ಹಾವೇರಿ: ಹಣಕ್ಕಾಗಿ ಬರ್ಬರವಾಗಿ ಚಿರತೆ ಕೊಂದಿದ್ದ ಹಂತಕರ ಸೆರೆ
ಹಾವೇರಿ, ಅಕ್ಟೋಬರ್ 23: ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಬಳಿ ದುಡ್ಡಿನ ಆಸೆಗಾಗಿ, 6 ವರ್ಷದ ಗಂಡು ಚಿರತೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಚಿರತೆ ಹಂತಕರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ರಂಗಪ್ಪ ಭೂಸಿ (45), ದುರಗಪ್ಪ(42) ಮತ್ತು ಮಂಜು(40)ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಬರಗೊಪ್ಪ ಗ್ರಾಮದವರು ಎಂದು ಗುರುತಿಸಲಾಗಿದೆ.
ಬಂಧಿತರಿಂದ ಚಿರತೆಯ ಮೂರು ಹಲ್ಲುಗಳು ಮತ್ತು ಹದಿನೆಂಟು ಉಗುರುಗಳು ಹಾಗೂ ನಾಡ ಬಂದೂಕು ವಶ ಪಡಿಸಿಕೊಳ್ಳಲಾಗಿದೆ. ಕಳೆದ ಅಕ್ಟೋಬರ್ 6ರಂದು ಕಾಟೇನಹಳ್ಳಿ ಗ್ರಾಮದ ಬಳಿಯ ಅರಣ್ಯದಲ್ಲಿ ಚಿರತೆಯ ತಲೆ, ಕಾಲು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದರು.

ಈ ಘಟನೆ ನಡೆದಾಗಿನಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಿದ್ದು, ಇಂದು ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಬಳಿಯ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಓಡಾಡುತಿದ್ದ ಈ ಬೇಟೆಗಾರರನ್ನು ತಡೆದು ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.












Click it and Unblock the Notifications