ವೈರಲ್ ವಿಡಿಯೋ: ನೆರೆ ಸಂತ್ರಸ್ತರಿಗೆ ಬಿಸ್ಕೇಟ್ ಎಸೆದ ರೇವಣ್ಣ!
Recommended Video

ಹಾಸನ, ಆಗಸ್ಟ್ 20: ನೆರೆಗೆ ಸಿಕ್ಕಿ ನಲುಗುತ್ತಿರುವ ಸಂತ್ರಸ್ತರಿಗೆ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಬಿಸ್ಕೇಟ್ ಎಸೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ನೂರಾರು ಜನ ಪ್ರವಾಹ ಸಂತ್ರಸ್ತರು ನೆರೆ ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ, ಸಾಂತ್ವನ ನೀಡಿ, ಧೈರ್ಯ ನೀಡುವುದಕ್ಕೆಂದು ತೆರಳಿದ್ದ ರೇವಣ್ಣ, ಅವರಿಗೆ ಬಿಸ್ಕೇಟ್ ಗಳನ್ನು ನೀಡುವ ಬದಲು ಎಸೆದ ಘಟನೆ ನಡೆದಿದೆ.
"ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ದುರಹಂಕಾರ ನೋಡಿ" ಎಂದು ಟ್ವಿಟ್ಟರ್ ನಲ್ಲಿ ಹಲವರು ಈ ವಿಡಿಯೋವನ್ನು ಶೇರ್ ಮಾಡಿ, ರೇವಣ್ಣ ಅವರ ನಡೆಯನ್ನು ಖಂಡಿಸುತ್ತಿದ್ದಾರೆ.
ಕರ್ನಾಟಕದ ಕೊಡಗು, ಹಾಸನ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದ್ದು ಸಾವಿರಾರು ಜನರು ನೆರೆ ಸಂತ್ರಸ್ತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳು, ಹಣ ಸಹಾಯ ಹರಿದುಬರುತ್ತಿದೆ.
ಭಿಕ್ಷುಕರಿಗಾದ್ರೂ ಕರೆದು ಊಟ ಹಾಕ್ತೀವಿ!
"ಭಿಕ್ಷುಕರಿಗಾದ್ರೂ ಹತ್ರ ಕರ್ದು ಮರ್ಯಾದೆಯಿಂದ ಊಟ ಹಾಕ್ತೀವಿ, ಆದ್ರೆ ಈ ಮಂತ್ರಿ ಅನ್ನಿಸ್ಕೊಂಡವನು ಮಾತ್ರ ನೆರವು ಕೊಡ್ತಿರೋ ರೀತಿ ನೋಡಿದ್ರೆ, ನೆರೆ ಸಂತ್ರಸ್ತರ ಬಗ್ಗೆ ಸರ್ಕಾರ ನಡ್ಕೊಂಡ ರೀತಿ ಮತ್ತು ಸಮಸ್ಯೆಗಳ ಬಗ್ಗೆ ತಾವು ಅದೆಷ್ಟು ಗಂಭೀರವಾಗಿ ಇದ್ದೀವಿ ಅನ್ನೋದು ಗೊತ್ತಾಗತ್ತೆ. ಸಿಎಂ ಸಾಹೇಬ್ರೆ ಸರ್ಕಾರಕ್ಕೆ ಪರಿಹಾರ ಕೊಡೋದು ಅಷ್ಟು ಕಷ್ಟ ಆಗಿದ್ರೆ ಆ ಕೆಲಸವನ್ನ ಸಾರ್ವಜನಿಕರಿಗೆ ಮಾಡೋಕೆ ಬಿಡಿ. ಮಾನಿವೀಯತೆ ಇಲ್ಲದೆ ಇರೋ ನಿಮ್ಮ ಅಣ್ಣನನ್ನ ಅಲ್ಲಿ ಕಳುಹಿಸಿ ಸಂತ್ರಸ್ತರ ಗೇಲಿ ಮಾಡಬೇಡಿ" ಎಂದು ನರೇಂದ್ರ ಮೋದಿ ಫ್ಯಾನ್ಸ್ ಕರ್ನಾತಕ ಎಂಬ ಪೇಜ್ ನಲ್ಲಿ ರೇವಣ್ಣ ಅವರ ನಡೆಯನ್ನು ಖಂಡಿಸಲಾಗಿದೆ.
|
ಎಂಥ ದುರಹಂಕಾರ!
ನಾವು ಕರ್ನಾಟಕದ ಜನರು ನೆರೆ ಸಂತ್ರಸ್ತರಿಗೆ ನೆರವು ನೀಡಲು ಒಗ್ಗಟ್ಟಿನಿಂದ ನಿಂತಿದ್ದೇವೆ. ಆದರೆ ಹಾಸನದ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಡಿ ರೇವಣ್ಣ ಅವರು ಬಿಸ್ಕೇಟ್ ಪೊಟ್ಟಣಗಳನ್ನು ಎಸೆಯುತ್ತಿರುವುದನ್ನು ನೋಡಿದರೆ ಎಂಥ ದುರಹಂಕಾರ ಎನ್ನುವುದು ತಿಳಿಯುತ್ತದೆ. ಮೊದಲು ಇವರಿಗೆ ಮಾನವೀಯ ಭಾವನೆಗಳನ್ನು ಅರ್ಥಮಾಡಿಸಿ ಎಂದಿದ್ದಾರೆ ಬಾಲಾಜಿ ಶ್ರೀನಿವಾಸ್.
|
ಅವರಿಗೆ ಫೋಟೋ ಬೇಕಷ್ಟೆ!
ಮುಖ್ಯಮಂತ್ರಿಗಳ ಸಹೋದರ, ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ನೆರೆ ಸಂತ್ರಸ್ತರಿಗೆ ಬಿಸ್ಕೇಟ್ ಎಸೆಯುತ್ತಿರುವ ವಿಡಿಯೋ ನೋಡಿದರೆ, ಇಂಥ ಪರಿಹಾರ ಕಾರ್ಯಗಳಿಂದ ರಾಜಕಾರಣಿಗಳನ್ನು ಏಕೆ ದೂರವಿಡಬೇಕು ಎಂಬುದು ಅರ್ಥವಾಗುತ್ತದೆ. ಅವರಿಗೆಲ್ಲ ಬೇಕಾಗಿರುವುದು ಫೋಟೊ ಅಷ್ಟೆ ಎಂದಿದ್ದಾರೆ ಹರೀಶ್ ಉಪಾಧ್ಯಾಯ.
|
ಸೂಕ್ಷ್ಮಮತಿ ಇಲ್ಲದ ಜನರು!
ಪ್ರವಾಹದ ವೈಮಾನಿಕ ಸಮೀಕ್ಷೆ ಮಾಡುವಾಗ ಎಚ್ ಡಿ ಕುಮಾರಸ್ವಾಮಿ ಪೇಪರ್ ಓದುತ್ತಿದ್ದರು! ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಾಗ ಅವರ ಸಹೋದರ ಬಿಸ್ಕೇಟ್ ಎಸೆಯುತ್ತಿದ್ದರು. ಅಧಿಕಾರದ ದರ್ಪದಲ್ಲಿರುವ ಸೂಕ್ಷ್ಮಮತಿಯಿಲ್ಲದ ಜನರು ಇವರು ಎಂದಿದ್ದಾರೆ ಪ್ರಕಾಶ್ ಎಸ್.












Click it and Unblock the Notifications