ಬ್ಯಾಡಗಿಯಲ್ಲಿ ಸಾಲ ಕೊಡಲು ನಿರಾಕರಿಸಿದ ಬ್ಯಾಂಕ್ಗೆ ಬೆಂಕಿ ಹಚ್ಚಿದ ಭೂಪ ಅಂದರ್!
ಹಾವೇರಿ, ಜನವರಿ 11: ಬ್ಯಾಂಕ್ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ವೈಯಕ್ತಿಕ ಸಾಲ, ಕೃಷಿ ಸಾಲ, ಬೆಳೆ ಸಾಲ, ಗೃಹ ಸಾಲ, ವ್ಯಾಪಾರಕ್ಕಾಗಿ ಸಾಲ ಸೇರಿದಂತೆ ಹಲವು ವಿಷಯಗಳಿಗಾಗಿ ಗ್ರಾಹಕರು ಸಾಲ ಪಡೆಯುತ್ತಾರೆ. ಅದೇ ರೀತಿ ಸಾಲಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾರೆ. ಈ ಕಥೆಯಲ್ಲಿರುವ ಟ್ವಿಸ್ಟ್ ಹಾಗಿದೆ.
ಬ್ಯಾಂಕ್ ಅಧಿಕಾರಿಗಳು ಸಾಲ ನೀಡುವುದಕ್ಕೆ ನಿರಾಕರಿಸಿದರು ಎಂದ ಮಾತ್ರಕ್ಕೆ ವ್ಯಕ್ತಿಯೊಬ್ಬ ಇಡೀ ಬ್ಯಾಂಕಿನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಹೆಡಿಗೊಂಡ ಗ್ರಾಮದಲ್ಲಿ ವರದಿಯಾಗಿದೆ.
ಹಾವೇರಿ: ಕೆಪಿಎಸ್ಸಿ ಪರೀಕ್ಷಾ ಅಭ್ಯರ್ಥಿಯ ಮಗುವನ್ನು ಆರೈಕೆ ಮಾಡಿದ ಮಹಿಳಾ ಪೇದೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಟ್ಟಿಹಳ್ಳಿ ಗ್ರಾಮದ ನಿವಾಸಿ ವಾಸೀಮ್ ಅಕ್ರಂ ಮುಲ್ಲಾ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಬ್ಯಾಂಕ್ ರಜೆಯಿದ್ದ ಸಮಯದಲ್ಲಿ ಬ್ಯಾಂಕ್ಗೆ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದ ಆರೋಪಿಯು ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಬ್ಯಾಂಕ್ ದಾಖಲೆ ನಾಶಪಡಿಸುವ ಹುನ್ನಾರ:
ಬ್ಯಾಂಕ್ ಅಧಿಕಾರಿಗಳು ಸಾಲ ನೀಡುವುದಕ್ಕೆ ನಿರಾಕರಿಸಿದರು ಎಂಬ ಕಾರಣಕ್ಕೆ ಬ್ಯಾಂಕ್ಗೆ ಬೆಂಕಿ ಹಚ್ಚಲು ಮುಂದಾಗಿರುವ ಬಗ್ಗೆ ಆರೋಪಿ ವಾಸೀಂ ಅಕ್ರಂ ಮುಲ್ಲಾ ಹೇಳಿಕೆ ನೀಡಿದ್ದಾರೆ. ಆದರೆ ಈ ಕಥೆಯಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬ್ಯಾಂಕ್ಗೆ ಬೆಂಕಿ ಹಚ್ಚುವಲ್ಲಿ ಕೆಲವು ಬ್ಯಾಂಕ್ ಸಿಬ್ಬಂದಿಯ ಪಾತ್ರವಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಬ್ಯಾಂಕ್ ದಾಖಲೆಗಳನ್ನು ನಾಶಪಡಿಸುವ ಉದ್ದೇಶದಿಂದ ಇದು ಯೋಜಿತ ಕೃತ್ಯ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
ಬ್ಯಾಂಕ್ ಕಂಪ್ಯೂಟರ್, ಸಿಸಿಟಿವಿ ಕ್ಯಾಮೆರಾ ಭಸ್ಮ:
ಬೈಕ್ನಲ್ಲಿ ಬಂದ ಆರೋಪಿಗಳು ಬೆಂಕಿ ಹಚ್ಚುವ ಮುನ್ನ ಬ್ಯಾಂಕ್ನ ಕಿಟಕಿ ಗಾಜುಗಳನ್ನು ಒಡೆದು ಪೆಟ್ರೋಲ್ ಸುರಿದಿದ್ದನು. ಈ ಘಟನೆಯಲ್ಲಿ ಬ್ಯಾಂಕ್ನಲ್ಲಿದ್ದ ಕಂಪ್ಯೂಟರ್ಗಳು, ಸಿಸಿಟಿವಿ ಕ್ಯಾಮೆರಾಗಳು, ದಾಖಲೆಗಳು ಮತ್ತು ಪೀಠೋಪಕರಣಗಳು ಸುಟ್ಟು ಬೂದಿಯಾಗಿವೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಆರೋಪಿ:
ಬ್ಯಾಂಕ್ನಿಂದ ಹೊಗೆ ಬರುತ್ತಿರುವುದನ್ನು ಕಂಡ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಈ ವೇಳೆ ಆರೋಪಿ ವಾಸೀಂ ಅಕ್ರಂ ಮುಲ್ಲಾ ಓಡಿ ಹೋಗುವುದನ್ನು ಸ್ಥಳೀಯರು ಗಮನಿಸಿದ್ದು, ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆರೋಪಿ ಚಾಕು ತೋರಿಸಿ ಸ್ಥಳೀಯರನ್ನು ಬೆದರಿಸಲು ಮುಂದಾಗಿದ್ದಾನೆ. ನಂತರದಲ್ಲಿ ಗ್ರಾಮಸ್ಥರು ಒಟ್ಟುಗೂಡಿ ಆರೋಪಿಯನ್ನು ಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.