ಹಾಸನ ಜಿಲ್ಲೆಯಲ್ಲಿ ಮುಂದುವರೆದ ಕಾಡಾನೆ ದಾಳಿ: ಕಾಫಿ, ಮೆಣಸು, ಭತ್ತ ಬೆಳೆ ನಾಶ
ಹಾಸನ, ಆಗಸ್ಟ್, 16: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳು ದಾಳಿ ಮುಂದುವರೆಸಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿವೆ. ಕಾಫಿ, ಮೆಣಸು, ಭತ್ತ ಸೇರಿದಂತೆ ಹತ್ತಾರು ಬೆಳೆಗಳು ಕಾಡಾನೆಗಳ ಹಾವಳಿಯಿಂದ ನಾಶವಾಗುತ್ತಿವೆ.
ಮಲೆನಾಡು ಭಾಗದಲ್ಲಿ ನಿತ್ಯವೂ ಕಾಡಾನೆಗಳು ಹಿಂಡು ಹಿಂಡಾಗಿ ಓಡಾಡುತ್ತಿದ್ದು, ಜನರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕಾಡಾನೆಗಳು ದಾಳಿ ಮುಂದುವರೆಸಿವೆ ಎಂದು ಅಲ್ಲಿನ ಸ್ಥಳೀಯರ ಆರೋಪವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಬೇಲೂರು ತಾಲೂಕಿನ ನಾರ್ವೇಪೇಟೆ ಗ್ರಾಮಪಂಚಾಯತಿಯಲ್ಲಿ ಕೂಡಿಹಾಕಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಅಧಿಕಾರಿಗಳು ಬರೋವವರೆಗೂ ಅವರನ್ನು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಕುಳಿತಿದ್ದರು.
ಅರಣ್ಯ ಇಲಾಖೆ ವಿರುದ್ಧ ಜನರ ಆರೋಪ ಏನು?
ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಹಾಗೂ ಆಲೂರು ತಾಲೂಕಿನಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದೆ. ಕಳೆದ ಒಂದು ವಾರದಿಂದ ಬೇಲೂರು ತಾಲೂಕಿನ ಸುಲಗಳಲೆ ನಾರ್ವೇಪೇಟೆ ಹಾಗೂ ಸಕಲೇಶಪುರ ತಾಲೂಕಿನ ಬೈಕೆರೆ ಗ್ರಾಮದ ಸುತ್ತಮುತ್ತ ದಾಳಿ ಮಾಡುತ್ತಲೇ ಇವೆ. ಗಿಡ್ಡಪ್ಪ, ಚಂದ್ರೇಗೌಡ, ಮಲ್ಲೇಶ್, ದೇವರಾಜ್, ಜಗದೀಶ್, ಕೆಂಚೇಗೌಡ, ರಾಮಚಂದ್ರ ಸೇರಿದಂತೆ ಹಲವು ರೈತರ ಬೆಳೆಗಳನ್ನು ಆನೆಗಳು ಸಂಪೂರ್ಣ ನಾಶ ಮಾಡಿವೆ. ಕಾಫಿ, ಭತ್ತ, ತೆಂಗು, ಮೆಣಸು, ಅಡಿಕೆ ಸೇರಿದಂತೆ ಹತ್ತಾರು ಬೆಳೆಗಳನ್ನ ತುಳಿದು ನಾಶ ಮಾಡಿದೆ ಎಂದು ಸ್ಥಳಿಯರು ಆರೋಪಿಸುತ್ತಿದ್ದಾರೆ.

