಬಳಿ ಹೇಳಿಕೊಂಡಿದ್ದಾರೆ.
ರಾಜಕೀಯದಿಂದ ದೂರ ಹೋಗುವ ಮುನ್ನ ಕೊನೆಯದಾಗಿ ಗೆಲುವು ನೋಡಬೇಕು ಎಂದುಕೊಂಡಿದ್ದೇನೆ, ಹೀಗಾಗಿ ಕೊನೆ ಬಾರಿ ಗೆಲುವಿನ ಬೀಳ್ಕೋಡುಗೆ ನೀಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಮುಂದಿನ ಚುನಾವಣೆಯಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ನನ್ನ ಮಗ ಪ್ರಕಾಶ್ ಕೋಳಿವಾಡ ಕಣಕ್ಕಿಳಿಯಲಿದ್ದಾರೆ ಎಂದರು.

2 ವರ್ಷಗಳಿಂದ ಶಾಸಕರಾಗಿದ್ದವರು ಏನು ಮಾಡಿದ್ರು ಅಂತ ನೋಡಿದ್ರಿ, ಕ್ಷೇತ್ರದ ಬಗ್ಗೆ ಕಾಳಜಿ ಇಲ್ಲದ ಯಾವುದೇ ಕೆಲಸ ಮಾಡ್ಲಿಲ್ಲ, ಅವರು ಆಯಾರಾಮ್..! ಗಯಾರಾಮ್ ..! ಆಗಿದ್ದರು. . 50 ವರ್ಷದ ರಾಜಕೀಯದಲ್ಲಿ ಇಂತಹ ಕೆಟ್ಟ ಸನ್ನಿವೇಶ ನೋಡಿರಲಿಲ್ಲ ಎಂದು ಅನರ್ಹ ಶಾಸಕ ಆರ್.ಶಂಕರ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.












Click it and Unblock the Notifications