ಬೀದಿ ನಾಯಿಗಳ ಹಾವಳಿ; ರೇವಣ್ಣ ಕೊಟ್ಟ ಸಲಹೆ ನೋಡಿ!
ಹಾಸನ, ಜನವರಿ 20; "ಹಾಸನದ ಕೆಲವು ಕಡೆ ಬೀದಿ ನಾಯಿಗಳ ಕಾಟ ಜಾಸ್ತಿ ಆಗುತ್ತಿದೆ. ಮೋಟಾರ್ ಸೈಕಲ್ಗೆ ಸಿಲುಕಿ ಅಪಘಾತ ಉಂಟಾಗಿ ಸಮಸ್ಯೆ ಆಗುತ್ತಿದೆ. ಅದನ್ನು ಸಾಯಿಸಬೇಕು ಎಂದು ನಾನು ಹೇಳುತ್ತಿಲ್ಲ. ಅದನ್ನು ಕಾಡಿಗೆ ಅಥವಾ ಹಳ್ಳಿಗಳ ಕಡೆ ಬಿಟ್ಟು ಬಿಡಿ" ಎಂದು ಜೆಡಿಎಸ್ ನಾಯಕ, ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.
"ನಗರ ಪ್ರದೇಶದಲ್ಲಿ ಮುಖ್ಯವಾಗಿ ನಾಯಿಗಳಿಂದ ಸಮಸ್ಯೆ ಆಗುತ್ತಿದೆ. ಹಲವರು ಬಿದ್ದು ಗಾಯ, ತೊಂದರೆ ಆಗುತ್ತಿದೆ. ಮುಖ್ಯವಾಗಿ ಸಿಟಿ ಕಡೆಗಳಲ್ಲಿ ಇರುವ ನಾಯಿಗಳನ್ನು ಹಳ್ಳಿ ಕಡೆಗೆ ಬಿಡಬಹುದು. ಮುಖ್ಯ ರಸ್ತೆಗಳಲ್ಲಿ ಇರುವ ನಾಯಿಗಳಿಂದ ಸಮಸ್ಯೆ ಆಗಬಾರದು ಅಷ್ಟೇ" ಎಂದು ರೇವಣ್ಣ ತಿಳಿಸಿದ್ದಾರೆ.
"ನಗರ ಪ್ರದೇಶಗಳಲ್ಲಿ ನಾಯಿಗಳ ಸಮಸ್ಯೆ ಹಲವು ಕಡೆ ಇರುತ್ತದೆ. ಕೆಲವೆಡೆ ಜನರಿಗೆ, ಮಕ್ಕಳಿಗೆ ಕಚ್ಚಿ, ಅಟ್ಟಾಡಿಸಿ ಸಮಸ್ಯೆ ಮಾಡುತ್ತವೆ. ವಾಹನಗಳಿಗೆ ಅಡ್ಡ ಬಂದು ಅಪಘಾತಗಳಿಗೂ ಕಾರಣ ಆಗುತ್ತದೆ. ಬೀದಿನಾಯಿಗಳ ಸಮಸ್ಯೆಗೆ ಈ ಮೊದಲು ಕೂಡ ಹಲವು ಪರಿಹಾರಗಳನ್ನು ವಿವಿಧ ಕಡೆ ಕೈಗೊಂಡ ಉದಾಹರಣೆಗಳಿವೆ" ಎಂದು ರೇವಣ್ಣ ವಿವರಿಸಿದ್ದಾರೆ.

ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ; "ನೀರಾವರಿ ಇಲಾಖೆಯಲ್ಲಿ ಹಣ ಇಲ್ಲವೆಂದು ಹೇಳುತ್ತಾರೆ. ಮತ್ತೊಂದೆಡೆ ಕೆಲವರಿಗೆ 200 ರಿಂದ 300 ಕೋಟಿ ರೂಪಾಯಿ ಕೊಡುತ್ತಾರೆ. ಎಲ್ಲಾ ಬೆಳವಣಿಗೆಗಳನ್ನು ನಾನು ಕೂಡ ನೋಡುತ್ತಿದ್ದೇನೆ. ಕೆಲ ಅಧಿಕಾರಿಗಳು ಜೈಲಿಗೆ ಹೋಗುವ ಕಾಲ ಬರುತ್ತದೆ" ಎಂದು ಎಚ್. ಡಿ. ರೇವಣ್ಣ ಹೇಳಿದರು.
"ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಚರ್ಚೆಗೆ ಬರಲಿ. ಮಾಜಿ ಸಿಎಂ ಕುಮಾರಸ್ವಾಮಿ ಕಾಲದಲ್ಲಿ ನಾವೇನು ಮಾಡಿದ್ದೇವೆ?, ಅವರೇನು ಮಾಡಿದ್ದಾರೆ? ಎಂದು ಹೇಳಲಿ" ಎಂದು ಹಾಸನದಲ್ಲಿ ಮಾಜಿ ಸಚಿವ ರೇವಣ್ಣ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣಗೆ ಸವಾಲು ಹಾಕಿದ್ದಾರೆ.
