ಕೊನೆಗೂ ಹಾಸನ-ಬೆಂಗಳೂರು ರೈಲು ಸಂಚಾರಕ್ಕೆ ಮಹೂರ್ತ ಫಿಕ್ಸ್
ಹಾಸನ, ಮಾರ್ಚ್ 24 : ಕೊನೆಗೂ ಹಾಸನ-ಯಶವಂತಪುರ(ಬೆಂಗಳೂರು) ರೈಲ್ವೆ ಸಂಚಾರ ಪ್ರಾರಂಭಕ್ಕೆ ಮಹೂರ್ತ ನಿಗದಿಯಾಗಿದೆ.
ಮಾರ್ಚ್ 26ರಂದು ಬೆಳಿಗ್ಗೆ 11 ಗಂಟೆಗೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರೇಷ್ಮೆ ಮತ್ತು ಪಶುಸಂಗೋಪನಾ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ಈ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಬೆಂಗಳೂರು-ಯಶವಂತಪುರ ನಡುವೆ ಪ್ರತಿದಿನ 22679/22680 ಸಂಖ್ಯೆಯ ಸೂಪರ್ ಫಾಸ್ಟ್ ರೈಲು ಸಂಚರಿಸಲಿದೆ. ಮಾರ್ಚ್ 27 ರಿಂದ ದೈನಂದಿನ ರೈಲು ಸಂಚಾರ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.
ಈ ರೈಲು ಚನ್ನರಾಯಪಟ್ಟಣ, ಶ್ರವಣ ಬೆಳಗೊಳ, ಬಿ.ಜಿ.ನಗರ, ಯಡಿಯೂರು, ಕುಣಿಗಲ್, ನೆಲಮಂಗಲ ಮತ್ತು ಚಿಕ್ಕಬಾಣಾವರಗಳಲ್ಲಿ ರೈಲು ನಿಲುಗಡೆ ಆಗಲಿದೆ.
22680 ಹಾಸನ-ಯಶವಂತಪುರ ಸೂಪರ್ ಫಾಸ್ಟ್ ರೈಲು ಹಾಸನದಿಂದ ಬೆಳಿಗ್ಗೆ 6.30ಕ್ಕೆ ಹೊರಟು 9.15ಕ್ಕೆ ಯಶವಂತಪುರ ತಲುಪಲಿದೆ.
ಈ ರೈಲು ಬೆಳಿಗ್ಗೆ 6.58ಕ್ಕೆ ಚನ್ನರಾಯಪಟ್ಟಣ, ಬೆಳಿಗ್ಗೆ 7.02ಕ್ಕೆ ಶ್ರವಣಬೆಳಗೊಳ, 7.34ಕ್ಕೆ ಬಿ.ಜಿ.ನಗರ, ಬೆಳಗ್ಗೆ 7.42ಕ್ಕೆ ಯಡಿಯೂರು, 8.02ಕ್ಕೆ ಕುಣಿಗಲ್, 8.44ಕ್ಕೆ ನೆಲಮಂಗಲ 8.58ಕ್ಕೆ ಚಿಕ್ಕಬಾಣಾವರ ತಲುಪಲಿದೆ.
ಇದೇ ರೀತಿ 22679 ಸಂಖ್ಯೆ ಎಕ್ಸ್ಪ್ರೆಸ್ ರೈಲು ಯಶವಂತಪುರದಿಂದ ಸಂಜೆ 6.15ಕ್ಕೆ ಹೊರಟು 6.24ಕ್ಕೆ ಚಿಕ್ಕಬಾಣಾವರ, 6.36ಕ್ಕೆ ನೆಲಮಂಗಲ, ಸಂಜೆ 7.13ಕ್ಕೆ ಕುಣಿಗಲ್, 7.28ಕ್ಕೆ ಯಡಿಯೂರು, 7.30ಕ್ಕೆ ಬಿ.ಜಿ.ನಗರ, 8.09ಕ್ಕೆ ಶ್ರವಣಬೆಳಗೊಳ ರಾತ್ರಿ 8.18ಕ್ಕೆ ಚನ್ನರಾಯಪಟ್ಟಣ ಹಾಗೂ ರಾತ್ರಿ 9ಕ್ಕೆ ಹಾಸನ ತಲುಪಲಿದೆ.
ಈ ರೈಲು 14 ಬೋಗಿಗಳನ್ನು ಒಳಗೊಂಡಿದ್ದು ಇದರಲ್ಲಿ 4 ಎರಡನೇ ದರ್ಜೆ ಚೇರ್ ಕಾರ್, 8 ದೀನದಯಾಳು ಕೋಚ್ ಗಳು, 2 ಸೆಕೆಂಡ್ ಕ್ಲಾಸ್ ಲಗೇಜ್ ಹಾಗೂ ವಿಕಲ ಚೇತನ ಕೋಚ್ ಗಳು ಇರಲಿವೆ ಎಂದು ಹುಬ್ಬಳ್ಳಿ ವಲಯದ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications