ಹಾವೇರಿ ಮಂದಿಗೆ ಕೊವಿಡ್-19 ಭೀತಿಗಿಂತ ಮಾಂಸದ ಊಟವೇ ಮೇಲು!
ಹಾವೇರಿ, ಜುಲೈ.06: ಕೊರೊನಾವೈರಸ್ ಸೋಂಕು ಹರಡುವಿಕೆಯಿಂದ ಕೊಂಚ ದೂರವಿದ್ದ ಹಾವೇರಿಯಲ್ಲಿ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಷ್ಟಾದರೂ ಜಿಲ್ಲೆಯ ಮಂದಿಗೆ ಅದ್ಯಾಕೋ ಬುದ್ಧಿ ಬಂದಂತೆ ಕಾಣುತ್ತಿಲ್ಲ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದ ಬಫರ್ ಜೋನ್ ನಲ್ಲಿ ಆರೋಗ್ಯಕ್ಕಿಂತ ಮಾಂಸದ ಊಟವೇ ಮುಖ್ಯವಾದಂತೆ ತೋರುತ್ತಿದೆ. ಬಫರ್ ಜೋನ್ ಎಂದು ಗುರುತಿಸಿರುವ ಪ್ರದೇಶದಲ್ಲೇ ಜನರು ಕುರಿ ಕಡಿದು ಮಾಂಸದ ಊಟ ರೆಡಿ ಮಾಡುತ್ತಿದ್ದಾರೆ.
ಹಾವೇರಿಯಲ್ಲಿ ಬಸ್ ನಿಲ್ದಾಣದಲ್ಲೇ ಶವವಿಟ್ಟು ಹೋದ ಆಸ್ಪತ್ರೆ ಸಿಬ್ಬಂದಿ!
ಕೊರೊನಾವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಮಾಸ್ಕ್ ಧರಿಸಬೇಕು ಎಂದು ಬಾರಿ ಬಾರಿ ಹೇಳಿದರು ಇಲ್ಲಿ ಜನರಿಗೆ ಅದರ ಅರಿವೇ ಆಗುತ್ತಿಲ್ಲ. ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಚಿಕ್ಕೇರಿಹೊಸಳ್ಳಿ ಬಫರ್ ಜೋನ್ ಆಗಿ ಘೋಷಣೆ:
ಕಳೆದ ಜೂನ್.24ರಂದು ಹಾನಗಲ್ ತಾಲೂಕಿನ ಚಿಕ್ಕೇರಿಹೊಸಳ್ಳಿ ಗ್ರಾಮದ 34 ವರ್ಷದ ವ್ಯಕ್ತಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಮುನ್ನಚ್ಚರಿಕೆ ಕ್ರಮವಾಗಿ ಗ್ರಾಮವನ್ನು ಬಫರ್ ಜೋನ್ ಎಂದು ಜಿಲ್ಲಾಡಳಿತವು ಘೋಷಣೆ ಮಾಡಿತ್ತು. ಅಲ್ಲದೇ ಕೊರೊನಾವೈರಸ್ ಸೋಂಕಿತ ವ್ಯಕ್ತಿಯು ವಾಸವಾಗಿದ್ದ ಸುತ್ತಮುತ್ತಲಿನ 100 ಮೀಟರ್ ವರೆಗಿನ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಆಗಿ ಜಿಲ್ಲಡಾಳಿತವು ಪರಿವರ್ತಿಸಿತ್ತು.
ಹಾವೇರಿಯಲ್ಲಿ 167 ಮಂದಿಗೆ ಕೊರೊನಾವೈರಸ್:
ಕಳೆದ ಏಪ್ರಿಲ್ ಹಾಗೂ ಮೇ ಅಂತ್ಯದವರೆಗೂ ಕೊರೊನಾವೈರಸ್ ನಿಂದ ಮುಕ್ತವಾಗಿದ್ದ ಜಿಲ್ಲೆಯಲ್ಲಿ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 15 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 167ಕ್ಕೆ ಏರಿಕೆಯಾಗಿದೆ. ಕೊವಿಡ್-19ಗೆ ಜಿಲ್ಲೆಯಲ್ಲಿ ಇದುವರೆಗೂ ಇಬ್ಬರು ಪ್ರಾಣ ಬಿಟ್ಟಿದ್ದಾರೆ.