ಉಪ ಚುನಾವಣಾ ಕಣಕ್ಕೆ ಮಾಜಿ ಸ್ಪೀಕರ್: ಶನಿವಾರ ನಾಮಪತ್ರ ಸಲ್ಲಿಕೆ
ಹಾವೇರಿ, ನವೆಂಬರ್ 14: ಡಿಸೆಂಬರ್ ೦೫ ರಂದು ನಡೆಯಲಿರುವ ರಾಣೇಬೆನ್ನೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಇದೇ ಶನಿವಾರ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಕ್ಷೇತ್ರದ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಸಾಗಿ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ರವರಿಗೆ ನಾಮಪತ್ರ ಸಲ್ಲಿಸುತ್ತಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರ್.ಶಂಕರ್ ಎದುರು ಪರಾಭವಗೊಂಡಿದ್ದ ಕೋಳಿವಾಡರು, ಕಾಂಗ್ರೆಸ್ ಪಕ್ಷದಲ್ಲಿ ಪೈಪೊಟಿ ಇಲ್ಲದ ಕಾರಣ, ಈ ಬಾರಿ ಮತ್ತೆ ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗಿದ್ದ ಆರ್.ಶಂಕರ್ ರನ್ನು ಅನರ್ಹ ಮಾಡಲಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದ್ದರಿಂದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೆಪಿಜೆಪಿ ಅಭ್ಯರ್ಥಿ ಆರ್.ಶಂಕರ್ 63,910 , ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ 59572, ಬಿಜೆಪಿ ಅಭ್ಯರ್ಥಿ ಬಸವರಾಜ ಕೇಲಗಾರ 48,973 ಮತಗಳನ್ನು ಪಡೆದುಕೊಂಡಿದ್ದರು. ಆರ್.ಶಂಕರ್ ರವರು 4338 ಮತಗಳಿಂದ ಕೋಳಿವಾಡರನ್ನು ಪರಾಭವಗೊಳಿಸಿದ್ದರು
ಈ ಉಪಚುನಾವಣೆಯನ್ನು ಬಹಳ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕೋಳಿವಾಡರು, ಕಳೆದ ಬಾರಿಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಮುಂದಾಗಿದ್ದಾರೆ.
ಈಗಾಗಲೇ ಕಾರ್ಯಕರ್ತರ ಸಭೆ ಕರೆದು ಎಲ್ಲರೂ ಒಟ್ಟಾಗಿ ಕೆಲಸ ಮಾಡಿ, ತಮ್ಮ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದ್ದಾರೆ. ಸದ್ಯ ರಾಣೇಬೆನ್ನೂರು ಕ್ಷೇತ್ರದ ಪರಿಸ್ಥಿತಿ ಬದಲಾಗಿದ್ದರಿಂದ 'ಮಾಜಿ ಸ್ಪೀಕರ್' ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
ಶಂಕರ್ ಗೆ ಸಿಗುತ್ತಾ ಬಿಜೆಪಿ ಟಿಕೆಟ್
ಕಳೆದ ಚುನಾವಣೆಯಲ್ಲಿ ಕೆಪಿಜೆಪಿ ಪಕ್ಷದಿಂದ ಗೆದ್ದು ಮಂತ್ರಿಯಾಗಿ ನಂತರ, ಶಾಸಕ ಸದಸ್ಯತ್ವದಿಂದ ಅನರ್ಹಗೊಂಡಿರುವ ಆರ್.ಶಂಕರ್ ಬಿಜೆಪಿ ಟಿಕೆಟ್ ಸಿಗುವ ಭರವಸೆಯಲ್ಲಿದ್ದಾರೆ.
ಪಕ್ಷ ಟಿಕೆಟ್ ಕೊಟ್ಟರೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗೆಲುವಿಗೆ ಶ್ರಮಿಸುತ್ತಾರಾ ಅನ್ನುವುದೇ ಶಂಕರ್ ಗೆ ಚಿಂತೆಯಾಗಿದೆ.












Click it and Unblock the Notifications