ಗುಡ್ಡ ಕುಸಿತ ದುರಸ್ತಿ ಕಾರ್ಯ ಪೂರ್ಣ: ಹಾಸನ-ಮಂಗಳೂರು ಶೀಘ್ರವೇ ರೈಲು ಸಂಚಾರ
ಹಾಸನ, ಆಗಸ್ಟ್ 05: ಬೆಂಗಳೂರು-ಮಂಗಳೂರು ನಡುವೆ ರೈಲಿನಲ್ಲಿ ಸಂಚಾರ ನಡೆಸುವ ಜನರಿಗೆ ಸಿಹಿಸುದ್ದಿ. ಹಾಸನ ಜಿಲ್ಲೆಯ ಯಡಕುಮರಿ-ಕಡಗರವಳ್ಳಿ ನಡುವೆ ರೈಲ್ವೆ ಹಳಿಯ ಕೆಳಗೆ ಗುಡ್ಡ ಕುಸಿದು ರೈಲು ಸಂಚಾರ ಸ್ಥಗಿತವಾಗಿತ್ತು. ಈಗ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ರೈಲಿನ ಪ್ರಾಯೋಗಿಕ ಸಂಚಾರವೂ ಯಶಸ್ವಿಯಾಗಿದೆ. ಕರ್ನಾಟಕದ ಕರಾವಳಿಗೆ ಶೀಘ್ರವೇ ರೈಲು ಸಂಪರ್ಕ ಮತ್ತೆ ಆರಂಭವಾಗಲಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಡಕಮುರಿ-ಕಡಗರವಳ್ಳಿ ನಡುವೆ ದೋಣಿಹಗಲ್ನಲ್ಲಿ ಭಾರೀ ಮಳೆಯ ಕಾರಣ ರೈಲ್ವೆ ಹಳಿಯ ಮೇಲೆ ಗುಡ್ಡ ಕುಸಿತವಾಗಿತ್ತು. ಹಳಿಯ ಕೆಳಗೆ ಸಹ ಮಣ್ಣು ಕುಸಿದು, ಹಾಸನ-ಮಂಗಳೂರು ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಈ ಪ್ರದೇಶ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರುತ್ತದೆ. ರೈಲ್ವೆ ಹಳಿಯ ಮೇಲೆ ಕುಸಿದಿದ್ದ ಮಣ್ಣು ತೆರವುಗೊಳಿಸಿ, ರೈಲು ಮಾರ್ಗದ ದುರಸ್ತಿ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಮಾರ್ಗದಲ್ಲಿ ರೈಲು ಓಡಿಸಿ, ಪ್ರಾಯೋಗಿಕ ಸಂಚಾರವನ್ನು ಸಹ ನಡೆಸಲಾಗಿದೆ. ಕೆಲವು ಸಣ್ಣ ದುರಸ್ತಿ ಕೆಲಸಗಳು ಮಾತ್ರ ಬಾಕಿ ಇದೆ.
ಶೀಘ್ರವೇ ರೈಲು ಸಂಚಾರ: ಸುಮಾರು 11 ದಿನಗಳ ಕಾಲ ರೈಲ್ವೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಇಲಾಖೆಗಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. 400ಕ್ಕೂ ಹೆಚ್ಚು ಕಾರ್ಮಿಕರು ಹಗಲು, ರಾತ್ರಿ ಸುರಿಯುವ ಮಳೆಯಲ್ಲಿಯೇ ಕಾರ್ಯ ನಿರ್ವಹಣೆ ಮಾಡಿ, ಹಳಿಯನ್ನು ದುರಸ್ತಿ ಮಾಡಿದ್ದಾರೆ.
ಮಣ್ಣು ತೆರವು ಮಾಡಿ, ಹಳಿ ಮರುಸ್ಥಾಪಿಸಲಾಗಿದ್ದು, ಹಳಿಯ ಮೇಲೆ ಪ್ರಾಯೋಗಿಕವಾಗಿ ಗೂಡ್ಸ್ ರೈಲು ಸಂಚಾರವನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಮಣ್ಣು ಕುಸಿದ ಪರಿಣಾಮ ಜುಲೈ 26ರಿಂದ ಹಾಸನ-ಬೆಂಗಳೂರು ರೈಲು ಮಾರ್ಗದಲ್ಲಿ ಎಲ್ಲಾ ರೈಲುಗಳ ಸಂಚಾರ ಸ್ಥಗಿತವಾಗಿತ್ತು.
ಈಗ ದುರಸ್ತಿ ಕಾರ್ಯ ಪೂರ್ಣಗೊಂಡ ಹಿನ್ನಲೆಯಲ್ಲಿ ಹಾಸನ-ಸುಬ್ರಮಣ್ಯ-ಮಂಗಳೂರು ಮಾರ್ಗದಲ್ಲಿ ಗೂಡ್ಸ್ ರೈಲುಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಪ್ರಯಾಣಿಕರ ರೈಲುಗಳ ರೈಲುಗಳ ಸಂಚಾರವನ್ನು ಸಹ ಆರಂಭಿಸಲಾಗುತ್ತದೆ.
ಯಡಕಮುರಿ-ಕಡಗರವಳ್ಳಿ ನಿಲ್ದಾಣಗಳ ನಡುವೆ ರೈಲು ಹಳಿಯ ಕೆಳಭಾಗದಲ್ಲಿ ಸುಮಾರು 500 ಮೀಟರ್ ಆಳಕ್ಕೆ ಮಣ್ಣು ಕುಸಿದಿತ್ತು. ಆದ್ದರಿಂದ ಕಲ್ಲಿನ ಗೋಡೆಯನ್ನು ನಿರ್ಮಾಣ ಮಾಡಿ, ಮತ್ತೆ ಮಣ್ಣು ಕುಸಿದು, ಹಳಿಗೆ ಹಾನಿಯಾಗದಂತೆ ವ್ಯವಸ್ಥೆ ಮಾಡಲಾಗಿದೆ.
ಭೂ ಕುಸಿತವಾದ ಪ್ರದೇಶ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ. ಆದ್ದರಿಂದ ಇಲ್ಲಿಗೆ ಬೇರೆ ವಾಹನ ಬರಲು ಸಾಧ್ಯವಿಲ್ಲ. ಗೂಡ್ಸ್ ರೈಲಿನ ಮೂಲಕ ಕಲ್ಲು, ಜೆಸಿಬಿ, ಹಿಟಾಚಿಗಳನ್ನು ಸ್ಥಳಕ್ಕೆ ತೆಗೆದುಕೊಂಡು ಬಂದು ದುರಸ್ತಿ ಕಾರ್ಯವನ್ನು ಮಾಡಲಾಗಿದೆ. ಸುರಿಯುವ ಮಳೆಯ ನಡುವೆಯೇ ಕಾರ್ಮಿಕರು ಕೆಲಸ ಮಾಡಿದ್ದಾರೆ.
ದುರಸ್ತಿ ಕಾರ್ಯಕ್ಕೆ ಸುಮಾರು 5 ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ದುರಸ್ತಿ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಈ ಭೂ ಕುಸಿತದ ಕಾರಣ ಹಾಸನ-ಮಂಗಳೂರು ನಡುವೆ ಸಂಚಾರ ನಡೆಸುವ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗಿತ್ತು.












Click it and Unblock the Notifications