ಹಾಸನ: ಗೊಮ್ಮಟೇಶ್ವರ ಮೂರ್ತಿ ಇರುವ ವಿಂಧ್ಯಾಗಿರಿ ಬೆಟ್ಟದ ಕೋಟೆ ಕುಸಿತ
ಹಾಸನ, ಆಗಸ್ಟ್, 03: ಹಾಸನ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯ ಬಯಲು ಸೀಮೆ ತಾಲೂಕಿನಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ಅನೇಕ ಕೆರೆಗಳು ತುಂಬಿ ಕೋಡಿ ಬಿದ್ದಿದ್ದು, ರಸ್ತೆಗಳು ಕೊಚ್ಚಿಹೋಗಿವೆ. ವಿಶ್ವ ವಿಖ್ಯಾತ ಶ್ರವಣಬೆಳಗೋಳ ಗೊಮ್ಮಟೇಶ್ವರ ಮೂರ್ತಿ ಇರುವ ವಿಂಧ್ಯಾಗಿರಿ ಬೆಟ್ಟದ ಕೋಟೆ ಕುಸಿತವಾಗಿದೆ.
ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಳೆ ಮುಂದುವರೆದಿದ್ದು, ಬಯಲುಸೀಮೆ ತಾಲೂಕಿನಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಹಾಮಳೆ ಸಾಕಷ್ಟು ಅನಾಹುತಗಳನ್ನು ಉಂಟುಮಾಡಿದೆ. ಅರಕಲಗೂಡು, ಹಾಸನ, ಚನ್ನರಾಯಪಟ್ಟಣ, ಅರಸೀಕೆರೆ ತಾಲೂಕಿನಲ್ಲಿ ವರುಣ ಆರ್ಭಟಿಸಿದ್ದು, ಕೆರೆಗಳು ತುಂಬಿ ತುಳುಕುತ್ತಿವೆ. ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೋಳದಲ್ಲಿರುವ ವಿಶ್ವವಿಖ್ಯಾತ ಗೊಮ್ಮಟ್ಟೇಶ್ವರ ಮೂರ್ತಿ ಇರುವ ವಿಂಧ್ಯಾಯಗಿರಿ ಬೆಟ್ಟದ ಕೋಟೆ ಕುಸಿತಿದಿದೆ. ಬೆಟ್ಟದ ಮೇಲಿರುವ ಭಾರಿ ಗಾತ್ರದ ಬಂಡೆಗಳು ಮತ್ತು ಕೋಟೆಗೆ ಬಳಸಿದ್ದ ಕಲ್ಲುಗಳು ಕೆಳಗೆ ಉರುಳುತ್ತಿವೆ. ಮತ್ತೆ ಮಳೆ ಹೆಚ್ಚಾದರೆ ಕೋಟೆ ಮತ್ತಷ್ಟು ಕುಸಿಯುವ ಹಂತದಲ್ಲಿದ್ದು, ಅಲ್ಲಿನ ಜನರಿಗೆ ಆತಂಕ ಶುರುವಾಗಿದೆ.

ಸ್ಥಳಕ್ಕೆ ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದು ತುಂಬಾ ಹೊತ್ತಾದರೂ ಕೂಡ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಕೇವಲ ಕಾನೂನು ನೋಡುತ್ತಾ ಕುಳಿತುಕೊಂಡರೆ ಅನಾಹುತ ತಪ್ಪಿಸಲು ಸಾಧ್ಯವಿಲ್ಲ. ಪುರಾತತ್ವ ಇಲಾಖೆಯವರು ಕೂಡಲೇ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು ಶ್ರವಣಬೆಳಗೊಳದ ಗೊಮ್ಮಟ ಮೂರ್ತಿ ವೀಕ್ಷಣೆಗೆ ಆಗಮಿಸುತ್ತಾರೆ. ಬೆಟ್ಟದ ತಪ್ಪಲಿನಲ್ಲೂ ಅನೇಕ ಮನೆಗಳಿವೆ. ಈ ಅನಾಹುತಕ್ಕೆ ಪುರಾತತ್ವ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ಹೊರಹಾಕಿದರು. ಜಿಲ್ಲೆಯ ಮಲೆನಾಡು ತಾಲೂಕುಗಳಾದ ಸಕಲೇಶಪುರ, ಬೇಲೂರು, ಆಲೂರಿನಲ್ಲಿ ನಿರಂತರ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಗಳು ನೆಲಕಚ್ಚಿವೆ.

ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದ್ದು, ಇದರ ಎಫೆಕ್ಟ್ ವಿಶ್ವ ಪ್ರಸಿದ್ಧ ಗೊಮ್ಮಟೇಶ್ವರನ ಏಕಶಿಲಾ ವಿಗ್ರಹವಿರುವ ವಿಂದ್ಯಾಗಿರಿ ಬೆಟ್ಟಕ್ಕೂ ತಟ್ಟಿದೆ. ಆದ್ದರಿಂದ ಬೆಟ್ಟದಲ್ಲಿ ಕೂಡಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪ್ರವಾಸಿ ತಾಣವನ್ನು ರಕ್ಷಣೆ ಮಾಡಬೇಕು ಎಂದು ಅಲ್ಲಿನ ಸ್ಥಳಿಯರ ಆಗ್ರಹವಾಗಿದೆ.












Click it and Unblock the Notifications