"ಹಾಸನದಲ್ಲಿ ಸರ್ಕಾರಿ ಶಾಲೆ ಬಲಗೊಳಿಸಲು ಆಗದಿದ್ದರೆ ಹೇಳಿಬಿಡಿ. ನಾವು ಸರ್ಕಾರಿ ಶಾಲೆಗಳನ್ನು ಖಾಸಗಿ ಅವರಿಗೆ ಧಾರೆ ಎರಿತೀವಿ ಎಂದು ಹೇಳಿಬಿಡಿ" ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸಿಎಂ ಬಳಿ ಮೊನ್ನೆ ನಾನು ನನ್ನ ಸ್ವಂತ ಕೆಲಸಕ್ಕಾಗಿ ಏನೂ ಕೇಳಿಲ್ಲ. ಹಾಸನ ಜಿಲ್ಲೆಯ ಹತ್ತು ಕಾಲೇಜಿಗೆ ಪಿಜಿ ವಿಭಾಗ ಕೊಡಿ ಎಂದು ಹಿಂದೆಯೇ ತೀರ್ಮಾನ ಆಗಿತ್ತು. ಇದೇ ಆಧಾರದ ಮೇಲೆ ಹೊಳೆನರಸೀಪುರದ ಕ್ಷೇತ್ರದ 2 ಕಾಲೇಜುಗಳಿಗೆ ಪಿಜಿ ಸೆಂಟರ್ ನೀಡಲು ಮನವಿ ಮಾಡಿದ್ದೇನೆ ಅಷ್ಟೇ" ಎಂದು ರೇವಣ್ಣ ಸ್ಪಷ್ಟಪಡಿಸಿದರು.
"ಈ ಬಗ್ಗೆ ವಿವಿ, ಇಲಾಖೆಯ ಕಾರ್ಯದರ್ಶಿಯೂ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ನನ್ನ ಕ್ಷೇತ್ರದ 2 ಕಾಲೇಜಿಗೆ ಪಿಜಿ ಸೆಂಟರ್ ಕೇಳಿದ್ದೇನೆ. ರಾಜ್ಯ ಸರ್ಕಾರದ ಬಳಿ ನಾನು ಯಾವುದೇ ಅನುದಾನ ಕೇಳುತ್ತಿಲ್ಲ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ನಾನೇ ಸಂಬಳ ಕೊಡುತ್ತೇನೆ" ಎಂದು ಪರೋಕ್ಷವಾಗಿ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದರು.
"ಶುಕ್ರವಾರ ಕುಳಿತು ಮಾತನಾಡೊಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಡದಿದ್ದರೆ ಹೋಗಲಿ, ಇನ್ನೊಂದು ವರ್ಷ ಬಿದ್ದಿರುತ್ತ ಬಿದ್ದಿರಲಿ ಬಿಡಿ. ಇಲ್ಲಿವರೆಗೆ ನಾವು ತಾಳ್ಮೆಯಿಂದ ಕೇಳಿದ್ದೀವಿ. ದೇವೇಗೌಡರ ಜೊತೆಯೂ ದೀರ್ಘವಾಗಿ ಈ ಬಗ್ಗೆ ಮಾತಾಡಿದ್ದೇನೆ. ಹೌದು ಹೊಳೆನರಸೀಪುರದಲ್ಲಿ ಎಂಟು ಕಾಲೇಜು ಮಾಡಿದೀನಿ. ಹುಡುಗರು ಇದ್ದಾರೆ ಮಾಡಿದೀನಿ, ಅವೇನು ಖಾಲಿ ಇದ್ದಾವೆಯೇ?" ಎಂದು ಸಚಿವರಿಗೆ ರೇವಣ್ಣ ಟಾಂಗ್ ನೀಡಿದ್ದಾರೆ.
"ಎಲ್ಲಿ ಕೆಲಸ ಮಾಡಬೇಕೋ ಅದನ್ನು ಬಿಟ್ಟು ಬೇರೆಲ್ಲೋ ಮಾಡುತ್ತಾರೆ. ಹಾಸನ ನೀರಾವರಿ ಇಲಾಖೆಯಲ್ಲಿ ಇಬ್ಬರು ಇಂಜಿನಿಯರ್ಗಳಿದ್ದಾರೆ. ಇಂಜಿನಿಯರ್ಗಳೇ ಬಿಲ್ಗಳನ್ನು ಬರೆದುಕೊಳ್ಳುತ್ತಾರೆ. ಅಟೆಂಡರ್ ಕೆಲಸ ಬಿಟ್ಟು ಎಲ್ಲವನ್ನೂ ಅವರೇ ಮಾಡಿಬಿಡುತ್ತಾರೆ. ಆ ಮೂಲಕ ನೀರಾವರಿ ಇಲಾಖೆಯಲ್ಲಿ ಬೋಗಸ್ ಬಿಲ್ ತಯಾರಿಸುತ್ತಾರೆ" ಎಂದು ರೇವಣ್ಣ ಲೇವಡಿ ಮಾಡಿದರು.












Click it and Unblock the Notifications