ಮಂತ್ರಿ ಸ್ಥಾನಕ್ಕೆ ಹೀಗೆ ಒತ್ತಡ ಹೇರಿದರೆ ಹೇಗೆ?: ಯಡಿಯೂರಪ್ಪ ಪ್ರಶ್ನೆ
ಹಾವೇರಿ, ಜನವರಿ 16: ರಾಜೀನಾಮೆ ನೀಡಿ ಬಿಜೆಪಿ ಬಂದು ಗೆದ್ದಿರುವ ಶಾಸಕರಿಗೆ ಮಂತ್ರಿ ಸ್ಥಾನ ನೀಡುವುದು ಹೇಗೆ ಎಂಬ ಚಿಂತೆ ಇರುವಾಗ, ಸ್ವಾಮೀಜಿಗಳು ಸಚಿವ ಸ್ಥಾನದ ನೇಮಕಕ್ಕೆ ಒತ್ತಾಯ ಮಾಡಿದರೆ ಹೇಗೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು.
ಹಾವೇರಿಯ ನರಸೀಪುರದಲ್ಲಿ ಬುಧವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿನ ರಾಜಕೀಯ ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳದೆಯೇ ಎಲ್ಲ ಸಮುದಾಯದವರೂ ತಮ್ಮವರನ್ನು ಮಂತ್ರಿ ಮಾಡಿ ಎಂದು ಒತ್ತಡ ಹೇರಿದರೆ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಾಗುತ್ತದೆ' ಎಂದು ಹೇಳಿದರು.

'17 ಶಾಸಕರು ರಾಜೀನಾಮೆ ನೀಡಿ ಆರು ತಿಂಗಳು ವನವಾಸ ಅನುಭವಿಸಿದರು. ಅವರಿಂದಾಗಿ ನಾನು ಮುಖ್ಯಮಂತ್ರಿಯಾಗಿದ್ದೇನೆ. ಅವರಿಗೆ ಸಚಿವ ಸ್ಥಾನ ನೀಡುವ ಜವಾಬ್ದಾರಿ ನನ್ನ ಮೇಲಿದೆ. ಅವರೆಲ್ಲರನ್ನೂ ಮಂತ್ರಿ ಮಾಡುವುದು ಹೇಗೆ ಎನ್ನುವುದು ನನ್ನ ಚಿಂತೆ. ಈ ಸಂದರ್ಭದಲ್ಲಿ ಸ್ವಾಮೀಜಿಗಳು ಸಲಹೆ ಕೊಡಬೇಕು. ಅದನ್ನು ಬಿಟ್ಟು ಆಗ್ರಹಿಸಿದರೆ ಹೇಗೆ? ಮಂತ್ರಿ ಮಾಡುವಂತೆ ಒತ್ತಾಯಿಸಿದರೆ ಹೇಗೆ?' ಎಂದರು.
ಈ ವಿಚಾರವಾಗಿ ನೊಂದುಕೊಂಡ ನಿಡುಮಾಮಿಡಿ ಮತ್ತು ದಿಂಗಾಲೇಶ್ವರ ಸ್ವಾಮೀಜಿ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲವನ್ನೂ ಎದುರಿಸುವುದು ಅನಿವಾರ್ಯವಾಗಿದೆ. ರಾಜ್ಯದ ವಾಸ್ತವದ ಸ್ಥಿತಿ ಅರಿಯದೆ ಮಾತನಾಡಿರುವುದರಿಂದ ಗೊಂದಲ ಆಗಿರುವುದು ಸತ್ಯ. ಯಾವುದೇ ಸಮುದಾಯಕ್ಕೆ ನೋವಾಗದ ರೀತಿ ಮುಂದಿನ ಮೂರು ವರ್ಷ ಅಭಿವೃದ್ಧಿಪರ ಕೆಲಸ ಮಾಡುತ್ತೇನೆ ಎಂದು ಹೇಳಿದರು.












Click it and Unblock the Notifications