ಕಾಡಾನೆಗಳ ದಾಳಿ ಆತಂಕದಲ್ಲಿ ಜನರು
ಗ್ರಾಮದ ಸುತ್ತಮುತ್ತ 20ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ಜನರು ನಿತ್ಯವೂ ಭಯದಿಂದ ಓಡಾಡುವ ಸನ್ನಿವೇಶ ಎದುರಾಗಿದೆ. ಮಕ್ಕಳನ್ನು ಆತಂಕದಿಂದಲೇ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಎಷ್ಟೇ ಒತ್ತಾಯ ಮಾಡಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಲಾಖೆ ಸಿಬ್ಬಂದಿ ಗ್ರಾಮ ಪಂಚಾಯತಿಯಲ್ಲಿ ಲಾಕ್
ಕಾಡಾನೆಗಳನ್ನು ಓಡಿಸುವುದಕ್ಕೆ ಎಂದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಹಾಗೂ ಗ್ರಾಮಪಂಚಾಯತಿ ಪಿಡಿಓ ಅವರನ್ನ ಬೇಲೂರು ತಾಲೂಕಿನ ನಾರ್ವೇಪೇಟೆ ಗ್ರಾಮಪಂಚಾಯತಿ ಕಚೇರಿಯಲ್ಲಿ ಕೂಡಿ ಹಾಕಿದ್ದರು. ಗ್ರಾಮಪಂಚಾಯತಿಯ ಮುಂಭಾಗ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕಳೆದು ಒಂದು ವಾರದಿಂದ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ನಮ್ಮ ಬೆಳೆಗಳನ್ನು ಸಂಪೂರ್ಣ ಹಾಳು ಮಾಡಿವೆ. ಸ್ಥಳಕ್ಕೆ ಮೇಲಾಧಿಕಾರಿಗಳು ಬರುವವರೆಗೂ ನಾವು ಸಿಬ್ಬಂದಿಗಳನ್ನು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಪಂಚಾಯತಿ ಸದಸ್ಯ ಚಿದಾನಂದ್ ಮಾತಾನಾಡಿ, "ನಮ್ಮ ಗ್ರಾಮದ ಸುತ್ತಮುತ್ತ 50ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಹಿರಿಯರ ಕಾಲದಿಂದಲೂ ನಾವು ಇಲ್ಲಿ ಜೀವನ ನಡೆಸುತ್ತಿದ್ದೇವೆ. ನಮ್ಮ ಭಾಗದ ನೂರಾರು ಎಕರೆಯಲ್ಲಿ ಬೆಳೆದ ಬೆಳೆಗಳನ್ನೆಲ್ಲ ಆನೆಗಳು ಸಂಪೂರ್ಣವಾಗಿ ಹಾಳು ಮಾಡುತ್ತಿವೆ. 40 ವರ್ಷದಿಂದ ನಮ್ಮ ಮಕ್ಕಳ ಹಾಗೆ ಕಾಫಿ ಗಿಡಗಳನ್ನು ಬೆಳೆಸಿದ್ದೆವು. ಇದೀಗ ಕಾಡಾನೆಗಳು ಬಂದು ಸಂಪೂರ್ಣ ನೆಲಸಮ ಮಾಡಿವೆ. ಅರಣ್ಯ ಇಲಾಖೆಯವರೂ ಅದಕ್ಕೆ ತಕ್ಕ ಪರಿಹಾರ ಕೊಡುವುದಿಲ್ಲ. ಬರೀ 5ರಿಂದ 10 ಸಾವಿರ ಭಿಕ್ಷೆ ಕೊಟ್ಟಹಾಗೆ ಕೊಡುತ್ತಾರೆ," ಎಂದು ಆಕ್ರೋಶ ಹೊರಹಾಕಿದರು.
ಜಿಲ್ಲೆಯಲ್ಲಿ ಕಾಡಾನೆ ಹಾಗೂ ಮನುಷ್ಯನ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಹಲವು ದಶಕಗಳಿಂದ ಶಾಶ್ವತ ಪರಿಹಾರ ಕೊಡಿ ಎಂದು ನೂರಾರು ಹೋರಾಟಗಳು ನಡೆದಿವೆ. ಸರ್ಕಾರಗಳು ಹಾಗೂ ಅಧಿಕಾರಿಗಳು ಪರಿಹಾರ ನೀಡುವಲ್ಲಿ ವಿಫಲವಾಗುತ್ತಲೇ ಬಂದಿದ್ದಾರೆ. ಇದಕ್ಕೊಂದು ಶಾಶ್ವತವಾದ ಪರಿಹಾರವೂ ಸಿಗುತ್ತಿಲ್ಲ ಎಂದು ಜನರು ಅಸಮಾಧಾನ ಹೊರಹಾಕಿದರು.












Click it and Unblock the Notifications