ಜಾಬ್ ಕಾರ್ಡ್ ನನ್ನ ಹಕ್ಕು, ಕಾಯಕ ಮಾಡೋಕೆ ನಾವು ಸಿದ್ಧ; ಸ್ತ್ರೀಯರ ಘೋಷಣೆ
ಹಾವೇರಿ, ಜನವರಿ 16: ನರೇಗಾ ಯೋಜನೆಯ ಕಾಮಗಾರಿಯಲ್ಲಿ ಮಹಿಳೆಯ ಭಾಗವಹಿಸುವಿಕೆಯನ್ನು ಕನಿಷ್ಠ 5% ರಷ್ಟು ಹೆಚ್ಚಿಸುವುದು, ತನ್ಮೂಲಕ ಮಹಿಳಾ ಪ್ರಧಾನ ಕುಟುಂಬಗಳ ಆರ್ಥಿಕ ಆದಾಯ ಹೆಚ್ಚಿಸಲು ಮಹಿಳಾ ಕಾಯಕೋತ್ಸವ, ಮಹಿಳಾ ಕಾಯಕಶಕ್ತಿ ಅಭಿಯಾನ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶ ಪ್ರತಿ ಮನೆಯ ಮಹಿಳೆಯರು ಈ ವಿಶೇಷ ಅಭಿಯಾನದಲ್ಲಿ ಪಾಲ್ಗೊಳಬೇಕು ಎಂದು ರಟ್ಟೀಹಳ್ಳಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮೋಹನಕುಮಾರ ಕೆ.ಸಿ ಹಾಗೂ ತಾ.ಪಂ ಸಹಾಯಕ ನಿರ್ದೇಶಕ ನಾಗರಾಜಪ್ಪ ಕೆ.ಬಿ ಕರೆ ನೀಡಿದರು.
ತಾಲೂಕಿನ ಮೇದೂರು, ಚಿಕ್ಕೆಡಚಿ ಗ್ರಾಮದಲ್ಲಿ ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ಚಾಲನೆ ಮಾತನಾಡಿದ ಅವರು, ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸುವುದು, ಸ್ವಸಹಾಯ ಸಂಘಗಳ ಭಾಗವಹಿಸುವಿಕೆಗೆ ಉತೇಜನ ನೀಡಲು ಈ ವಿಶೇಷ ಅಭಿಯಾನವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ ಕೈಗೊಂಡಿದೆ ಎಂದರು.

ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸುವ ಉದ್ದೇಶ
ಪ್ರತಿ ಗ್ರಾಮದಲ್ಲಿ ಸ್ತ್ರೀ ಶಕ್ತಿಯನ್ನು ಹೆಚ್ಚಿಸುವ ದೃಷ್ಠಿಯಿಂದ, ಮಹಿಳಾ ಸಬಲೀಕರಣಕ್ಕಾಗಿ, ಗ್ರಾಮ ಪಂಚಾಯತಿಯ ನರೇಗಾ ಕೆಲಸದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣವನ್ನು ಹೆಚ್ಚುಸುವುದರ ಜೊತೆಗೆ ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸುವ ಉದ್ದೇಶದಿಂದ ಈ ಮಹಿಳಾ ಕಾಯಕೋತ್ಸವ ಎಂಬ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಖಾತೆಗೆ 28,500 ರೂಪಾಯಿ ಜಮಾ
ಈ "ಮಹಿಳಾ ಕಾಯಕ ಶಕ್ತಿ ಅಭಿಯಾನ' ಸಮೀಕ್ಷೆಯಲ್ಲಿ ಪ್ರತಿ ಗ್ರಾಮದ ಮಹಿಳೆಯರು ಪಾಲ್ಗೊಳ್ಳಿ, ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಳ ಬಗ್ಗೆ ತಿಳಿದುಕೊಳ್ಳಿ, ಯೋಜನೆಯಡಿ 100 ದಿನದ ಕೆಲಸ ಮಾಡಿದರೆ, ಸರಕಾರ ನಿಮ್ಮ ಖಾತೆಗೆ 28,500 ರೂಪಾಯಿ ಜಮಾ ಮಾಡುತ್ತದೆ. ಇದ್ದರಿಂದ ನಿಮ್ಮ ಕುಟುಂಬದ ಆರ್ಥಿಕ ಆದಾಯವನ್ನು ಹೆಚ್ಚಿಸಿಕೊಂಡು, ನಿರಂತರ ಆದಾಯವನ್ನು ಕಾಯ್ದುಕೊಳ್ಳಿ ಎಂದು ಹೇಳಿದರು.

ನಾಲ್ಕು ಗ್ರಾಮ ಪಂಚಾಯತಿ ಆಯ್ಕೆ
ಇದೇ ವೇಳೆ ತಾಲೂಕು ಐಇಸಿ ಸಂಯೋಜಕರಾದ ಕುಮಾರಯ್ಯ ಚಿಕ್ಕಮಠ ಮಾತನಾಡಿ, ಹಿರಿಯ ಅಧಿಕಾರಿಗಳಾದ ಜಿಲ್ಲಾ ಪಂಚಾಯತಿ ಸಿಇಒ ಹಾಗೂ ತಾಲೂಕು ಪಂಚಾಯತಿ ಇಒ ಅವರ ಮಾರ್ಗದರ್ಶನದಲ್ಲಿ ಮಹಿಳಾ ಕಾಯಕೋತ್ಸವ ಸಂಭ್ರಮಕ್ಕೆ ಸದ್ಯ ಚಾಲನೆ ಸಿಕ್ಕಿದ್ದು, ಮೊದಲ ಹಂತದಲ್ಲಿ ರಟ್ಟೀಹಳ್ಳಿ ತಾಲೂಕಿನ ಮೇದೂರು, ಚಿಕ್ಕೆಡಜಿ, ಹಿರೇಕಬ್ಬಾರ, ಅಣಜಿ ಈ ನಾಲ್ಕು ಗ್ರಾಮ ಪಂಚಾಯತಿ ಆಯ್ಕೆ ಮಾಡಲಾಗಿದೆ. ಈ ಗ್ರಾಮದಲ್ಲಿ ಮಹಿಳಾ ಕಾಯಕೋತ್ಸವ ಸಮೀಕ್ಷೆ ನಡೆಸಲಾಗುತ್ತಿದ್ದು, ಗ್ರಾಮದ ಮಹಿಳೆಯರೆಲ್ಲರೂ ಈ ಉತ್ಸವದಲ್ಲಿ ಪಾಲ್ಗೊಂಡು, ನರೇಗಾ ಕೆಲಸದಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿದರು.
Recommended Video

ಸಾಮಾಜಿಕವಾಗಿ ನಾವು ಸದೃಢರಾಗುತ್ತೇವೆ
ಈ ಮಹಿಳಾ ಕಾಯಕ ಶಕ್ತಿ ಅಭಿಯಾನದಲ್ಲಿ ಭಾಗವಹಿಸಿದ ಮಹಿಳೆಯರು, ಚಾಬ್ ಕಾರ್ಡ್ ನಮ್ಮ ಹಕ್ಕು, ಅದನ್ನು ನಾವು ಪಡೆದುಕೊಂಡು, ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಯಲ್ಲಿ ಪಾಲ್ಗೊಳ್ಳುತ್ತೇವೆ, ಆ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ನಾವು ಸದೃಢರಾಗುತ್ತೇವೆ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಸಮೀಕ್ಷಾ ಕಾರ್ಯದಲ್ಲಿ ತಾಲೂಕು ತಾಂತ್ರಿಕ ಸಂಯೋಜಕರಾದ ಬಸನಗೌಡ ಎಸ್.ಪಿ ಹಾಗೂ ಚಿಕ್ಕೆಡಚಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗುಡ್ಡಪ್ಪ ಹಾಗೂ ಮೇದೂರು, ಚಿಕ್ಕೆಡಚಿ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.












Click it and Unblock the Notifications